ತುಮಕೂರು: ಈ ಬಾರಿಯೂ ಮಾವು ಇಳುವರಿ ಕೈಕೊಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ಮರದಿಂದ ಪೀಚು ಉದುರಿ ಬೀಳುತ್ತಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ.
ಕಳೆದ ವರ್ಷ ಸಹ ‘ಹಣ್ಣಿನ ರಾಜ’ ಮಾವಿನ ಹಣ್ಣಿನ ಇಳುವರಿ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಈ ಬಾರಿ ಉತ್ತಮ ಇಳುವರಿ ಸಿಗುವ ನಿರೀಕ್ಷೆ ಮೂಡಿತ್ತು. ಆದರೆ ನಿರೀಕ್ಷೆಯಲ್ಲಿ ಅರ್ಧದಷ್ಟು ಬೆಳೆಯೂ ಕೈ ಸೇರುವುದು ಅನುಮಾನವಾಗಿದೆ. ಒಂದು ವರ್ಷ ಬೆಳೆ ಕೈಕೊಟ್ಟರೆ, ಮತ್ತೊಂದು ವರ್ಷ ಇಳುವರಿಯಲ್ಲಿ ಹೆಚ್ಚಳವಾಗುವುದು ಸಾಮಾನ್ಯ ಸಂಗತಿ. ಈ ವರ್ಷ ಇಳುವರಿ ಕಡಿಮೆಯಾದರೆ ಸತತವಾಗಿ ಎರಡು ವರ್ಷ ಕೈಕೊಟ್ಟಂತಾಗಲಿದೆ.
ಜನವರಿ ಕೊನೆ ಹಾಗೂ ಫೆಬ್ರುವರಿ ತಿಂಗಳ ಆರಂಭದಲ್ಲಿ ಮಾವಿನ ಮರದಲ್ಲಿ ನಿರೀಕ್ಷೆಗೂ ಮೀರಿ ಹೂವು ಕಾಣಿಸಿಕೊಂಡಿತ್ತು. ಅದೇ ಪ್ರಮಾಣದಲ್ಲಿ ಕಾಯಿ ಸಹ ಕಟ್ಟಿತ್ತು. ಬಿಸಿಲಿನ ತಾಪ ತಡೆದುಕೊಳ್ಳಲಾಗದೆ ಮರದಲ್ಲಿನ ಪೀಚು ಉದುರುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ದಿನದಿಂದ ದಿನಕ್ಕೆ ಬಿಸಿಲಿನ ತಾಪ ತೀವ್ರವಾಗಿ ಏರಿಕೆಯಾಗುತ್ತಿದೆ. ಫೆಬ್ರುವರಿ ತಿಂಗಳಲ್ಲಿ ದಾಖಲೆ ಮಟ್ಟದಲ್ಲಿ ತಾಪಮಾನ ಏರಿಕೆ ಕಂಡಿತ್ತು. ಮಾರ್ಚ್ ಕಾಲಿಡುವ ಹೊತ್ತಿಗೆ ಉಷ್ಣಾಂಶದಲ್ಲಿ ಮತ್ತಷ್ಟು ಹೆಚ್ಚಳವಾಯಿತು. ಈ ತಿಂಗಳ ಎರಡನೇ ವಾರದಿಂದ ಮತ್ತಷ್ಟು ಏರಿಕೆಯಾಗಿದ್ದು, ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗಿದೆ. ಇದರಿಂದಾಗಿ ಮರದಲ್ಲಿ ಪೀಚು ನಿಲ್ಲುತ್ತಿಲ್ಲ. ಕಾಯಿ ಬಲಿಯುವ ಮೊದಲೇ ಕಳಚಿ ಬೀಳುತ್ತಿದೆ.
ಈ ಸಮಯದಲ್ಲಿ ಮಾವಿನ ಮರದಲ್ಲಿ ಚಿಗುರು ಮೂಡಿರುವುದು ಇಳುವರಿ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಮರ ಚಿಗುರೊಡೆದರೆ ಇರುವ ಹೂವು ಕಾಯಿ ಕಟ್ಟುವುದಿಲ್ಲ, ಕಾಯಿ ಕಳಚಿ ಬೀಳುತ್ತದೆ. ಹವಾಮಾನದಲ್ಲಿನ ವೈಪರೀತ್ಯದಿಂದ ಈ ರೀತಿ ಆಗುತ್ತಿದೆ ಎಂದು ಗೂಳೂರಿನ ರೈತ ನಾರಾಯಣಪ್ಪ ಹೇಳುತ್ತಾರೆ.
ಮಳೆ: ಹಿಂದಿನ ವರ್ಷ ಮಳೆಯ ಕಣ್ಣಾಮುಚ್ಚಾಲೆ ಮುಂದುವರಿದಿತ್ತು. ಮುಂಗಾರು ಪೂರ್ವದಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾಗಿದ್ದರೆ, ಮುಂಗಾರಿನಲ್ಲಿ ಉತ್ತಮ ಮಳೆಯಾಗಲಿಲ್ಲ. ಮುಂಗಾರಿನ ಕೊನೆ ಭಾಗ ಹಾಗೂ ಹಿಂಗಾರಿನಲ್ಲಿ ಸಾಧಾರಣ ಮಳೆ ಬಿತ್ತು. ನವೆಂಬರ್ ಅಂತ್ಯದ ವೇಳೆಗೆ ಕೊನೆಗೊಂಡಿತ್ತು. ಸತತವಾಗಿ ನಾಲ್ಕು ತಿಂಗಳಿಂದ ಮಳೆ ಇಲ್ಲವಾಗಿದ್ದು, ಭೂಮಿಯಲ್ಲಿ ತೇವಾಂಶವೂ ತಗ್ಗಿದೆ. ಬಿಸಿಲಿನ ತಾಪಕ್ಕೆ ಭೂಮಿಯ ತೇವಾಂಶ ಕಡಿಮೆಯಾಗುತ್ತಿದ್ದು, ಮರದಿಂದ ಕಾಯಿ ಉದುರಲು ಆರಂಭಿಸಿದೆ.
ಮರದಿಂದ ಕಾಯಿ ಉದುರುತ್ತಿರುವುದರಿಂದ ಸರಾಸರಿ ಇಳುವರಿಯಲ್ಲಿ ಅರ್ಧದಷ್ಟು ಕಡಿಮೆಯಾಗಬಹುದು ಎಂದು ತೋಟಗಾರಿಕೆ ಇಲಾಖೆ ಅಂದಾಜು ಮಾಡಿದೆ. ಹಿಂದಿನ ವರ್ಷ ಜಿಲ್ಲೆಯಲ್ಲಿ 1.19 ಲಕ್ಷ ಮೆಟ್ರಿಕ್ ಟನ್ ಮಾವಿನ ಹಣ್ಣು ಉತ್ಪಾದನೆಯಾಗಿತ್ತು. ಆದರೆ ಈ ಬಾರಿ 60 ಲಕ್ಷ ಮೆಟ್ರಿಕ್ ಟನ್ಗಳಿಂದ 70 ಲಕ್ಷ ಮೆಟ್ರಿಕ್ ಟನ್ಗಳಷ್ಟು ಉತ್ಪಾದನೆಯಾಗಬಹುದು ಎಂದು ಹೇಳಲಾಗುತ್ತಿದೆ. ಬೆಲೆ ಏರಿಕೆ: ಹಣ್ಣಿನ ಉತ್ಪಾದನೆ ಕಡಿಮೆಯಾದಷ್ಟು ಬೆಲೆ ದುಬಾರಿಯಾಗಲಿದೆ. ಹಿಂದಿನ ವರ್ಷ ಸಹ ಬೇಡಿಕೆಯಷ್ಟು ಹಣ್ಣು ಮಾರುಕಟ್ಟೆಗೆ ಬಂದಿರಲಿಲ್ಲ. ಈ ಬಾರಿಯೂ ಉತ್ತಮ ಬೆಲೆ ಸಿಗಲಿದೆ. ** ತಾಪಮಾನ ಹೆಚ್ಚಳ ವಾತಾವರಣದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಮಾವಿನ ಮರದಿಂದ ಕಾಯಿ ಉದುರುತ್ತಿದೆ. ಇದು ಇಳುವರಿ ಮೇಲೆ ಪರಿಣಾಮ ಬೀರಲಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಮಾವು ಉತ್ಪಾದನೆ ಅರ್ಧದಷ್ಟು ಕಡಿಮೆಯಾಗಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಬಿ.ಸಿ.ಶಾರದಮ್ಮ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.