ತುಮಕೂರಿನಲ್ಲಿ ಭಾನುವಾರ ರೇಷ್ಮೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ನಿವೃತ್ತ ರೇಷ್ಮೆ ಉಪ ನಿರ್ದೇಶಕ ವೈ.ಕೆ.ಬಾಲಕೃಷ್ಣಪ್ಪ ದಂಪತಿಯನ್ನು ಅಭಿನಂದಿಸಲಾಯಿತು. ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಜಿ.ಪಂ ಸಿಇಒ ಜಿ.ಪ್ರಭು ಇತರರು ಹಾಜರಿದ್ದರು
ತುಮಕೂರು: ನಾವು ಬುದ್ಧ, ಬಸವಣ್ಣನವರ ವಿಚಾರ ಉಳಿಸಿಕೊಳ್ಳದೆ, ಸುಳ್ಳು ಹೇಳುವ ದೇವರನ್ನು ಪೂಜಿಸುತ್ತಿದ್ದೇವೆ. ಸತ್ಯ ನುಡಿದರೆ ನಮ್ಮ ಮೇಲೆ ಪ್ರಕರಣ ದಾಖಲಿಸುತ್ತಾರೆ. ಹಿಂದೂ ಧರ್ಮಕ್ಕೆ ಅವಮಾನ ಮಾಡುತ್ತೀಯಾ, ನಿನ್ನ ಯಾಕೆ ಕೊಲೆ ಮಾಡಬಾರದು ಎಂದು ಪತ್ರ ಬರೆಯುತ್ತಾರೆ’ ಎಂದು ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ರೇಷ್ಮೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ, ಸರ್ಕಾರಿ ಎಸ್.ಸಿ, ಎಸ್.ಟಿ ನೌಕರರ ಸಮನ್ವಯ ಸಮಿತಿಯಿಂದ ಹಮ್ಮಿಕೊಂಡಿದ್ದ ನಿವೃತ್ತ ರೇಷ್ಮೆ ಉಪ ನಿರ್ದೇಶಕ ವೈ.ಕೆ.ಬಾಲಕೃಷ್ಣಪ್ಪ ಅವರ ಅಭಿನಂದನಾ ಸಮಾರಂಭ ಮತ್ತು ‘ಕುಸುರಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟಿಪ್ಪು ಸುಲ್ತಾನ್ ಭಾರತಕ್ಕೆ ರೇಷ್ಮೆ ಪರಿಚಯಿಸಿದರು. ಪ್ರಸ್ತುತ ಲಕ್ಷಾಂತರ ಕುಟುಂಬಗಳು ರೇಷ್ಮೆ ಕೃಷಿ ಅವಲಂಬಿಸಿ ಜೀವನ ಸಾಗಿಸುತ್ತಿವೆ. ಬಡ ರೈತರ ಜೀವನಕ್ಕೆ ಆಧಾರವಾಗಲಿ ಎಂದು ಶ್ರಮಿಸಿದ ಟಿಪ್ಪು ಸುಲ್ತಾನ್ರನ್ನು ಕೆಲವು ಅವಿವೇಕಿಗಳು ದೇಶ ದ್ರೋಹಿ ಅಂತ ಕರೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗಿನ ಅಧಿಕಾರಿಗಳಿಗೆ ನೆಮ್ಮದಿಯಿಂದ ಕೆಲಸ ಮಾಡುತ್ತೇವೆ ಎಂಬ ನಂಬಿಕೆ ಹೊರಟು ಹೋಗಿದೆ. ಮುಂದಿನ ದಿನಗಳಲ್ಲಿ ಯಾವ ಪ್ರಕರಣಗಳು ನಮ್ಮನ್ನು ಸುತ್ತಿಕೊಳ್ಳುತ್ತವೆ ಎಂಬ ಭಯದಲ್ಲಿ ನಿವೃತ್ತಿಯಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಜಿ.ಪಂ ಸಿಇಒ ಜಿ.ಪ್ರಭು, ಚಿಂತಕ ಕೆ.ದೊರೈರಾಜ್, ರಾಜ್ಯ ಸರ್ಕಾರಿ ಎಸ್.ಸಿ, ಎಸ್.ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್, ಪ್ರಾಧ್ಯಾಪಕರಾದ ನಾಗಭೂಷಣ್ ಬಗ್ಗನಡು, ಓ.ನಾಗರಾಜು, ರೇಷ್ಮೆ ಬೆಳೆಗಾರರ ಸಂಘದ ಗೌರವಾಧ್ಯಕ್ಷ ಎಸ್.ವಿ.ಸ್ವಾಮಿ, ಅಧ್ಯಕ್ಷ ಶಿವಾನಂದಯ್ಯ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹರಾಜು ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.