ADVERTISEMENT

ತುಮಕೂರು: ನಾಳೆಯಿಂದ 17ನೇ ಕನ್ನಡ ಸಾಹಿತ್ಯ ಸಮ್ಮೇಳನ

ಮಕ್ಕಳ ಗೋಷ್ಠಿ ಸೇರಿ 7 ಗೋಷ್ಠಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 3:07 IST
Last Updated 28 ಡಿಸೆಂಬರ್ 2025, 3:07 IST
<div class="paragraphs"><p>ತುಮಕೂರಿನಲ್ಲಿ ಶನಿವಾರ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಮಹಿಳೆಯರ ಬೈಕ್‌ ರ್‍ಯಾಲಿ ನಡೆಯಿತು</p></div>

ತುಮಕೂರಿನಲ್ಲಿ ಶನಿವಾರ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಮಹಿಳೆಯರ ಬೈಕ್‌ ರ್‍ಯಾಲಿ ನಡೆಯಿತು

   

ತುಮಕೂರು: 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಆರಂಭವಾಗಿದೆ. ನಗರದ ಅಮಾನಿಕೆರೆ ಗಾಜಿನಮನೆಯಲ್ಲಿ ಡಿ. 29 ಹಾಗೂ 30ರಂದು ವಿವಿಧ ವಿಚಾರ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಗಾಜಿನಮನೆಯಲ್ಲಿ ವೇದಿಕೆ, ಆಸನಗಳ ವ್ಯವಸ್ಥೆ ಸೇರಿ ಅಗತ್ಯ ಪೂರ್ವ ತಯಾರಿ ಕೆಲಸಗಳು ಭರದಿಂದ ಸಾಗಿವೆ. ಮಕ್ಕಳ ಗೋಷ್ಠಿ, ಸಮ್ಮೇಳನಾಧ್ಯಕ್ಷರ ಜತೆ ಸಂವಾದ, ತುಮಕೂರು ನೆಲದ ಧಾರ್ಮಿಕ ಪರಂಪರೆ, ಕವಿಗೋಷ್ಠಿ ಒಳಗೊಂಡಂತೆ ಒಟ್ಟು 7 ಗೋಷ್ಠಿಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.

ADVERTISEMENT

‘ಸಾಹಿತಿ ಕರೀಗೌಡ ಬೀಚನಹಳ್ಳಿ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಶಾಸಕ ಟಿ.ಬಿ.ಜಯಚಂದ್ರ, ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಮೊದಲಾದವರು ಭಾಗವಹಿಸಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಇಲ್ಲಿ ಶನಿವಾರ ಹೇಳಿದರು.

29ರಂದು ಮಧ್ಯಾಹ್ನ 2 ಗಂಟೆಗೆ ‘ದಲಿತ ಸಾಹಿತ್ಯ ಐವತ್ತು– ಬಂಡಾಯ ನಲವತ್ತಾರು’ ಗೋಷ್ಠಿ ಏರ್ಪಡಿಸಲಾಗಿದೆ. ಮುಖಂಡ ಕೊಟ್ಟಶಂಕರ್‌, ನಿವೃತ್ತ ಪ್ರಾಧ್ಯಾಪಕಿ ಬಿ.ಎಸ್‌.ಮಂಜುಳಾ, ವಿಮರ್ಶಕ ರವಿಕುಮಾರ್‌ ನೀಹ ವಿಷಯ ಮಂಡಿಸಲಿದ್ದಾರೆ. ಕಥೆಗಾರ ತುಂಬಾಡಿ ರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. 30ರಂದು ಬೆಳಿಗ್ಗೆ 9 ಗಂಟೆಗೆ ನಡೆಯುವ ಮಕ್ಕಳ ಗೋಷ್ಠಿಯಲ್ಲಿ ‘ಕನ್ನಡ ಉಳಿಸುವಲ್ಲಿ ಕನ್ನಡಿಗರ ಪಾತ್ರ’, ‘ಮಕ್ಕಳಿಗೆ ಅಜ್ಜ, ಅಜ್ಜಿಯರ ಅವಶ್ಯಕತೆ’, ‘ಮಕ್ಕಳಿಗೆ ಮೊಬೈಲ್‌ ಬೇಕೇ?’ ಎಂಬ ವಿಚಾರಗಳ ಕುರಿತು ಮಕ್ಕಳು ಮಾತನಾಡಲಿದ್ದಾರೆ ಎಂದರು.

‘30 ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಎರಡು ದಿನ 3 ಸಾವಿರದಿಂದ 4 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಶಿಕ್ಷಕರಿಗೆ ರಜೆ ನೀಡಲಾಗಿದೆ. ಹೆಸರಾಂತ ಸಾಹಿತಿ, ಕವಿ, ಕಥೆಗಾರರನ್ನು ಒಂದು ವೇದಿಕೆಗೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಗೌರವ ಕಾರ್ಯದರ್ಶಿ ಡಿ.ಎನ್‌.ಯೋಗೀಶ್ವರಪ್ಪ ಹಾಜರಿದ್ದರು.

ಗಮನ ಸೆಳೆದ ಮಹಿಳೆಯರ ಬೈಕ್‌ ರ್‍ಯಾಲಿ

ತುಮಕೂರು: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನಗರದಲ್ಲಿ ಶನಿವಾರ ಮಹಿಳೆಯರ ಬೈಕ್‌ ರ್‍ಯಾಲಿ ಏರ್ಪಡಿಸಲಾಗಿತ್ತು. ಮಹಿಳೆಯರು ಕನ್ನಡದ ಬಾವುಟ ಹಿಡಿದು ನಗರದಲ್ಲಿ ಸಂಚರಿಸಿದರು.

ಅಮಾನಿಕೆರೆಯ ಗಾಜಿನಮನೆ ಬಳಿ ರ್‍ಯಾಲಿಗೆ ಚಾಲನೆ ನೀಡಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್‌.ಸಿದ್ಧಲಿಂಗಪ್ಪ ರ್‍ಯಾಲಿಗೆ ಹಸಿರು ನಿಶಾನೆ ತೋರಿದರು.

ಕೋತಿತೋಪು ಮುಖ್ಯರಸ್ತೆಯಿಂದ ಎಸ್‌.ಎಸ್‌.ವೃತ್ತ ತಲುಪಿತು. ಬಿ.ಎಚ್‌.ರಸ್ತೆ ಮೂಲಕ ಎಸ್‌ಐಟಿ ಮುಖ್ಯರಸ್ತೆಗೆ ಸಾಗಿತು. ಗಂಗೋತ್ರಿ ರಸ್ತೆ, ಸರಸ್ವತಿ ಪುರಂ, ಭದ್ರಮ್ಮ ಛತ್ರ ವೃತ್ತ ಸೇರಿತು. ಟೌನ್‌ಹಾಲ್‌ನಿಂದ ಮುಂದೆ ಸಾಗಿ ಅಶೋಕ ರಸ್ತೆ, ಸ್ವಾತಂತ್ರ್ಯ ಚೌಕದಿಂದ ಗಾಜಿನಮನೆ ಬಳಿ ಕೊನೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.