ಕೊರಟಗೆರೆ ಬಸ್ ನಿಲ್ದಾಣ ಬಳಿಯ ತೆರೆದ ಚರಂಡಿ
ಕೊರಟಗೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಬಸ್ ನಿಲ್ದಾಣದ ಬಳಿ ಹಲವು ವರ್ಷಗಳಿಂದ ತೆರೆದ ಸ್ಥಿತಿಯಲ್ಲಿರುವ ದೊಡ್ಡ ಚರಂಡಿ ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಬಸ್ ಒಳಗೆ ಪ್ರವೇಶಿಸುವ ಹಾಗೂ ಹೊರಗೆ ಬರುವ ಮುಖ್ಯ ದಾರಿಯಲ್ಲಿಯೇ ಬಾಯ್ತೆರೆದುಕೊಂಡಿರುವ ಈ ಚರಂಡಿ ನಿತ್ಯದ ಸಂಚಾರಕ್ಕೆ
ಅಡ್ಡಿಯಾಗಿದೆ.
ಪ್ರತಿದಿನ ನೂರಾರು ವಾಹನ, ವಿದ್ಯಾರ್ಥಿಗಳು, ಪಾದಚಾರಿಗಳು ಈ ದಾರಿಯಲ್ಲೇ ಸಂಚರಿಸುತ್ತಾರೆ. ರೇಣುಕಾ ಆಸ್ಪತ್ರೆ, ರವೀಂದ್ರ ಭಾರತಿ ಶಾಲೆ, ಕಾಳಿದಾಸ ಪ್ರೌಢಶಾಲೆ ಮೊದಲಾದ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ರೋಗಿಗಳು ಈ ಮಾರ್ಗವನ್ನು ದಿನಂಪ್ರತಿ ಬಳಸುತ್ತಾರೆ. ಅದೇ ಸ್ಥಳದ ರಸ್ತೆಯಲ್ಲಿ ಇತ್ತೀಚೆಗೆ ದೊಡ್ಡ ಗುಂಡಿ ಬಿದ್ದಿದ್ದು, ಅಪಘಾತಕ್ಕೆ ಇನ್ನಷ್ಟು ಕಾರಣವಾಗಿದೆ.
ಹಗಲಿನಲ್ಲಿ ಹೇಗಾದರೂ ಈ ಚರಂಡಿಯನ್ನು ತಪ್ಪಿಸಿಕೊಂಡು ಹೋಗಬಹುದಾದರೂ, ರಾತ್ರಿ ವಾಹನ ಸವಾರರಿಗೆ ಇದು ಸ್ಪಷ್ಟವಾಗಿ ಕಾಣದೇ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಅನೇಕರು ಈ ಜಾಗದಲ್ಲಿ ಬಿದ್ದು ಗಾಯಗೊಂಡಿದ್ದು, ಕೈಕಾಲು ಮುರಿದುಕೊಂಡಿರುವ ನಿದರ್ಶನಗಳಿವೆ.
ಇದೇ ಜಾಗದಲ್ಲೇ ಖಾಸಗಿ ಬಸ್ ನಿಲ್ದಾಣವೂ ಇರುವುದರಿಂದ ಪ್ರಯಾಣಿಕರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಚರಂಡಿ ದುರಸ್ತಿಗೊಳಿಸಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಹಲವು ಬಾರಿ ಸಂಬಂಧಪಟ್ಟವರಿಗೆ ತಿಳಿಸಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ ಸ್ಥಳೀಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.