ADVERTISEMENT

ಹಳೆ ನಿಲ್ದಾಣ ಬಂದ್‌: ಜ.8ರಿಂದ ತಾತ್ಕಾಲಿಕ ತಾಣ ಕಾರ್ಯಾರಂಭ

ಬಸವೇಶ್ವರ ರಸ್ತೆಯ ಡಿಪೊದಲ್ಲಿ ಸಿದ್ದಗೊಂಡಿರುವ ತಾತ್ಕಾಲಿಕ ತಂಗುದಾಣದಿಂದ ಇಂದಿನಿಂದ ಕಾರ್ಯಾಚರಣೆ ಆರಂಭ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 15:21 IST
Last Updated 7 ಜನವರಿ 2020, 15:21 IST
ಬಸವೇಶ್ವರ ರಸ್ತೆ ಬದಿಯ ತಾತ್ಕಾಲಿಕ ಬಸ್‌ ನಿಲ್ದಾಣದ ನಕಾಶೆ
ಬಸವೇಶ್ವರ ರಸ್ತೆ ಬದಿಯ ತಾತ್ಕಾಲಿಕ ಬಸ್‌ ನಿಲ್ದಾಣದ ನಕಾಶೆ   

ತುಮಕೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ಬಸ್‍ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಕಾಮಗಾರಿ ಆರಂಭಿಸುತ್ತಿರುವ ಕಾರಣ, ಹಾಲಿ ಇರುವ ಬಸ್‌ ನಿಲ್ದಾಣವನ್ನು ಬಸವೇಶ್ವರ ರಸ್ತೆಯ ಬಸ್‌ ಡಿಪೊಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಇಲ್ಲಿಂದ ಬಸ್‌ಗಳು ಜ.8ರಿಂದ ಕಾರ್ಯಾಚರಣೆ ಆರಂಭಿಸಲಿವೆ.

ಡಿಪೊ ಆವರಣದಲ್ಲಿನ ತಾತ್ಕಾಲಿಕ ಬಸ್‍ನಿಲ್ದಾಣವು 3 ಎಕರೆ 20 ಗುಂಟೆ ವಿಸ್ತೀರ್ಣವಿದೆ. ಈ ನಿಲ್ದಾಣದಿಂದ ನಿತ್ಯ 2,989 ಬಸ್‌ ಟ್ರಿಪ್‌ಗಳಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ತಾತ್ಕಾಲಿಕ ಬಸ್‍ನಿಲ್ದಾಣದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಸೌಕರ್ಯಗಳು

ADVERTISEMENT

10 ಅಂಕಣಗಳಿವೆ(ಪ್ಲಾಟ್‌ಫಾರಂ). ಕುಳಿತುಕೊಳ್ಳಲು ಆಸನಗಳು, ಮಹಿಳೆಯರಿಗೆ ಹಾಗೂ ಪುರುಷರಿಗಾಗಿ ತಲಾ 3 ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಉಪಹಾರ ಗೃಹ, ವಿದ್ಯಾರ್ಥಿಗಳ ಹಾಗೂ ಮಾಸಿಕ ಬಸ್‍ಪಾಸು ವಿತರಣಾ ಕೊಠಡಿ, ಚಾಲನಾ ಸಿಬ್ಬಂದಿಗಳ ವಿಶ್ರಾಂತಿ ಕೊಠಡಿ, ವಿಚಾರಣಾ ಕೊಠಡಿ, ಮುಂಗಡ ಆಸನ ಕಾಯ್ದಿರಿಸುವ ಕೇಂದ್ರ(ಅವತಾರ್ ಕೌಂಟರ್) ತೆರೆಯಲಾಗಿದೆ. ವಾಣಿಜ್ಯ ಮಳಿಗೆಗಳೂ ಇವೆ.

ಎರಡು ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮಹಿಳಾ ವಿಶ್ರಾಂತಿ ಕೊಠಡಿ ಮತ್ತು ಮಕ್ಕಳ ಪೋಷಣೆಗಾಗಿ ತಾಯಂದಿರ ಕೊಠಡಿ ಇದೆ. ಪೊಲೀಸ್ ಉಪಠಾಣೆ ಸಹ ಇದೆ. ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೂ ವ್ಯವಸ್ಥೆ ಮಾಡಲಾಗಿದೆ.

ವೇಗದೂತ ವಾಹನ ಸಂಚಾರ ಮಾರ್ಗಾಚರಣೆ

ಬೆಂಗಳೂರು ಕಡೆಯಿಂದ ಹಾಗೂ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆಯ ನಿರ್ಗಮನ ದ್ವಾರದಿಂದ ಚರ್ಚ್‍ವೃತ್ತ-ಕೋಡಿಬಸವೇಶ್ವರ ವೃತ್ತ-ಜಿಲ್ಲಾಧಿಕಾರಿಗಳ ಕಚೇರಿ ವೃತ್ತ-ಕೋತಿತೋಪು-ಶಿವಕುಮಾರ ಸ್ವಾಮೀಜಿ ವೃತ್ತ-ತುಮಕೂರು ವಿಶ್ವವಿದ್ಯಾನಿಲಯದ ಮೂಲಕ ನಿರ್ಗಮಿಸಲಿವೆ.

ಮೈಸೂರು, ಕುಣಿಗಲ್, ಹೊಸದುರ್ಗ, ತಿಪಟೂರು, ತುರುವೇಕೆರೆ, ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಲಕ್ಕಪ್ಪ ವೃತ್ತ, ಕಾಲ್‍ಟೆಕ್ಸ್ ವೃತ್ತ-ಜೆ.ಸಿ.ರಸ್ತೆ, ಬಸವೇಶ್ವರ ರಸ್ತೆ ಮೂಲಕ ಪ್ರವೇಶಿಸಿ ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆಯ ನಿರ್ಗಮನ ದ್ವಾರದಿಂದ ಜೆ.ಸಿ.ರಸ್ತೆ-ಲಕ್ಕಪ್ಪವೃತ್ತ, ಕಾಲ್‍ಟೆಕ್ಸ್ ವೃತ್ತ ಮೂಲಕ ವಿವಿಧ ಕಡೆಗೆ ಸಂಚರಿಸಲಿವೆ.

ಶಿರಾ, ಮಧುಗಿರಿ, ಗೌರಿಬಿದನೂರು, ಪಾವಗಡ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಕೋಡಿಬಸವೇಶ್ವರ ವೃತ್ತ-ಚರ್ಚ್ ವೃತ್ತ-ಅಶೋಕ ರಸ್ತೆ-ಬಸವೇಶ್ವರ ರಸ್ತೆ ಮೂಲಕ ಪ್ರವೇಶಿಸಿ ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆಯ ನಿರ್ಗಮನ ದ್ವಾರದಿಂದ ಚರ್ಚ್‌ ವೃತ್ತ-ಕೋಡಿಬಸವೇಶ್ವರ ವೃತ್ತದ ಮೂಲಕ ವಿವಿಧ ಕಡೆಗೆ ಸಂಚರಿಸಲಿವೆ.

ಸಾಮಾನ್ಯ ಹಾಗೂ ನಗರ ಸಾರಿಗೆ ವಾಹನಗಳ ಸಂಚಾರ ಮಾರ್ಗಾಚರಣೆ: ಕ್ಯಾತ್ಸಂದ್ರ, ಸಿದ್ದಗಂಗಾ ಮಠ, ಬಡ್ಡಿಹಳ್ಳಿ, ದೇವರಾಯಪಟ್ಟಣ, ದಾಬಸ್‍ಪೇಟೆ, ನೆಲಮಂಗಲ ಮತ್ತು ಗೂಳರಿವೆ, ಶೆಟ್ಟಿಹಳ್ಳಿ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಭದ್ರಮ್ಮ ಛತ್ರ, ಬಿ.ಜಿ.ಎಸ್.ವೃತ್ತ, ಟೌನ್‍ಹಾಲ್ ವೃತ್ತ-ಅಶೋಕರಸ್ತೆ-ಬಸವೇಶ್ವರ ರಸ್ತೆ ಮೂಲಕ ಪ್ರವೇಶಿಸಿ ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆಯ ನಿರ್ಗಮನ ದ್ವಾರದಿಂದ ಚರ್ಚ್‍ವೃತ್ತ-ಅಶೋಕ ರಸ್ತೆ-ಬಿ.ಜಿ.ಎಸ್.ಸರ್ಕಲ್, ಟೌನ್‍ಹಾಲ್ ವೃತ್ತ-ಭದ್ರಮ್ಮ ಛತ್ರದ ಮೂಲಕ ವಿವಿಧ ಕಡೆಗೆ ಸಂಚರಿಸಲಿವೆ.

ಗುಬ್ಬಿ, ಮರಳೂರುದಿಣ್ಣೆ, ಗೂಳೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳು ಲಕ್ಕಪ್ಪ ವೃತ್ತ, ಕಾಲ್‍ಟೆಕ್ಸ್ ವೃತ್ತ-ಜೆ.ಸಿ.ರಸ್ತೆ-ಬಸವೇಶ್ವರ ರಸ್ತೆ ಮೂಲಕ ಪ್ರವೇಶಿಸಿ ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆಯ ನಿರ್ಗಮನ ದ್ವಾರದಿಂದ ಜೆ.ಸಿ.ರಸ್ತೆ-ಲಕ್ಕಪ್ಪವೃತ್ತ, ಕಾಲ್‍ಟೆಕ್ಸ್ ವೃತ್ತ ಮೂಲಕ ವಿವಿಧ ಕಡೆಗೆ ಸಂಚರಿಸಲಿವೆ.

ಊರುಕೆರೆ, ಯಲ್ಲಾಪುರ, ಬೆಳಗುಂಬ ಮಾರ್ಗದ ವಾಹನಗಳು ಕೋಡಿಬಸವೇಶ್ವರ ವೃತ್ತ-ಚರ್ಚ್ ವೃತ್ತ-ಅಶೋಕ ರಸ್ತೆ-ಬಸವೇಶ್ವರ ರಸ್ತೆ ಮೂಲಕ ಪ್ರವೇಶಿಸಿ ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆಯ ನಿರ್ಗಮನ ದ್ವಾರದಿಂದ ಚರ್ಚ್‍ವೃತ್ತ-ಕೋಡಿಬಸವೇಶ್ವರ ವೃತ್ತದ ಮೂಲಕ ವಿವಿಧ ಕಡೆಗೆ ಸಂಚರಿಸಲಿವೆ.

ನಗರದ ಹೆಲ್ತ್ ಕ್ಯಾಂಟೀನ್ ರಸ್ತೆ ಮತ್ತು ಗುಬ್ಬಿ ವೀರಣ್ಣ ಕಲಾಕ್ಷೇತ್ರದ ರಸ್ತೆಗಳನ್ನು ನೋ–ಪಾರ್ಕಿಂಗ್ ರಸ್ತೆಗಳೆಂದು ಘೋಷಿಸಿ ಜಿಲ್ಲಾಧಿಕಾರಿಗಳು ಈಗಾಗಲೇ ನವೆಂಬರ್ 25ರಂದು ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

***

ಹೈಟೆಕ್‌ ಬಸ್‌ ನಿಲ್ದಾಣದ ಕಾಮಗಾರಿ ಮುಗಿಯಲು ಎರಡು ವರ್ಷ ಬೇಕಾಗಬಹುದು. ಆವರೆಗೂ ತಾತ್ಕಾಲಿಕ ನಿಲ್ದಾಣವೇ ಬಳಕೆಯಲ್ಲಿ ಇರಲಿದೆ.

ಎ.ಎನ್‌.ಗಜೇಂದ್ರಕುಮಾರ್‌, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಗಮದ ನಿಯಂತ್ರಣಾಧಿಕಾರಿ

***

ಇಂದು ನಿಲ್ದಾಣ ಉದ್ಘಾಟನೆ

ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಜನವರಿ 8ರ ಬೆಳಿಗ್ಗೆ 9ಕ್ಕೆ ಚಾಲನೆ ನೀಡಲಾಗುತ್ತಿದೆ. ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ಪಾಲಿಕೆ ಆಯುಕ್ತ ಟಿ.ಭೂಬಾಲನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಈ ವೇಳೆ ಉಪಸ್ಥಿತ ಇರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.