ತುರುವೇಕೆರೆ ತಾಲ್ಲೂಕು ಮಟ್ಟದ 6ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಿಂತಕ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು
ತುರುವೇಕೆರೆ: ಸಾಹಿತ್ಯ ಎಲ್ಲರನ್ನು ಆಕರ್ಷಣೆ ಮಾಡುವ ಸಂವೇದನಾಶೀಲ ಕ್ಷೇತ್ರ. ಸಮ್ಮೇಳನ ಕನ್ನಡದ ಪ್ರಜ್ಞೆ ವಿಸ್ತರಿಸುವ ಕೆಲಸ ಮಾಡಬೇಕು ಎಂದು ಚಿಂತಕ ಬರಗೂರು ರಾಮಚಂದ್ರಪ್ಪ ಹೇಳಿದರು.
ವೈಟಿ ರಸ್ತೆಯಲ್ಲಿನ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಸೋಮವಾರ ನಡೆದ ತುರುವೇಕೆರೆ ತಾಲ್ಲೂಕು ಮಟ್ಟದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.
ಆಂತರಿಕ ಒಳ ನೋಟದಲ್ಲಿ ಕನ್ನಡವನ್ನು ಬಳಸುವ, ಉಳಿಸುವ, ಬೆಳೆಸುವ ಪ್ರಜ್ಞೆ ಮುಖ್ಯ. ನೀವು ಕನ್ನಡಿಗರನ್ನು ಉಳಿಸಿದರೆ ಆ ಜನಸಮುದಾಯ ತಾನಾಗಿಯೇ ಕನ್ನಡ ಭಾಷೆ ಉಳಿಸುತ್ತಾರೆ. ಕನ್ನಡ ಓದುವ ಕಾರಣಕ್ಕಾಗಿ ಅವರು ನಿರುದ್ಯೋಗಿಗಳಾಗಂದತೆ ವ್ಯವಸ್ಥೆ ನೋಡಿಕೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯದಲ್ಲಿ ಚಿಂತನಶೀಲ ವೇದಿಕೆಯಾಗಿದ್ದ ಸೂಫಿಗಳು ಮತ್ತು ಸಂತರು ತಮ್ಮ ವೈಚಾರಿಕ ಚಿಂತನೆಗಳ ಮೂಲಕ ಸಮಾಜದಲ್ಲಿ ಮನುಷ್ಯ ಸಂಬಂಧಗಳ ಬೆಸೆಯುವ ಕೆಲಸ ಮಾಡಿದರು. ಕನ್ನಡ ಭಾಷೆ, ಸಾಹಿತ್ಯ ಜನತಾರತಮ್ಯ ಕೆರಳಿಸದೆ ಎಲ್ಲರೊಡನೆ ಸೌಹಾರ್ದ, ಸಮಾನತೆ ಉಂಟು ಮಾಡಿ ಮಾನವೀಯ ಪ್ರಜ್ಞೆಯನ್ನು ಜನರಲ್ಲಿ ಮೂಡಿಸು ಕೆಲಸ ಮಾಡಿದೆ ಎಂದರು.
ಸಮ್ಮೇಳನದಲ್ಲಿ ವೈಭವ, ಸಂಭ್ರಮವಿರಬೇಕು ನಿಜ. ಆದರೆ ವೈಭವದ ಜೊತೆಗೆ ವಿವೇಕ ಕಳೆದು ಹೋಗಬಾರದು. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿರುವ ಮೌಲ್ಯಗಳನ್ನು ಜನರಿಗೆ ತಿಳಿಸಿಕೊಡುವ ಜವಾಬ್ದಾರಿ ಎಲ್ಲ ಸಾಂಸ್ಥಿಕ ಸಂಸ್ಥೆಗಳಿಗೆ ಇದೆ ಎಂದರು.
ಕನ್ನಡಕ್ಕೆ ಎಷ್ಟೇ ಸವಾಲುಗಳಿದ್ದರೂ ಕರ್ನಾಟಕದ ಜನ ಕನ್ನಡ ಭಾಷೆ ಉಳಿಸಿಕೊಂಡು ಬಂದಿರುವುದರಿಂದ ಅದಕ್ಕೆ ತೊಡಕುಗಳಿದ್ದರೂ ಸಾವಿಲ್ಲ. ಸಾಹಿತಿಗಳು, ಬರಹಗಾರರು ಕನ್ನಡವನ್ನು ಉಳಿಸಿಕೊಳ್ಳುತ್ತಾರೋ ಗೊತ್ತಿಲ್ಲಾ. ಆದರೆ ಜನಸಾಮಾನ್ಯರು ಖಂಡಿತ ಕನ್ನಡ ಭಾಷೆ ಉಳಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ದೇಶದಲ್ಲಿ 1,073,678 ಸರ್ಕಾರಿ ಶಾಲೆಗಳಿವೆ. ಕರ್ನಾಟಕದಲ್ಲಿ 46 ಸಾವಿರಕ್ಕೂ ಹೆಚ್ಚು ಪ್ರಾಥಮಿಕ, 5 ಸಾವಿರಕ್ಕೂ ಹೆಚ್ಚು ಪ್ರೌಢಶಾಲೆಗಳಿವೆ. 1500ಕ್ಕೂ ಹೆಚ್ಚು ಕಾಲೇಜುಗಳಿವೆ. ಹೀಗಿದ್ದರೂ ಎಲ್ಲ ಸರ್ಕಾರಗಳಲ್ಲೂ ಶೈಕ್ಷಣಿಕ ಅಸಮಾನತೆ ಹೋಗಿಲ್ಲ ಎಂದರು.
ಕನ್ನಡವನ್ನು ಕಟ್ಟಿದವರು ಕೇವಲ ಒಂದು ಜಾತಿ, ಧರ್ಮದವರಲ್ಲ. ಇದು ಕನ್ನಡದ ಹಿರಿಮೆ. ಪಂಪ, ಶ್ರೀವಿಜಯ, ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಶಿಶುನಾಳ ಶರೀಫ, ಕುವೆಂಪು, ಬೇಂದ್ರೆ, ಮಹಿಳೆ, ದಲಿತರು, ಹಿಂದುಳಿದವರು ಮೇಲ್ಜಾತಿ, ಕೆಳಜಾತಿ ಎನ್ನದೆ ಸಾಕಷ್ಟು ಜನರ ಪರಿಶ್ರಮದಿಂದ ಕನ್ನಡ ಕಟ್ಟಲ್ಪಟ್ಟಿದೆ ಎಂದರು.
ಸಮ್ಮೇಳನಾಧ್ಯಕ್ಷ ಪ್ರೊ.ಸಂಪಿಗೆ ತೋಂಟಾದಾರ್ಯ ಮಾತನಾಡಿ, ಸಹೃದಯ ಸಮಾಜ ನಿರ್ಮಾಣದಲ್ಲಿ ಸಾಹಿತ್ಯ, ಕೃಷಿ, ಕಲೆ, ರಂಗಭೂಮಿ, ಶಿಕ್ಷಣ, ಭಾಷೆ ಪ್ರಾಮುಖ್ಯತೆ ವಹಿಸುತ್ತವೆ. ಅಸತ್ಯದಿಂದ ಬೆಳಕಿನೆಡೆಗೆ ಸಾಗಬೇಕು. ಪರಸ್ಪರ ದ್ವೇಷ, ಅಸೂಹೆ, ಕ್ರೌರ್ಯ ಅಳಿಯಬೇಕು ಎಂದರು.
ಬೆಳಗ್ಗೆ ರಾಷ್ಟ್ರ ದ್ವಜಾರೋಹಣವನ್ನು ತಹಶೀಲ್ದಾರ್ ಎನ್.ಎ.ಕುಂಞ.ಅಹಮದ್ ಮತ್ತು ನಾಡ ದ್ವಜಾರೋಹಣವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಎಚ್.ಸಿ.ಶೀಲಾ ನೆರವೇರಿಸಿದರು.
ಸಮ್ಮೇಳನಾಧ್ಯಕ್ಷ ಸಂಪಿಗೆ ತೋಂಟದಾರ್ಯರನ್ನು ತೆರೆದ ವಾಹನದಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ವಿವಿಧ ಜಾನಪದ ಕಲಾ ಮೇಳಗಳ ನೃತ್ಯ, ಕುಣಿತ ಹಾಗೂ ಪೂರ್ಣ ಕುಂಭ ಕಳಶ ಸಮೇತ ವೇದಿಕೆವರೆಗೆ ಮೆರವಣಿಗೆ ಮಾಡಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎನ್.ಸಿದ್ದಲಿಂಗಪ್ಪ ಆಶಯ ನುಡಿಗಳನ್ನಾಡಿದರು.
ಶಾಸಕ ಎಂ.ಟಿ.ಕೃಷ್ಣಪ್ಪ, ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿದರು. ‘ಕಲ್ಪವಿಜಯ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ವಿವಿಧ ಹಂತದಲ್ಲಿ ಮೂರು ಗೋಷ್ಠಿ ಜರುಗಿತು. ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಎಸ್ಎಸ್ಎಲ್ಸಿ ಹಾಗೂ ಪಿಯು ಪರೀಕ್ಷೆಯ ಕನ್ನಡ ಭಾಷೆಯಲ್ಲಿ 125 ಅಂಕಗಳಿಸಿದ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಐದಾರು ಲೇಖಕರ ಕೃತಿ ಬಿಡುಗಡೆ ಮಾಡಲಾಯಿತು. ಸಂಜೆ ಕಾಡಸಿದ್ದೇಶ್ವರ ಮಠದ ಶಿವಯೋಗೀಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸಮಾರೋಪ ಸಮಾರಂಭ ನಡೆಯಿತು. ಮುನಿಯೂರು ದಾಸಾಚಾರ್ ಶಿಷ್ಯರಿಂದ ದೇವಿಮಹಾತ್ಮೆ ಯಕ್ಷಗಾನ ಪ್ರದರ್ಶನ ಜರುಗಿತು.
ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ, ಜಿಲ್ಲಾ ಕಸಾಪ ಕಾರ್ಯದರ್ಶಿ ಎ.ಎನ್.ಯೋಗೀಶ್ವರಪ್ಪ, ಬೋರೇಗೌಡ, ಕೆಂಪರಾಜು, ಪರಮೇಶ್ವರ ಸ್ವಾಮಿ, ದಿನೇಶ್ ನಂ.ರಾಜುಮುನಿಯೂರು, ದೊಡ್ಡಾಘಟ್ಟ ಚಂದ್ರೇಶ್, ಎನ್.ಆರ್.ಜಯರಾಮ್, ಶ್ರೀಕಂಠೇಗೌಡ ಇದ್ದರು.
ಆಸನಗಳು ಖಾಲಿ
ಸಾಹಿತ್ಯಾಸಕ್ತರು ಇಲ್ಲದೆ ಸಮ್ಮೇಳನದ ವೇದಿಕೆ ಬಲ ಮತ್ತು ಎಡ ಭಾಗದಲ್ಲಿನ ಬಹುಪಾಲು ಆಸನಗಳು ಖಾಲಿ ಹೊಡೆಯುತ್ತಿದ್ದವು. ಪುಸ್ತಕ ಸೇರಿದಂತೆ ಸಮ್ಮೇಳನಕ್ಕೆ ಪೂರಕವಾದ ಮಳಿಗೆಗಳೇ ಇಲ್ಲವೆಂದು ಕನ್ನಡಾಭಿನಾಗಳು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.