ADVERTISEMENT

ಶಿರಾ: ಹುಲಿಕುಂಟೆ ಹೋಬಳಿಗೆ ನೀರು ಹರಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 6:04 IST
Last Updated 9 ಡಿಸೆಂಬರ್ 2025, 6:04 IST
ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಹುಲಿಕುಂಟೆ ಹೋಬಳಿ ನೀರಾವರಿ ಜಾಗೃತಿ ಸಮಿತಿಯಿಂದ ಮನವಿ ಸಲ್ಲಿಸಲಾಯಿತು
ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಹುಲಿಕುಂಟೆ ಹೋಬಳಿ ನೀರಾವರಿ ಜಾಗೃತಿ ಸಮಿತಿಯಿಂದ ಮನವಿ ಸಲ್ಲಿಸಲಾಯಿತು   

ಶಿರಾ: ತಾಲ್ಲೂಕಿನ ಹುಲಿಕುಂಟೆ ಹೋಬಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಮದಲೂರು ಕೆರೆಯಲ್ಲಿ ಸೋಮವಾರ ನಡೆದ ತೆಪ್ಪೋತ್ಸವದ ಸಮಯದಲ್ಲಿ ಹುಲಿಕುಂಟೆ ಹೋಬಳಿ ನೀರಾವರಿ ಜಾಗೃತಿ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.

ಹುಲಿಕುಂಟೆ ಹೋಬಳಿಯು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದೆ. ಈ ವರ್ಷ ಮಳೆ ಬಾರದೆ ಪ್ರತೀ ವರ್ಷದಂತೆ ಬರದ ಛಾಯೆ ಕಾಣುತ್ತಿದೆ. ಅಂತರ್ಜಲದ ಮಟ್ಟ ಪಾತಾಳಕ್ಕೆ ಕುಸಿದಿದ್ದು ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಲಭ್ಯತೆ ಕಡಿಮೆಯಾಗಿದೆ. ಹೋಬಳಿಯ ಕೆರೆಗಳು ನೀರಿಲ್ಲದೆ ಒಣಗಿದೆ. ಉಷ್ಣಾಂಶ ಹೆಚ್ಚಾದ ಪರಿಣಾಮ ದಾಳಿಂಬೆ, ಅಡಿಕೆ, ತೆಂಗು, ಹತ್ತಿ ಬೆಳೆಗಳ ಇಳುವರಿ ಕಡಿಮೆಯಾಗುತ್ತಿದೆ. ಆದ್ದರಿಂದ ಮದಲೂರು ಕೆರೆ ತುಂಬಿ ಕೋಡಿ ಬಿದ್ದ ನೀರನ್ನು ಹುಲಿಕುಂಟೆ ಹೋಬಳಿಯ ಕೆರೆಗಳಿಗೆ ತುಂಬಿಸುವಂತೆ ಮನವಿ ಮಾಡಿದ್ದಾರೆ.

ಮದಲೂರು ಕೆರೆಯ ಮೂಲಕ ಹುಳಿಗೆರೆ, ಅರಿಯಜ್ಜಿಹಳ್ಳಿ ಮೂಲಕ ರಾಗಲಹಳ್ಳಿ, ಕರೇಕ್ಯಾತನಹಳ್ಳಿ, ಹಂದಿಕುಂಟೆ, ಬರಗೂರು, ಚಿಕ್ಕಬಾಣಗೆರೆ ಕೆರೆಯಿಂದ ದೊಡ್ಡಬಾಣಗೆರೆ ಕೆರೆಯವರೆಗೆ ನೈಸರ್ಗಿಕ ಹಳ್ಳದ ಮೂಲಕ ನೀರು ಹರಿಸಲು ನಾಲಾ ಕಾರ್ಯವನ್ನು ಕೈಗೊಳ್ಳಲು ತಜ್ಞರನ್ನು ಕರೆಸಿ ಸ್ಥಳ ಪರಿಶೀಲಿಸಿ ಉಳಿದ ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿಸಿ ಕೆರೆ ತುಂಬಿಸಲು ಕೋರಿದ್ದಾರೆ.

ADVERTISEMENT

ಭದ್ರಾಮೇಲ್ದಂಡೆ ಯೋಜನೆಯ ಕಾಮಗಾರಿ ಹೊಸದುರ್ಗ, ಚಿಕ್ಕನಾಯಕನಹಳ್ಳಿ, ಬುಕ್ಕಾಪಟ್ಟಣ ಹಾಗೂ ಶಿರಾ ಭಾಗದಲ್ಲಿ ಕುಂಟುತ್ತಾ ಸಾಗುತ್ತಿದೆ. ಭದ್ರಾ ನೀರು ಬರುವಿಕೆ ಕನಸಾಗೆ ಉಳಿಯುವುದು ಎಂಬ ಆತಂಕದಲ್ಲಿ ಜನರಿದ್ದಾರೆ. ಆದ್ದರಿಂದ ಕಾಮಗಾರಿಯನ್ನು ತ್ವರಿತಗೊಳಿಸಿ ಶೀಘ್ರವಾಗಿ ಈ ಭಾಗದ ಕೆರೆಗಳಿಗೆ ಭದ್ರಾ ಮೇಲ್ದಂಡೆ ನೀರನ್ನು ಹರಿಸುವಂತೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.