ಶಿರಾ: ಪ್ರತಿ ಮನೆಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಮನೆಗಳೇ ಇಲ್ಲದ ಕಡೆ ನಲ್ಲಿ ಹಾಕಿರುವುದು ಚರ್ಚೆಗೆ ಕಾರಣವಾಗಿದ್ದು, ಮನೆಗೆ ಇಲ್ಲದ ನಲ್ಲಿ ಜಮೀನಿಗೆ ಎನ್ನುವಂತಾಗಿದೆ.
ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿ ಹೊಸಮಲ್ಲನಹಳ್ಳಿ ಗ್ರಾಮದಲ್ಲಿ ಮನೆಗಳೇ ಇಲ್ಲದ ಕಡೆ ಜಮೀನಿನಲ್ಲಿ ಹಾಕಿ ಸರ್ಕಾರದ ಹಣವನ್ನು ಪೋಲು ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಜಲಜೀವನ್ ಯೋಜನೆಯಲ್ಲಿ ಮನೆಗಳಿಗೆ ಕುಡಿಯುವ ನೀರು ಕೊಡಲು ಅವಕಾಶವಿದೆ. ಆದರೆ ಪ್ರಭಾವಿಗಳ ಒತ್ತಡಕ್ಕೆ ಮಣಿದಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಜಮೀನಿಗೆ ನೀರು ಕೊಡಲು ಹೊರಟಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ.
ಸಮೀಪದಲ್ಲಿ ಎಲ್ಲಿಯೂ ಮನೆಗಳು ಇಲ್ಲದಿದ್ದರೂ ಜಮೀನಿನಲ್ಲಿ ನಲ್ಲಿ ಏಕೆ ಹಾಕಿದ್ದಾರೆ. ರಸ್ತೆ ಬದಿ ಹಾಕುವಂತಿದ್ದರೆ, ಬೇರೆ ಕಡೆ ಏಕೆ ಹಾಕಿಲ್ಲ ಎನ್ನುವುದು ಸ್ಥಳೀಯರ ಪ್ರಶ್ನೆ.
ಜಲಜೀವನ್ ಯೋಜನೆಯಲ್ಲಿ ಕಳಪೆ ಕಾಮಗಾರಿ ಬಗ್ಗೆ ಕೆಲವೆಡೆ ದೂರು ಬಂದರೆ ಮತ್ತೆ ಕೆಲವೆಡೆ ಅವಶ್ಯಕತೆ ಇಲ್ಲದಿದ್ದರೂ ಇಷ್ಟ ಬಂದಂತೆ ನಲ್ಲಿಗಳನ್ನು ಹಾಕಿದ್ದಾರೆ.
ಸೂಕ್ತವಲ್ಲದ ಸ್ಥಳಗಳಲ್ಲಿ ವೈಜ್ಞಾನಿಕವಾಗಿ ಹಾಕದ ನಲ್ಲಿಗಳನ್ನು ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.