ತುಮಕೂರು: ನಗರ ಸೇರಿದಂತೆ ಜಿಲ್ಲೆಯಾದ್ಯಂತಶನಿವಾರ ಮಧ್ಯರಾತ್ರಿ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.
ನಗರದ ಸದಾಶಿವ ನಗರ, ಜಯನಗರ, ನಜರಬಾದ್, ವೀರ್ಸಾಗರ, ಉಪ್ಪಾರಹಳ್ಳಿ ಸೇರಿಂದತೆ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿವೆ. ಮನೆಯ ನೀರನ್ನು ಹೊರಗಡೆ ಹಾಕಲು ಸಾರ್ವಜನಿಕರು ಹರಸಾಹಸಪಟ್ಟರು. ಸದಾಶಿವ ನಗರದ ಮುಖ್ಯ ರಸ್ತೆಯ ಮಳೆ ನೀರಿನಿಂದ ಜಲಾವೃತವಾಗಿತ್ತು. ರಾತ್ರಿ ಪೂರ್ತಿ ಮಳೆ ನೀರನ್ನು ಹೊರ ಹಾಕುವ ಕೆಲಸ ಮಾಡಿದರು.
ಗೂಳೂರು ಕೆರೆ, ಅಮಾನಿಕೆರೆ ಸೇರಿದಂತೆ ಪ್ರಮುಖ ಕೆರೆಗಳು ಕೋಡಿ ಹರಿದಿದ್ದು, ಭಾನುವಾರ ರಜಾ ದಿನವಾದ್ದರಿಂದ ಹೆಚ್ಚಿನ ಸಂಖ್ಯೆ ಜನರು ಕೆರೆಗಳಿಗೆ ಭೇಟಿ ನೀಡಿ, ವೀಕ್ಷಿಸಿದರು.
ನಗರದ ಎಸ್.ಎಸ್.ಪುರಂ ಬಳಿ ಇರುವ ಶೆಟ್ಟಿಹಳ್ಳಿ ರೈಲ್ವೆ ಅಂಡರ್ ಪಾಸ್ ಜಲಾವೃತವಾಗಿದೆ. ಕೆಳಸೇತುವೆ ಶೆಟ್ಟಿಹಳ್ಳಿ, ಜಯನಗರ, ಮಾರುತಿನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಮೊಣಕಾಲುದ್ದದ ನೀರಿನಲ್ಲಿಯೇ ವಾಹನ ಸವಾರರು ಸಂಚಾರ ಮಾಡಿದರು.
ಮನೆಗಳಿಗೆ ನೀರು ನುಗ್ಗಿದ ಪ್ರದೇಶಗಳಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಬಿ.ಜಿ.ಕೃಷ್ಣಪ್ಪ, ಪಾಲಿಕೆ ಆಯುಕ್ತೆ ರೇಣುಕಾ, ಉಪವಿಭಾಗಾಧಿಕಾರಿ ಅಜಯ್ ಭೇಟಿ ನೀಡಿ ಸಾರ್ವಜನಿಕರ ಸಂಕಷ್ಟ ಆಲಿಸಿದರು.
ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು
ತುಮಕೂರು: ವಿದ್ಯುತ್ ಸ್ಪರ್ಶಿಸಿ ನಗರದ ಜಯನಗರ ನಿವಾಸಿ ಕೆ.ಸಿ ವೀರಣ್ಣ (75) ಶನಿವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ.
ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ವೀರಣ್ಣ ಅವರ ಮನೆಗೆ ನೀರು ನುಗ್ಗಿದ್ದು, ಇದೇ ವೇಳೆ ಶಾರ್ಟ್ ಸರ್ಕೀಟ್ ಆಗಿದೆ. ಮನೆ ತುಂಬಾ ನೀರು ನಿಂತುಕೊಂಡಿದ್ದು, ಯುಪಿಎಸ್ ಕನೆಕ್ಟ್ ತೆಗೆಯಲು ಹೋದಾಗ ವಿದ್ಯುತ್ ಸ್ಪರ್ಶಿಸಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.