ADVERTISEMENT

ಕೊಡಿಗೇನಹಳ್ಳಿ: ತಂಗುದಾಣವಿಲ್ಲದೆ ತೊಂದರೆ

ಅಡ್ಡಾದಿಡ್ಡಿ ವಾಹನ ನಿಲುಗಡೆ: ರಸ್ತೆ ಒತ್ತುವರಿ: ಪಟ್ಟಣದ ಸೌಂದರ್ಯಕ್ಕೆ ಧಕ್ಕೆ

ಗಂಗಾಧರ್ ವಿ ರೆಡ್ಡಿಹಳ್ಳಿ
Published 26 ಮೇ 2025, 6:54 IST
Last Updated 26 ಮೇ 2025, 6:54 IST
ಕೊಡಿಗೇನಹಳ್ಳಿ ಬಸ್ ನಿಲ್ದಾಣದಲ್ಲಿ ತಂಗುದಾಣವಿಲ್ಲದೆ ಅಂಗಡಿಗಳ ಮುಂದೆ ಕುಳಿತಿರುವ ಪ್ರಯಾಣಿಕರು
ಕೊಡಿಗೇನಹಳ್ಳಿ ಬಸ್ ನಿಲ್ದಾಣದಲ್ಲಿ ತಂಗುದಾಣವಿಲ್ಲದೆ ಅಂಗಡಿಗಳ ಮುಂದೆ ಕುಳಿತಿರುವ ಪ್ರಯಾಣಿಕರು   

ಕೊಡಿಗೇನಹಳ್ಳಿ: ಪಟ್ಟಣದಲ್ಲಿ ರಸ್ತೆ ಬದಿಯೇ ಮಾಂಸ ಮಾರಾಟ ಮಳಿಗೆ, ಅಡ್ಡಾದಿಡ್ಡಿ ವಾಹನ ನಿಲುಗಡೆ ಹಾಗೂ ಸುಸಜ್ಜಿತ ತಂಗುದಾಣವಿಲ್ಲದೆ ಪಟ್ಟಣದ ಸೌಂದರ್ಯಕ್ಕೆ ಧಕ್ಕೆಯಾಗಿದೆ.

120 ಅಡಿ ಅಗಲವಿದ್ದ ಪಟ್ಟಣದ ರಸ್ತೆಯು ರಸ್ತೆ ಬದಿ ಅಂಗಡಿ, ತಳ್ಳುವ ಗಾಡಿಗಳ ಒತ್ತುವರಿಯಿಂದಾಗಿ ಈಗ 20ರಿಂದ 30 ಅಡಿಗೆ ಕುಗ್ಗಿದೆ.

ಮಧುಗಿರಿ, ಗೌರಿಬಿದನೂರು ಹಾಗೂ ಆಂಧ್ರಪ್ರದೇಶದ ಹಿಂದೂಪುರ ತಾಲ್ಲೂಕುಗಳ ಮಧ್ಯೆಭಾಗದಲ್ಲಿರುವ ಕೊಡಿಗೇನಹಳ್ಳಿ ಈ ಭಾಗದಲ್ಲಿ ಪ್ರಮುಖ ಕೇಂದ್ರಸ್ಥಾನವಾಗಿ ಗುರ್ತಿಸಿಕೊಂಡಿರುವುದರ ಜೊತೆಗೆ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದೆ.

ADVERTISEMENT

ತಂಗುದಾಣ ಒತ್ತುವರಿ: ಹಿಂದೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಎರಡು ತಂಗುದಾಣಗಳಿದ್ದವು. ನಂತರ ಒಂದನ್ನು ಕೆಡವಿ ಅಂಗಡಿಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದ್ದಾರೆ. ಮತ್ತೊಂದನ್ನು ಕೂಡ ನಾಶ ಮಾಡಿ ಅಂಗಡಿ ಇಟ್ಟಿದ್ದಾರೆ. ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿಯವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಏನೇನು ಆಗಬೇಕು: ಮಧುಗಿರಿ ರಸ್ತೆ ಪೆಟ್ರೋಲ್ ಬಂಕ್‌ನಿಂದ ಹಿಂದೂಪುರ ರಸ್ತೆಯ ಸರ್ವೋದಯ ಕಾಲೇಜುವರೆಗೆ, ಗೌರಿಬಿದನೂರು ರಸ್ತೆಯಿಂದ ದಂಡಿಪುರದವರೆಗೆ ಹಾಗೂ ಕೊಲ್ಲಾಪುರದಮ್ಮ ದೇವಸ್ಥಾನದಿಂದ ಜಯಮಂಗಲಿ ಸೇತುವೆವರೆಗೆ ಬೈಪಾಸ್ ರಸ್ತೆ ಜೊತೆಗೆ ವಿದ್ಯುತ್ ದೀಪಗಳನ್ನು ಒಳಗೊಂಡ ದ್ವಿಪಥ ರಸ್ತೆಯಾಗಬೇಕಿದೆ. ಚಿಕನ್ ಅಂಗಡಿಗಳಿಗೆ ಪ್ರತ್ಯೇಕ ಸ್ಥಳ, ಬಸ್ ನಿಲ್ದಾಣದಲ್ಲಿ ಹೈ–ಟೆಕ್ ತಂಗುದಾಣ, ಶೌಚಾಲಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಸ್ಪತ್ರೆ, ಪಟ್ಟಣ ಪಂಚಾಯಿತಿ, ಎಸ್‌ಬಿಐ ಬ್ಯಾಂಕ್, ಕೃಷಿ ಮಾರುಕಟ್ಟೆ, ಮಿನಿ ವಿಧಾನಸೌಧ ಹಾಗೂ ತೆರಿಯೂರು ಬಳಿ ಗಾರ್ಮೆಂಟ್ಸ್ ಪ್ರಾರಂಭಿಸಬೇಕು ಎನ್ನುವುದು ಈ ಭಾಗದ ಜನರ ಒತ್ತಾಯ.

ಕೊಡಿಗೇನಹಳ್ಳಿಯಲ್ಲಿ ರಸ್ತೆಬದಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಜನದಟ್ಟಣೆ ಹೆಚ್ಚಿರುವ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನಿಗಾವಹಿಸಲು ಹಾಗೂ ವಾಹನ ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸುವುದು ಸೂಕ್ತ.
ಪ್ರೂಟ್ ಕೃಷ್ಣ ಗ್ರಾಮ ಪಂಚಾಯಿತಿ ಸದಸ್ಯ
ಮೂಲ ಸೌಕರ್ಯಗಳಿಗೆ ಒತ್ತು ನೀಡುವ ಜೊತೆಗೆ ತೆರಿಯೂರು ಬಳಿ ಶೀಘ್ರ ಕಾರ್ಖಾನೆ ಆರಂಭಿಸಿದಾಗ ಮಾತ್ರ ಈ ಭಾಗ ಆರ್ಥಿಕವಾಗಿ ಅಭಿವೃದ್ಧಿ ಕಾಣಲು ಸಾಧ್ಯ
ಜೆ.ಮಕ್ತಿಯಾರ್ ಕೊಡಿಗೇನಹಳ್ಳಿ
ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಸ್ಥಳವಿಲ್ಲ. ಇಲ್ಲಿ ಸರಿಯಾದ ಶೌಚಾಲಯವಿಲ್ಲ. ಸುಸಜ್ಜಿತ ತಂಗುದಾಣ ನಿರ್ಮಿಸಬೇಕು.
ಕೆ.ಪಿ. ಗಂಗಾದೇವಿ ಕೊಡಿಗೇನಹಳ್ಳಿ

ಹೈ–ಟೆಕ್ ತಂಗುದಾಣ ನಿರ್ಮಾಣ

ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡಿದ ತಕ್ಷಣ ಕೊಡಿಗೇನಹಳ್ಳಿಯನ್ನು ತಾಲ್ಲೂಕು ಕೇಂದ್ರ ಮಾಡುವುದು ನನ್ನ ಕನಸು. ಪಟ್ಟಣ ಪಂಚಾಯಿತಿ ವಿದ್ಯುತ್ ದೀಪಗಳನ್ನು ಒಳಗೊಂಡ ದ್ವಿಪಥ ರಸ್ತೆ ಹೈ–ಟೆಕ್ ತಂಗುದಾಣ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ ಮಿನಿ ವಿಧಾನಸೌಧ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಪ್ರಥಮ ದರ್ಜೆ ಕಾಲೇಜು ಆರಂಭಕ್ಕೆ ಜಾಗ ಗುರುತಿಸಲಾಗಿದೆ. ಕೆ.ಎನ್. ರಾಜಣ್ಣ ಸಹಕಾರ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.