ADVERTISEMENT

ತುಮಕೂರು | ರೈತರ ನೆರವಿಗಿಲ್ಲ ಕೃಷಿ ಯಂತ್ರಧಾರೆ

ಚಿಕ್ಕತೊಟ್ಲುಕೆರೆ ಕೇಂದ್ರದಲ್ಲಿ ನಿರ್ವಹಣೆ ಕೊರತೆ: ಆರೋಪ

​ಪ್ರಜಾವಾಣಿ ವಾರ್ತೆ
Published 26 ಮೇ 2020, 17:34 IST
Last Updated 26 ಮೇ 2020, 17:34 IST
ಕೋರ ಹೋಬಳಿ ಚಿಕ್ಕತೊಟ್ಲುಕೆರೆ ಗ್ರಾಮದ ಕೃಷಿ ಯಂತ್ರಧಾರೆ ಕೇಂದ್ರದಲ್ಲಿನ ಕೃಷಿ ಯಂತ್ರೋಪಕರಣ
ಕೋರ ಹೋಬಳಿ ಚಿಕ್ಕತೊಟ್ಲುಕೆರೆ ಗ್ರಾಮದ ಕೃಷಿ ಯಂತ್ರಧಾರೆ ಕೇಂದ್ರದಲ್ಲಿನ ಕೃಷಿ ಯಂತ್ರೋಪಕರಣ   

ಕೋರ: ಹೋಬಳಿಯ ಚಿಕ್ಕತೊಟ್ಲುಕೆರೆ ಗ್ರಾಮದಲ್ಲಿ ಕೃಷಿ ಇಲಾಖೆ ಆರಂಭಿಸಿರುವ ಕೃಷಿ ಉಪಕರಣಗಳ ಬಾಡಿಗೆ ಆಧಾರಿತ ಸೇವಾಕೇಂದ್ರ (ಕೃಷಿ ಯಂತ್ರಧಾರೆ) ರೈತರಿಗೆ ನೆರವಾಗಿಲ್ಲ. ಕೃಷಿ ಯಂತ್ರೋಪಕರಣಗಳು ಬಳಕೆಯಾಗದೆ ತುಕ್ಕುಹಿಡಿಯುತ್ತಿವೆ ಎಂದು ರೈತರು ಆರೋಪಿಸಿದ್ದಾರೆ.

ರೈತರಿಗೆ ಬಾಡಿಗೆ ಆಧಾರದಲ್ಲಿ ಕೃಷಿ ಉಪಕರಣ ನೀಡಿ ಕೃಷಿ ಚಟುವಟಿಕೆ ಉತ್ತೇಜಿಸಲು ಕೃಷಿ ಯಂತ್ರಧಾರೆ ಯೋಜನೆ ಜಾರಿಗೆ ತರಲಾಗಿದೆ. ಪ್ರತಿ ಹೋಬಳಿ ಕೇಂದ್ರಗಳಲ್ಲಿ ಕೃಷಿ ಯಂತ್ರಧಾರೆ ಕೇಂದ್ರ ತೆರೆಯಲಾಗಿದೆ. ಯೋಜನೆಗೆ ಕೃಷಿ ಇಲಾಖೆ ಶೇ 75 ಸಹಾಯಧನ ನೀಡಿದೆ. ಆದರೆ ಮಾಹಿತಿ ಹಾಗೂ ನಿರ್ವಹಣೆ ಕೊರತೆಯಿಂದ ಈ ಕೇಂದ್ರ ಪ್ರಯೋಜನಕ್ಕೆ ಬಾರದಾಗಿದೆ ಎನ್ನುವುದು ಕೃಷಿಕರ ಅಂಬೋಣ.

ಈ ಕೃಷಿ ಯಂತ್ರಧಾರೆ ಕೇಂದ್ರವನ್ನು ಚಿತ್ರದುರ್ಗದ ‘ವರ್ಷಾ ಅಸೋಸಿಯೇಟ್ಸ್’ ಸಂಸ್ಥೆ ಗುತ್ತಿಗೆ ಪಡೆದಿದೆ. ಕೇಂದ್ರ ಆರಂಭವಾಗಿ ಹಲವು ತಿಂಗಳಾದರೂ ರೈತರಿಗೆ ಕೃಷಿ ಉಪಕರಣ ಬಾಡಿಗೆಗೆ ದೊರೆಯುತ್ತಿಲ್ಲ. ಗುತ್ತಿಗೆ ಪಡೆದಿರುವ ಸಂಸ್ಥೆ ಈ ಕೇಂದ್ರದ ನಿರ್ವಹಣೆಗೆ
ಯಾವುದೇ ಅಧಿಕಾರಿಯನ್ನು ನಿಯೋಜಿಸಿಲ್ಲ.

ADVERTISEMENT

ಈ ಕೇಂದ್ರದಲ್ಲಿ ಕೃಷಿ ಉಪಕರಣ ರೈತರಿಗೆ ಬಾಡಿಗೆ ಆಧಾರದಲ್ಲಿ ನೀಡಲು ಜಿಲ್ಲಾಮಟ್ಟದ ಸಮಿತಿ ದರ ನಿಗದಿಪಡಿಸಲಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈ ಸಮಿತಿಗೆ ಅಧ್ಯಕ್ಷರಾಗಿದ್ದರು.

ಎರಡು ಬಾರಿ ನೋಟಿಸ್‌
ಕೃಷಿ ಯಂತ್ರಧಾರೆ ಕೇಂದ್ರಕ್ಕೆ ಕೃಷಿ ಇಲಾಖೆಯಿಂದ ₹ 28 ಲಕ್ಷ ಸಹಾಯಧನ ನೀಡಲಾಗಿದೆ. ಉಳಿದ ಶೇ 25ರಷ್ಟು ಸಹಾಯಧನವನ್ನು ವರ್ಷಾ ಅಸೋಸಿಯೇಟ್ಸ್ ಭರಿಸಿದೆ. ಕೃಷಿ ಇಲಾಖೆಯ ಸಹಾಯಧನದಿಂದ 4 ಟ್ರಾಕ್ಟರ್ ಹಾಗೂ 14 ಕೃಷಿ ಉಪಕರಣ ಖರೀದಿಸಲಾಗಿದೆ. ಈ ಕೇಂದ್ರ ಆರಂಭಿಸುವಂತೆ ವರ್ಷಾ ಅಸೋಸಿಯೇಟ್ಸ್‌ಗೆ ಎರಡು ಬಾರಿ ನೋಟಿಸ್‌ ನೀಡಲಾಗಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಕೆಂಗೇಗೌಡ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.