
ತುಮಕೂರು: ದಲಿತ ಸಂಘರ್ಷ ಸಮಿತಿಯ ಹೋರಾಟ ಒಳ್ಳೆಯ ದಿಕ್ಕಿನಲ್ಲಿ ಸಾಗಬೇಕು. ಬೇರೆ ಸಮುದಾಯದ ಪ್ರೀತಿ, ವಿಶ್ವಾಸ ಗಳಿಸುವ ರೀತಿಯಲ್ಲಿ ಇರಬೇಕು. ಇರುವ ಕಾಯ್ದೆ ತಿರುಚಿ ಬೇರೆಯವರ ದ್ವೇಷ ಕಟ್ಟಿಕೊಳ್ಳಬಾರದು. ಇತರರಿಗೆ ತೊಂದರೆ ಕೊಡಬಾರದು ಎಂದು ಶಾಸಕ ಕೆ.ಎನ್.ರಾಜಣ್ಣ ಸಲಹೆ ಮಾಡಿದರು.
ನಗರದಲ್ಲಿ ಭಾನುವಾರ ದಲಿತ ಸಂಘರ್ಷ ಸಮಿತಿ, ಚರಕ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿಚಾರಗೋಷ್ಠಿ, ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಮ್ಮ ಹಕ್ಕಿಗಾಗಿ ಹೋರಾಟ ನಡೆಸೋಣ. ನಮ್ಮ ಮೇಲೆ ದಬ್ಬಾಳಿಕೆ, ಹಲ್ಲೆ ನಡೆದರೆ ಎಲ್ಲರು ಒಗ್ಗಟ್ಟಾಗಿ ಸಾಗೋಣ. ಇದೇ ಸಮಯದಲ್ಲಿ ಕಾಯ್ದೆ ದುರುಪಯೋಗ ಆಗಬಾರದು. ಸ್ವಾರ್ಥಕ್ಕಾಗಿ ಬಳಸಬಾರದು. ನಾವು ಕಲಿತ ಅಕ್ಷರ ಜ್ಞಾನದ ಆಧಾರದ ಮೇಲೆ ಸಮುದಾಯಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎಂದರು.
ಇತರೆ ಸಮುದಾಯಕ್ಕಿಂತ ದಲಿತರು ಹೆಚ್ಚಾಗಿ ಹೋಮ, ಹವನ ಮಾಡಿಸುತ್ತಿದ್ದಾರೆ. ಇದು ದಸಂಸ ಉದ್ದೇಶವೇ? ಇದನ್ನು ಎಲ್ಲರು ಅರ್ಥ ಮಾಡಿಕೊಳ್ಳಬೇಕು. ಜನರಿಗೆ ವಾಸ್ತವ ಮನವರಿಕೆ ಮಾಡಿಕೊಡಬೇಕು. ಸತ್ಯ ಮರೆಮಾಚದೆ ನಿರ್ಭೀತಿಯಿಂದ ಹೇಳುವ ಪರಿಪಾಟ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಹಕಾರ ಸಂಸ್ಥೆಗಳು ಕೆಲವರ ಹಿಡಿತದಲ್ಲಿದ್ದವು. ಪಟ್ಟಭದ್ರರು ಮಾತ್ರ ಸಾಲ ಪಡೆಯುತ್ತಿದ್ದರು. ನಾನು ಸಹಕಾರ ಸಚಿವನಾಗಿದ್ದಾಗ ಹಲವು ತಿದ್ದುಪಡಿ ಮಾಡಿ, ಎಲ್ಲ ವರ್ಗಗಳಿಗೂ ಅವಕಾಶ ಕಲ್ಪಿಸಲಾಯಿತು. ಗ್ರಾಮ ಪಂಚಾಯಿತಿ ಮಾದರಿಯಲ್ಲಿ ಸಹಕಾರ ಸಂಘ, ಹಾಲು ಉತ್ಪಾದಕರ ಒಕ್ಕೂಟಗಳಲ್ಲಿ ಮೀಸಲಾತಿ ಜಾರಿಗೆ ಕಾಯ್ದೆ ರೂಪಿಸಲಾಗಿದೆ. ಇದು ಹೆಚ್ಚು ಅನುಷ್ಠಾನ ಆಗಬೇಕು ಎಂದು ತಿಳಿಸಿದರು.
ಕಥೆಗಾರ ತುಂಬಾಡಿ ರಾಮಯ್ಯ, ಮುಖಂಡ ಕುಂದೂರು ತಿಮ್ಮಯ್ಯ, ಪಿಯುಸಿಎಲ್ ಅಧ್ಯಕ್ಷ ಕೆ.ದೊರೈರಾಜ್ ಅವರನ್ನು ಅಭಿನಂದಿಸಲಾಯಿತು. ಪತ್ರಕರ್ತ ದಿನೇಶ್ ಅಮೀನ್ ಮಟ್ಟು ‘ಸಮಕಾಲೀನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ತಲ್ಲಣಗಳು’, ರವಿಕುಮಾರ್ ಬಾಗಿ ‘ದಲಿತ ಚಳವಳಿಯ ಸವಾಲು ಮತ್ತು ಸಾಧ್ಯತೆ’, ವಿ.ಎಲ್.ನರಸಿಂಹಮೂರ್ತಿ ‘ಸಮಕಾಲೀನ ಕರ್ನಾಟಕ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ’ ಕುರಿತು ವಿಚಾರ ಮಂಡಿಸಿದರು.
ಚರಕ ಆಸ್ಪತ್ರೆ ಮುಖ್ಯಸ್ಥ ಡಾ.ಬಸವರಾಜು, ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ಸಾಮಾಜಿಕ ಹೋರಾಟಗಾರ ಶ್ರೀಪಾದ್ ಭಟ್, ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಆಶಾ ಬಗ್ಗನಡು, ಮುಖಂಡರಾದ ಎ.ರಾಮಚಂದ್ರಪ್ಪ, ವಿರೂಪಾಕ್ಷ ಡ್ಯಾಗೇರಹಳ್ಳಿ, ಕುಂದೂರು ಮುರಳಿ, ಕುಪ್ಪೂರು ಶ್ರೀಧರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.