ADVERTISEMENT

ಹುಳಿಯಾರು | ಪರ-ವಿರೋಧ ಸಂಘರ್ಷ– ಭದ್ರತೆಯಲ್ಲಿ ಅಧಿಕಾರ ಸ್ವೀಕಾರ

ಹುಳಿಯಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಧಿಕಾರ ಸ್ವಿಕಾರ ವಿವಾದ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 5:37 IST
Last Updated 5 ಸೆಪ್ಟೆಂಬರ್ 2025, 5:37 IST
ಹುಳಿಯಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಧಿಕಾರ ಸ್ವೀಕಾರದ ನಾಟಕೀಯ ಬೆಳವಣಿಗೆಯಲ್ಲಿ ಪರ-ವಿರೋಧದ ನಡುವೆಯೂ ಅಧಿಕಾರ ಸ್ವೀಕರಿಸಿ ಮುಂಜುನಾಥ್‌ ಜನರಿಗೆ ಕೈ ಮುಗಿದರು
ಹುಳಿಯಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಧಿಕಾರ ಸ್ವೀಕಾರದ ನಾಟಕೀಯ ಬೆಳವಣಿಗೆಯಲ್ಲಿ ಪರ-ವಿರೋಧದ ನಡುವೆಯೂ ಅಧಿಕಾರ ಸ್ವೀಕರಿಸಿ ಮುಂಜುನಾಥ್‌ ಜನರಿಗೆ ಕೈ ಮುಗಿದರು   

ಹುಳಿಯಾರು: ಪಟ್ಟಣ ಪಂಚಾಯಿತಿ ನೂತನ ಮುಖ್ಯಾಧಿಕಾರಿಯಾಗಿ ಮಂಜುನಾಥ್ ನೇಮಕವಾಗಿದ್ದು, ಗುರುವಾರ ಅಧಿಕಾರ ಸ್ವೀಕರಿಸಲು ಬಂದಾಗ ಪಟ್ಟಣದಲ್ಲಿ ಗೊಂದಲಮಯ ವಾತಾವರಣ ಉಂಟಾಯಿತು. ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ಅಧಿಕಾರ ವಹಿಸಿಕೊಂಡರು.

ವಿವಾದ ಏನು?: ಈ ಹಿಂದೆ ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ಮಾಡಿದ್ದ ಮಂಜುನಾಥ್ ಅವರ ಕಾರ್ಯವೈಖರಿ ಕುರಿತು ಕೆಲ ಸದಸ್ಯರು ಮತ್ತು ಸ್ಥಳೀಯರಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಹಿಂದಿನ ಅಧಿಕಾರಾವಧಿಯಲ್ಲಿ ಅವರ ನಡವಳಿಕೆಯಿಂದ ಪಟ್ಟಣದಲ್ಲಿ ಅನಾವಶ್ಯಕವಾಗಿ ಗಲಭೆಗಳು ಸೃಷ್ಟಿಯಾಗಿದ್ದವು ಮತ್ತು ಕೆಲ ದಾಖಲೆಗಳು ಕಾಣೆಯಾಗಿದ್ದವು ಎಂದು ಆರೋಪಿಸಲಾಗಿತ್ತು. ಈಗ ಮತ್ತೆ ಅವರನ್ನೇ ನೇಮಕ ಮಾಡಿರುವುದನ್ನು ಒಂದು ಗುಂಪು ವಿರೋಧಿಸಿತ್ತು.

ಮಂಜುನಾಥ್ ಅಧಿಕಾರ ವಹಿಸಿಕೊಳ್ಳಲು ಬರುತ್ತಿದ್ದ ಸುದ್ದಿ ತಿಳಿದ ಕೂಡಲೇ 18 ಸದಸ್ಯರ ಪೈಕಿ 9 ಸದಸ್ಯರು ಹಾಗೂ ಕೆಲವರು ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಕಚೇರಿ ಪ್ರವೇಶ ದ್ವಾರದಲ್ಲೇ ಶಾಮಿಯಾನ ಹಾಕಿ, ಬಾಗಿಲಿಗೆ ಅಡ್ಡವಾಗಿ ಕುಳಿತು ‘ಗೋ ಬ್ಯಾಕ್ ಮಂಜುನಾಥ್’ ಎಂದು ಘೋಷಣೆಗಳನ್ನು ಕೂಗಿದರು. ಶಾಸಕರು ಬರುವವರೆಗೂ ಮಂಜುನಾಥ್ ಅವರನ್ನು ಒಳಗೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಅಧ್ಯಕ್ಷೆ ರತ್ನಮ್ಮ ಹಾಗೂ ಸದಸ್ಯರಾದ ರಾಜು ಬಡಗಿ, ಎಸ್.ಆರ್.ಎಸ್. ದಯಾನಂದ್, ಹೇಮಂತ್ ಕುಮಾರ್, ಮಂಜಾನಾಯ್ಕ, ಕಾವ್ಯ ರಾಣಿ, ಪ್ರೀತಿ ರಾಘವೇಂದ್ರ, ಜಹೀರ್ ಸಾಬ್, ದಸ್ತಗಿರ್ ಸಾಬ್ ಅವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ADVERTISEMENT

ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಾಗ, ಚಿಕ್ಕನಾಯಕನಹಳ್ಳಿ ವೃತ್ತ ನಿರೀಕ್ಷಕ ಎಫ್.ಕೆ. ನದಾಫ್ ಮತ್ತು ಪಿಎಸ್‌ಐ ಧರ್ಮಾಂಜಿ ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ‘ಪ್ರತಿಭಟನೆಗೆ ನಮ್ಮ ಅಡ್ಡಿ ಇಲ್ಲ. ಆದರೆ ಅಧಿಕಾರಿಗೆ ರಕ್ಷಣೆ ಕೊಡುವುದು ನಮ್ಮ ಕರ್ತವ್ಯ. ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುವುದು’ ಎಂದು ಎಚ್ಚರಿಸಿದರು.

ಇನ್ನೊಂದು ಗುಂಪಿನಲ್ಲಿ ಅಬೂಬಕ್ಕರ್ ಸಿದ್ದೀಕ್, ಮಹಮದ್ ಜುಬೇರ್, ಕಿರಣ್ ಕುಮಾರ್, ವೆಂಕಟೇಶ್, ಬಿ.ಬಿ. ಫಾತಿಮಾ ಮತ್ತಿತರರು ಸೇರಿ ಸರ್ಕಾರದ ಆದೇಶ ಪಾಲಿಸಿ ಮಂಜುನಾಥ್ ಅವರಿಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡುವಂತೆ ಪೊಲೀಸರಿಗೆ ಒತ್ತಡ ಹೇರಿದರು.

ಸಂಘರ್ಷ ಹೆಚ್ಚಾದಾಗ ಪೊಲೀಸರು ಹೆಚ್ಚಿನ ಬಲ ತರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಈ ಬಿಗುವಿನ ನಡುವೆಯೇ ಮಂಜುನಾಥ್ ಅವರು ಕಚೇರಿ ಪ್ರವೇಶಿಸಲು ಮುಂದಾದರು. ಕಚೇರಿಯಲ್ಲಿ ರಿಜಿಸ್ಟರ್ ದೊರೆಯದ ಕಾರಣ ಬಿ.ಆರ್. ಅಂಬೇಡ್ಕರ್ ಅವರ ಫೋಟೊ ಪಕ್ಕದ ಗೋಡೆಯ ಮೇಲೆ ತಾವು ಅಧಿಕಾರ ವಹಿಸಿಕೊಂಡಿರುವುದಾಗಿ ಸಹಿ ಮಾಡುವ ಮೂಲಕ ನಾಟಕೀಯ ಬೆಳವಣಿಗೆಗೆ ಕಾರಣರಾದರು.

ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಮಂಜುನಾಥ್, ‘ನಾನು ಕಾನೂನಾತ್ಮಕವಾಗಿ ಅಧಿಕಾರವಹಿಸಿಕೊಂಡಿದ್ದೇನೆ. ನಿಮ್ಮೆಲ್ಲರ ಸಹಕಾರದಿಂದ ಪಟ್ಟಣವನ್ನು ಅಭಿವೃದ್ಧಿ ಮಾಡಲು ಕಂಕಣಬದ್ಧನಾಗಿದ್ದೇನೆ. ಹಿಂದೆ ಏನಾದರೂ ಸಮಸ್ಯೆಗಳಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಅವಧಿಯಲ್ಲಿ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ಸದ್ಯಕ್ಕೆ ಪ್ರತಿಭಟನೆ ತಣ್ಣಗಾಗಿದ್ದು, ಶಾಸಕರನ್ನು ಭೇಟಿಯಾಗಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ವಿರೋಧಿ ಗುಂಪು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.