ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಯಾಗಿ ಎಸ್.ಎನ್.ಸ್ವಾಮಿ ಸ್ಪರ್ಧಿಸಲಿದ್ದಾರೆ. ರಾಜ್ಯದ 19 ಕ್ಷೇತ್ರಗಳಲ್ಲಿ ಎಸ್ಯುಸಿಐ ಅಭ್ಯರ್ಥಿಗಳು ಚುನಾವಣೆ ಕಣಕ್ಕೆ ಇಳಿಯಲಿದ್ದಾರೆ.
‘ಈವರೆಗೆ ಆಡಳಿತ ನಡೆಸಿದ ರಾಜಕೀಯ ಪಕ್ಷಗಳು ಜನ, ರೈತ, ಕಾರ್ಮಿಕರ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಉದ್ಯಮಿಗಳಿಂದ ದೇಣಿಗೆ ಪಡೆದುಕೊಂಡಿವೆ. ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆಯುವಲ್ಲಿ ಬಿಜೆಪಿಗೆ ಅಗ್ರಸ್ಥಾನ ಇದೆ. ಕೇಂದ್ರ ಸರ್ಕಾರ ಜನರ ಹಿತಾಸಕ್ತಿ ಕಾಪಾಡುತ್ತಿಲ್ಲ ಎಂದು ಎಸ್ಯುಸಿಐ ರಾಜ್ಯ ನಾಯಕ ಶಶಿಧರ್ ಇಲ್ಲಿ ಶನಿವಾರ ಟೀಕಿಸಿದರು.
2014ರಿಂದ ಈವರೆಗೆ ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ವಿರೋಧ ಪಕ್ಷಗಳ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದೆ. ಬಿಜೆಪಿಯ ಸರ್ವಾಧಿಕಾರಿ ಧೋರಣೆಯು ಪ್ರಜಾಪ್ರಭುತ್ವದ ಬುಡವನ್ನೇ ಅಲುಗಾಡಿಸುತ್ತಿದೆ. ಜಾಗತೀಕರಣ, ಉದಾರೀಕರಣ ನೀತಿಗಳು ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಪ್ರಜೆಗಳನ್ನು ಬಡತನ, ನಿರುದ್ಯೋಗಕ್ಕೆ ನೂಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ದೇಶದ ಎಲ್ಲ ಎಡಪಕ್ಷಗಳು ರಾಜಕೀಯವಾಗಿ ಒಂದಾಗುತ್ತಿಲ್ಲ. ಇದರಿಂದ ನಮ್ಮ ಚಿಂತನೆ, ವಿಚಾರಗಳು ಜನರನ್ನು ತಲುಪುತ್ತಿಲ್ಲ. ಎಸ್ಯುಸಿಐನಿಂದ ಹಲವು ಚಳವಳಿ, ಹೋರಾಟ ರೂಪಿಸಿದ್ದೇವೆ. ಹೋರಾಟದ ಭಾಗವಾಗಿ ಚುನಾವಣೆ ಎದುರಿಸುತ್ತೇವೆ ಎಂದರು.
ಎಸ್.ಎನ್.ಸ್ವಾಮಿ, ‘ಕೊಬ್ಬರಿಗೆ ಬೆಂಬಲ ಬೆಲೆ ಕೊಡಿಸಲು ಯಾವುದೇ ಸಂಸದರೂ ಮುಂದೆ ಬರಲಿಲ್ಲ. ಸರ್ಕಾರ ರೈತರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ. ನಮ್ಮ ಸ್ಪರ್ಧೆಗೆ ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಲಿವೆ. ಮುಂದಿನ ದಿನಗಳಲ್ಲಿ ಎಲ್ಲ ತಾಲ್ಲೂಕು ವ್ಯಾಪ್ತಿಯಲ್ಲಿ ಬೆಂಬಲಿಗರ ಸಭೆ ನಡೆಸಲಾಗುವುದು’ ಎಂದು ತಿಳಿಸಿದರು.
ಎಸ್ಯುಸಿಐ ಪದಾಧಿಕಾರಿಗಳಾದ ಎಂ.ವಿ.ಕಲ್ಯಾಣಿ, ಮಂಜುಳಾ ಗೋನವಾರ, ಅಶ್ವಿನಿ, ರತ್ನಮ್ಮ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.