ADVERTISEMENT

ತುಮಕೂರು: ಲಿಂಗೇಶ್ವರ ಸ್ವಾಮಿ ಜಾತ್ರೆ ಇಂದು

ಗಂಗಾಧರ್ ವಿ ರೆಡ್ಡಿಹಳ್ಳಿ
Published 13 ಮಾರ್ಚ್ 2021, 4:10 IST
Last Updated 13 ಮಾರ್ಚ್ 2021, 4:10 IST
ಕಾಟಮ ಲಿಂಗೇಶ್ವರ ದೇವಸ್ಥಾನ
ಕಾಟಮ ಲಿಂಗೇಶ್ವರ ದೇವಸ್ಥಾನ   

ಕೊಡಿಗೇನಹಳ್ಳಿ: ಪುರವರ ಹೋಬಳಿಯ ಕೊಂಡವಾಡಿಯ ಬಂಗಾರು ಕಾಟಮ ಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ಮಾರ್ಚ್‌ 13ರಂದು ವಿಜೃಂಭಣೆಯಿಂದ ನಡೆಯಲಿದೆ.

ಶನಿವಾರ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ವಿಧಿ- ವಿಧಾನಗಳು ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ದಾಸಪ್ಪನವರಿಂದ ನಡೆಯುವ 101 ಎಡೆ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ದಾಸಪ್ಪ ಅವರ ಕುಣಿತ ನೋಡುಗರನ್ನು ಆಕರ್ಷಿಸುತ್ತದೆ.

ಕೊಂಡವಾಡಿ, ಚಿಕ್ಕಮಾಲೂರು, ದೊಡ್ಡಮಾಲೂರು, ಅಕ್ಕಲಾಪುರ, ಚಿಂಪುಗಾನಹಳ್ಳಿ, ಕುಂದಿಹಳ್ಳಿ, ಬೂದೇನಹಳ್ಳಿ, ಬಜ್ಜನಹಳ್ಳಿ, ಗೊಳ್ಳಾ
ಪುರಗಳಿಂದ ಸಾಕಷ್ಟು ಜನರು ಜಾತ್ರೆಗೆ ಬರುತ್ತಾರೆ.

ADVERTISEMENT

ಐತಿಹಾಸಿಕ ಹಿನ್ನೆಲೆ: ಕೊಂಡವಾಡಿ ಸುತ್ತಮುತ್ತಲಿನ ಪ್ರದೇಶ ಗಿಡ- ಮರಗಳಿಂದ ಆವರಿಸಿತ್ತು. ಇಲ್ಲಿನ ಜನರು ವ್ಯವಸಾಯದೊಂದಿಗೆ ಹಸುಗಳನ್ನು ಸಾಕುತ್ತಿದ್ದರು. ಗ್ರಾಮದ ಲಿಂಗಪ್ಪ ಅವರು ಗ್ರಾಮದ ಹೊರವಲಯದಲ್ಲಿ ಹಸುಗಳನ್ನು ಮೇಯಲು ಬಿಡುತ್ತಿದ್ದರು. ಸಂಜೆ ಕೊಟ್ಟಿಗೆಗೆ ಮರಳಿದಾಗ ನಿತ್ಯವು ಹಸುವೊಂದು ಹಾಲು ಕೊಡುತ್ತಿರಲಿಲ್ಲ. ಅನುಮಾನಗೊಂಡ ಲಿಂಗಪ್ಪ ಪರಿಶೀಲಿಸಿದಾಗ ಪೊದೆಯೊಂದರ ಬಳಿ ನಿಂತು ಹಸು ಹಾಲು ಕೊಡುತ್ತಿರುವುದನ್ನು ಕಂಡ ಆಶ್ಚರ್ಯಗೊಂಡರು. ಪೊದೆ ಮಧ್ಯೆ ಕಲ್ಲಿನ ಕಂಬವಿರುವುದು ಕಂಡಿದೆ. ಅಂದು ರಾತ್ರಿ ಕನಸಿನಲ್ಲಿ ‘ನಾನು ಕಾಟಮ ಲಿಂಗೇಶ್ವರಸ್ವಾಮಿ. ಇಲ್ಲಿಯೇ ನನಗೆ ದೇವಸ್ಥಾನ ನಿರ್ಮಿಸಿ ಪೂಜೆ-ಪುನಸ್ಕಾರಗಳನ್ನು ನಡೆಸಿಕೊಂಡು ಹೋದರೆ ಕಷ್ಟ ಪರಿಹಾರವಾಗುತ್ತದೆ’ ಎಂದು ನುಡಿದ ಅನುಭವವಾಗಿತ್ತು ಎಂಬ ಪ್ರತೀತಿ ಇದೆ. ಕುರಿ, ಮೇಕೆ ಮತ್ತು ದನಕರುಗಳಿಗೆ ರೋಗ-ರುಜಿನಗಳು ಬಂದಾಗ ಜನರು ಈ ದೇವರಿಗೆ ಹರಿಕೆ ಹೊರುತ್ತಾರೆ. ಇಲ್ಲಿನ ಬುಡಕಟ್ಟಿನ ಜನರು ಶಿವರಾತ್ರಿ ಹಬ್ಬದಲ್ಲಿ 3 ದಿನ ಉಪವಾಸವಿದ್ದು, ಕೊನೆಯ ದಿನ ವಿಜೃಂಭಣೆಯಿಂದ ನಡೆಯುವ ಕೊಂಡವಾಡಿ ಜಾತ್ರೆಗೆ ಸೇರುತ್ತಾರೆ.

ಈ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆ ಜೊತೆಗೆ ಸಾವಿರಾರು ಸಂಖ್ಯೆಯಲ್ಲಿ ಒಕ್ಕಲಿದ್ದರೂ ಅಭಿವೃದ್ಧಿ ಕಂಡಿಲ್ಲ. ಮದುವೆ, ನಾಮಕರಣ ಮತ್ತು ಕೂದಲು ತೆಗೆಸುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ಬರುವ ಭಕ್ತರಿಗೆ ಸಮುದಾಯಭವನ, ಶೌಚಾಲಯ ಮತ್ತು ಸ್ನಾನದ ಕೊಠಡಿಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.