
ಕುಣಿಗಲ್: ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಆಲ್ಕೆರೆ ಹೊಸಹಳ್ಳಿ ಗ್ರಾಮಸ್ಥರು ಗುರುವಾರ ಹೊರಬೀಡು ಆಚರಣೆ ಮಾಡಿದರು.
60 ವರ್ಷಗಳ ಹಿಂದೆ ಪ್ಲೇಗ್ ಹೊಡೆತದಿಂದಾಗಿ ಗ್ರಾಮದಲ್ಲಿ ಮೃತರ ಸಂಖ್ಯೆ ಹೆಚ್ಚಾದ ಕಾರಣ ಹೊರಬೀಡು ಆಚರಣೆ ಮಾಡಲಾಗಿತ್ತು. 2024-25ನೇ ಸಾಲಿನಲ್ಲಿ ಗ್ರಾಮದಲ್ಲಿ 35 ಮಂದಿ ಅಕಾಲಿಕ ಮರಣಹೊಂದಿದ ಕಾರಣ ಗ್ರಾಮಸ್ಥರು ಚರ್ಚಿಸಿ ಮತ್ತೆ ಹೊರಬೀಡಿನ ಆಚರಣೆ ಮುಂದುವರೆಸಲು ನಿರ್ಣಯ ಕೈಗೊಂಡು ಕಳೆದ ವರ್ಷ ಹೊರಬೀಡು ಆಚರಣೆ ಮಾಡಿದ ನಂತರ ಗ್ರಾಮದಲ್ಲಿ ಅಕಾಲಿಕ ಸಾವಿನ ಸಂಖ್ಯೆ ಕಡಿಮೆಯಾಗಿತ್ತು. 2026ಕ್ಕೂ ಅದನ್ನು ಮುಂದುವರೆಸಲಾಗಿದೆ ಎಂದು ಗ್ರಾಮದ ಕುಮಾರ್ ತಿಳಿಸಿದ್ದಾರೆ.
ಹೊರಬೀಡು ಆಚರಣೆ ಅಂಗವಾಗಿ ಗ್ರಾಮದ 350 ಮನೆಯವರು ತಮ್ಮ ಕುಟುಂಬವರ್ಗದವರನ್ನು, ಸಾಕು ಪ್ರಾಣಿಗಳನ್ನು ಮತ್ತು ಗ್ರಾಮದ ದೇವತೆಗಳಾದ ಪಟ್ಟಾಲದಮ್ಮ, ಲಕ್ಷ್ಮೀದೇವಿಯನ್ನು ಕರೆದುಕೊಂಡು ಗ್ರಾಮದ ಹೊರವಲಯಕ್ಕೆ ಬಂದು ಬೀಡು ಬಿಟ್ಟಿದ್ದಾರೆ. ಗ್ರಾಮಕ್ಕೆ ಯಾರೂ ಪ್ರವೇಶ ಮಾಡದಂತೆ ನಾಲ್ಕು ದಿಕ್ಕುಗಳಿಗೆ ಮುಳ್ಳು ಬೇಲಿ ನಿರ್ಮಿಸಿದ್ದಾರೆ.
ಹೊರಬೀಡು ಬಿಟ್ಟಿರುವ ಗ್ರಾಮಸ್ಥರು ಮೊದಲೆಲ್ಲ ಒಂದೆಡೆ ಸೇರಿ ಸಾಮೂಹಿಕವಾಗಿ ಅಡುಗೆ ಮಾಡಿ ಸವಿಯುತ್ತಿದ್ದರು. ಈಗ ತಮ್ಮ ಅನುಕೂಲಕ್ಕೆ ತಕ್ಕಂತೆ ಗ್ರಾಮದ ಹೊರಭಾಗದ ತೋಟಗಳಲ್ಲಿ ಬೀಡಿಬಿಟ್ಟು ಅಡುಗೆ ಸಿದ್ಧಪಡಿಸಿಕೊಂಡಿದ್ದಾರೆ.
ಸಂಜೆಯಾಗುತ್ತಿದ್ದಂತೆ ದೇವತೆಗಳ ಉತ್ಸವದ ಮೂಲಕ ಗ್ರಾಮ ಪ್ರವೇಶಿಸಿ, ದೇವರನ್ನು ದೇವಾಲಯಕ್ಕೆ ಸೇರಿಸಿ ಮನೆಗಳಿಗೆ ಪ್ರವೇಶ ಮಾಡುವುದಾಗಿ ಪಟಲದಮ್ಮ ದೇವಾಲಯ ಸಮಿತಿ ಕಾರ್ಯದರ್ಶಿ ಗೊವಿಂದಯ್ಯ ತಿಳಿಸಿದ್ದಾರೆ.
ಗ್ರಾಮದ ಶಂಕರಪ್ಪ, ಅರ್ಚಕ ನಾಗರಾಜ್ ದೀಕ್ಷಿತ್, ಹರೀಶ್ ದೀಕ್ಷಿತ್, ತಿಮ್ಮೆಗೌಡ ರಂಗಸ್ವಾಮಯ್ಯ, ಕೃಷ್ಣಪ್ಪ, ಜಯಮ್ಮ, ಲಕ್ಷ್ಮೀದೇವಮ್ಮ ನೇತೃತ್ವದಲ್ಲಿ ಹೊರಬೀಡು ಆಚರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.