ತುಮಕೂರು: ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಲು ಏಕಾಏಕಿ ರಸ್ತೆಗಳನ್ನು ಅಗೆಯಲಾಗಿದೆ.
ಮುನ್ಸೂಚನೆ ಇಲ್ಲದೆ ಗುರುವಾರ ಕಾಮಗಾರಿ ಆರಂಭಿಸಿದ್ದರಿಂದ ವ್ಯಾಪಾರ ವಹಿವಾಟಿಗೆ ಅಡಚಣೆಯಾಯಿತು. ವ್ಯಾಪಾರಸ್ಥರು ವ್ಯಾಪಾರ ಮಾಡಲು ಸಾಧ್ಯವಾಗಲಿಲ್ಲ. ಮಾರುಕಟ್ಟೆಗೆ ಬಂದವರು ಹಣ್ಣು, ತರಕಾರಿ ಖರೀದಿಸಲು ಪರದಾಡಿದರು.
ಕಾಮಗಾರಿ ಆರಂಭಿಸುವ ಬಗ್ಗೆ ಮಾಹಿತಿ ನೀಡದೆ, ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡದೆ ಕೆಲಸ ಆರಂಭಿಸಿರುವುದಕ್ಕೆ ಎಪಿಎಂಸಿ ಅಧಿಕಾರಿಗಳ ವಿರುದ್ಧ ವರ್ತಕರು ಅಸಮಾಧಾನ ವ್ಯಕ್ತಪಡಿಸಿದರು.
ಮಳೆಗಾಲದಲ್ಲಿ ನೀರು ಮಾರುಕಟ್ಟೆ ಒಳಗೆ ನುಗ್ಗಿ ಅವಾಂತರ ಸೃಷ್ಟಿಸುತಿತ್ತು. ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೆ ಸಮಸ್ಯೆಯಾಗಿತ್ತು. ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಆಗಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದೇವೆ. ಮಾರುಕಟ್ಟೆ ಅಭಿವೃದ್ಧಿಗೆ ವಿರೋಧ ಮಾಡುತ್ತಿಲ್ಲ. ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆಮಾಡದೆ ಏಕಾಏಕಿ ಕೆಲಸ ಆರಂಭಿಸಲಾಗಿದೆ. ಇದರಿಂದ ಕೋವಿಡ್ ಸಮಯದಲ್ಲಿ ಸಮಸ್ಯೆಗೆ ಸಿಲುಕಬೇಕಾಯಿತು ಎಂದು ವರ್ತಕರು ದೂರಿದರು.
ಕೋವಿಡ್ ಲಾಕ್ಡೌನ್ ಸಮಯದಲ್ಲಿ ಬೆಳಿಗ್ಗೆ 10 ಗಂಟೆವರೆಗೆ ಮಾತ್ರ ವ್ಯಾಪಾರ ನಡೆಸಲು ಅವಕಾಶ ನೀಡಲಾಗಿದೆ. ಅದೇ ಸಮಯದಲ್ಲಿ ಕೆಲಸ ಆರಂಭಿಸಿದ್ದರಿಂದ ಮಾರುಕಟ್ಟೆಗೆ ತರಕಾರಿ ತರುವ ರೈತರಿಗೆ ಹಾಗೂ ವ್ಯಾಪಾರಿಗಳಿಗೆ ಅನನುಕೂಲವಾಗಿದೆ. ರೈತರ ಉತ್ಪನ್ನಗಳಿಗೂ ಬೆಲೆ ಸಿಗುತ್ತಿಲ್ಲ. ವ್ಯಾಪಾರಕ್ಕೂ ಅವಕಾಶ ಇಲ್ಲವಾಗಿದೆ. ಇಂತಹ ಸಮಯದಲ್ಲಿ ಎಪಿಎಂಸಿ ಅಧಿಕಾರಿಗಳು ಕಾಮಗಾರಿ ನೆಪದಲ್ಲಿ ತೊಂದರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿ, ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಕೋರುವುದಾಗಿ ಮಾರುಕಟ್ಟೆವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಮುತ್ತುರಾಯಪ್ಪ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.