ಪಾವಗಡ: ವರ್ಷಗಳು ಕಳೆದರೂ ಸೋಲಾರ್ ಗ್ರಾಮ ಕ್ಯಾತಗಾನಚೆರ್ಲು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ವಿವಿಧ ಆಶ್ವಾಸನೆಗಳನ್ನು ನೀಡಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು ನಾಪತ್ತೆಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ರೈತರು ಸುಮಾರು ಮೂರು ಸಾವಿರ ಎಕರೆ ಜಮೀನನ್ನು ಸೋಲಾರ್ ಪಾರ್ಕ್ಗಾಗಿ ನೀಡಿದ್ದಾರೆ. ರೈತರು ನೀಡಿರುವ ಜಮೀನಿಗಳಿಂದ ಕೋಟಿಗಟ್ಟಲೆ ಲಾಭ ಮಾಡಿಕೊಳ್ಳುತ್ತಿದ್ದರೂ ಗ್ರಾಮಕ್ಕೆ ಕನಿಷ್ಠ ಸೌಕರ್ಯಗಳನ್ನೂ ಕಲ್ಪಿಸಿಲ್ಲ ಎನ್ನುವುದು ಇಲ್ಲಿನ ಜನರ ಆರೋಪ.
ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಮನೆ ಮುಂದೆ ಕೊಳಚೆ ನೀರು ನಿಲ್ಲುವುದರಿಂದ ಸೊಳ್ಳೆ, ನೊಣಗಳ ಕಾಟ ಹೆಚ್ಚಿದೆ. ಗ್ರಾಮಸ್ಥರು ಜ್ವರ, ನೆಗಡಿ ಸೇರಿದಂತೆ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.
ಗ್ರಾಮದ ರಸ್ತೆಗಳ ಸ್ಥಿತಿ ಹೇಳಲಾಗದು. ಸಿ.ಸಿ. ರಸ್ತೆ, ಡಾಂಬರ್ ರಸ್ತೆಗಳು ಹದಗೆಟ್ಟಿವೆ. ಬಹುತೇಕ ಕಡೆಗಳಲ್ಲಿ ರಸ್ತೆಗಳೇ ಇಲ್ಲ. ಹಗಲಿನ ವೇಳೆಯಲ್ಲಿ ಓಡಾಡಲೂ ಭಯಪಡುವ ಸ್ಥಿತಿ ಇದೆ ಎನ್ನುವುದ ಗ್ರಾಮಸ್ಥರ ದೂರು.
ಬೀದಿ ದೀಪಗಳಿಲ್ಲದೆ ಕತ್ತಲಿನಲ್ಲಿಯೇ ರಾತ್ರಿ ಕಳೆಯಬೇಕು. ಸಾವಿರಾರು ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಸೊಲಾರ್ ಪಾರ್ಕ್ಗೆ ಗ್ರಾಮ ಹೊಂದಿಕೊಂಡಿದ್ದರೂ ಕನಿಷ್ಠ ಬೀದಿ ದೀಪಗಳಿಲ್ಲ. ವಿದ್ಯುತ್ ಕಡಿತದ ಬಗ್ಗೆ ಹೇಳತೀರದು.
ಗ್ರಾಮದಲ್ಲಿ ಶೌಚಾಲಯಗಳ ವ್ಯವಸ್ಥೆಯೂ ಇಲ್ಲ. ವಿಶ್ವದ ಭೂಪಟದಲ್ಲಿ ಪ್ರತ್ಯೇಕ ಸ್ಥಾನ ಪಡೆದುಕೊಂಡಿರುವ ಸೋಲಾರ್ ಪಾರ್ಕ್ ಗ್ರಾಮದ ಜನತೆ ಬೆಳಿಗ್ಗೆ ತಂಬಿಗೆ ಹಿಡಿದು ಬಯಲಿನತ್ತ ಸಾಗುವ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ.
ಆರಂಭದಲ್ಲಿ ಅಧಿಕಾರಿಗಳು, ಜನಪ್ರತಿನಿದಿಗಳು ತಂಡೋಪತಂಡವಾಗಿ ಬಂದು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು. ಗ್ರಾಮದಲ್ಲಿ ಹೈ– ಟೆಕ್ ಬಸ್ ನಿಲ್ದಾಣ ನಿರ್ಮಿಸಿ, ರಸ್ತೆ, ಚರಂಡಿ, ಸೋಲಾರ್ ಬೀದಿ ದೀಪ, ಕಲ್ಯಾಣ ಮಂಟಪ, ಸಮುದಾಯ ಭವನ ಇತ್ಯಾದಿಗಳನ್ನು ನಿರ್ಮಿಸಿ ಶಾಲೆಯ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆಯ ಪಟ್ಟಿ ನೀಡಿದರು. ಆದರೆ ವರ್ಷಗಳು ಕಳೆದರೂ ಯಾವುದೇ ಭರವಸೆಯನ್ನೂ ಈಡೇರಿಸಿಲ್ಲ.
ಹೈಟೆಕ್ ಬಸ್ ನಿಲ್ದಾಣ ಎಂದು ಹೇಳಿ ಎಲ್ಲೆಡೆಯಂತೆ ತಂಗುದಾಣ ನಿರ್ಮಿಸಿ ಕೈ ತೊಳೆದುಕೊಳ್ಳಲಾಗಿದೆ. ಹೈ–ಟೆಕ್ ಬಸ್ ನಿಲ್ದಾಣ ಹೇಗಿರುತ್ತದೆ? ಬಸ್ ನಿಲ್ದಾಣದಲ್ಲಿ ಏನೆಲ್ಲಾ ಸವಲತ್ತುಗಳಿರುತ್ತವೆ? ಎಂಬ ಕನಸು ಕಂಡಿದ್ದ ಗ್ರಾಮಸ್ಥರ ಕಣ್ಣಿಗೆ ಸಾಮಾನ್ಯ ತಂಗುದಾಣ ನಿರ್ಮಿಸಿ ಮಣ್ಣೆರೆಚಲಾಗಿದೆ ಎಂದು ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನೂರಾರು ಕೋಟಿ ಸಿಎಸ್ಆರ್ ಅನುದಾನವಿದ್ದರೂ ಗ್ರಾಮದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ. ಸಮಸ್ಯೆಗಳ ಬಗ್ಗೆ ಹೇಳಿಕೊಂಡರೂ ಪ್ರಯೋಜನವಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ಅಳಲು.
Quote - ಕ್ಯಾತಗಾನಚೆರ್ಲು ಸೇರಿದಂತೆ ಸೋಲಾರ್ ಪಾರ್ಕ್ಗೆ ಹೊಂದಿಕೊಂಡಿರುವ ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಈ ಬಗ್ಗೆ ಪತ್ರವನ್ನೂ ನೀಡಿದ್ದಾರೆ. ಅಭಿವೃದ್ಧಿ ಕಡತ ಪತ್ರಕ್ಕೆ ಸೀಮಿತವಾಗಿದೆ ವಿ.ನಾಗಭೂಷಣರೆಡ್ಡಿ ರಾಷ್ಟ್ರೀಯ ಕಿಸಾನ್ ಸಂಘದ ಅಧ್ಯಕ್ಷ
Quote - ಚರಂಡಿ ಬೀದಿ ದೀಪ ಬಸ್ ನಿಲ್ದಾಣ ಸೇರಿದಂತೆ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಿಲ್ಲ. ಜನತೆ ಮೊದಲಿನಂತೆಯೇ ಸಮಸ್ಯೆಗಳ ನಡುವೆ ಜೀವಿಸಬೇಕಿದೆ. ಇನ್ನಾದರೂ ಅಧಿಕಾರಿಗಳು ನೀಡಿದ ಭರವಸೆ ಈಡೇರಿಸಬೇಕು ಶ್ರೀನಿವಾಸುಲು ಕ್ಯಾತಗಾನಚೆರ್ಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.