ಶಿರಾ: ‘ಜೆಡಿಎಸ್ ವರಿಷ್ಠಎಚ್.ಡಿ.ದೇವೇಗೌಡ ಅವರು ಶಿರಾ ಕ್ಷೇತ್ರವನ್ನು ದತ್ತು ಪಡೆದಿದ್ದು, ಕ್ಷೇತ್ರದ ಅಭಿವೃದ್ದಿಯ ಜವಾಬ್ದಾರಿಯನ್ನು ನಾನು ಮತ್ತು ಎಚ್.ಡಿ.ರೇವಣ್ಣ ವಹಿಸಿಕೊಂಡಿದ್ದೇವೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರದ ಆವರಣದಲ್ಲಿ ಭಾನುವಾರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
‘ಶಿರಾ ಕ್ಷೇತ್ರದ ಜತೆ ನಮ್ಮ ಕುಟುಂಬ ಅವಿನಾಭಾವ ಸಂಬಂಧ ಹೊಂದಿದೆ. ನಿಮ್ಮ ಪ್ರೀತಿಯನ್ನು ನಾವು ಮರೆಯುವುದಿಲ್ಲ. ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರನ್ನು ಗೆಲ್ಲಿಸಿ ನಾವು ತಿಂಗಳಿಗೆ ಒಂದು ಬಾರಿ ಬಂದು ನಿಮ್ಮ ನೋವನ್ನು ಕೇಳಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದರು.
ಮುಖ್ಯಮಂತ್ರಿ ಹೇಳಿದಂತೆ 6 ತಿಂಗಳಲ್ಲಿ ಮದಲೂರು ಕೆರೆಗೆ ನೀರು ಹರಿಸದಿದ್ದರೆ, ಶಿರಾದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುವುದು ಎಂದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಾತನಾಡಿ, ‘ಜೀವನದ ಕೊನೆಯ ಹೋರಾಟದಲ್ಲಿ ನಾನು ಯಾರಿಗೂ ಅನ್ಯಾಯ ಮಾಡದಿದ್ದರು ತುಮಕೂರಿನಲ್ಲಿ ನನ್ನನ್ನು ಸೋಲಿಸಲಾಯಿತು. ಅದಕ್ಕೆ ನಾನೇ ಕಾರಣ ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಧರ್ಮ ಯುದ್ದ ನಡೆಸಿ ರಾಜ್ಯದಲ್ಲಿ ಮತ್ತೇ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ.ಜೆಡಿಎಸ್ ಬಗ್ಗೆ ಎರಡು ಪಕ್ಷಗಳು ಅಪಪ್ರಚಾರ ನಡೆಸುತ್ತಿವೆ’ ಎಂದರು.
ರೋಡ್ ಷೊ: ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರು ರೋಡ್ ಷೊ ನಡೆಸಿ ಮತಯಾಚಣೆ ಮಾಡಿದರು.
ಜೆಡಿಎಸ್ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಶಾಸಕರಾದ ಎಚ್.ಡಿ.ರೇವಣ್ಣ, ಬಂಡೆಪ್ಪ ಕಾಶೆಂಪೂರ್, ಡಾ.ಶ್ರೀನಿವಾಸಮೂರ್ತಿ, ಮಂಜುನಾಥ್, ಶಾಸಕ ಗೌರಿಶಂಕರ್, ವೀರಭದ್ರಯ್ಯ, ವೈ.ಎಸ್.ವಿ.ದತ್ತ, ಸುರೇಶ್ ಬಾಬು, ಸುಧಾಕರ್ ಲಾಲು, ಎಂ.ಟಿ.ಕೃಷ್ಣಪ್ಪ, ನಿಂಗಪ್ಪ, ನಬಿ, ವಿಧಾನ ಪರಿಷತ್ತು ಸದಸ್ಯ ತಿಪ್ಪೇಸ್ವಾಮಿ, ತಾಲ್ಲೂಕು ಅಧ್ಯಕ್ಷ ಆರ್.ಉಗ್ರೇಶ್, ಸಿ.ಆರ್.ಉಮೇಶ್, ಜಿ.ಪಂ ಸದಸ್ಯ ರಾಮಕೃಷ್ಣ, ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ, ಸೀಗಲಹಳ್ಳಿ ವೀರೇಂದ್ರ, ಸತ್ಯಪ್ರಕಾಶ್, ಇಮ್ರಾನ್ ಪಾಷ, ಕೋಟೆ ಮಹದೇವ್, ಮೂಡಲಗಿರಿಯಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.