ತುಮಕೂರು: ಈಗಾಗಲೇ ಸರ್ಕಾರಿ ಉದ್ಯೋಗಿಯನ್ನು ಮದುವೆಯಾಗಿ, ಮತ್ತೊಂದು ಯುವತಿ ಜತೆ ನಿಶ್ಚಿತಾರ್ಥ ಮಾಡಿಕೊಂಡ ಆರೋಪದ ಮೇಲೆ ನಗರದ ಶಿರಾ ಗೇಟ್ ನಿವಾಸಿ ಯಶಸ್ವಿ, ಅವರ ತಂದೆ ಇಂದ್ರಕುಮಾರ್, ತಾಯಿ ನಳಿನಾ ಇಂದ್ರಕುಮಾರ್ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಶಸ್ವಿ ತಂದೆ, ತಾಯಿ ಇಬ್ಬರು ಮಹಾನಗರ ಪಾಲಿಕೆ ಮಾಜಿ ಸದಸ್ಯರು. ಮದುವೆಯಾಗಿದ್ದರು ಎನ್ನಲಾದ ಮಹಿಳೆ, ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ಇಬ್ಬರು ಇಂದ್ರಕುಮಾರ್ ಮನೆ ಬಳಿ ಹೋದಾಗ ಗಲಾಟೆಯಾಗಿದೆ. ಘಟನೆ ನಂತರ ಯಶಸ್ವಿ ಪರಾರಿಯಾಗಿದ್ದಾರೆ.
ಮಹಿಳೆ ನೀಡಿದ ದೂರಿನ ಮೇರೆಗೆ ಎಸ್.ಸಿ, ಎಸ್.ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ. ‘ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಆರೋಪಿ ಬಂಧನದ ನಂತರ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಯಶಸ್ವಿ ಮನೆಯಲ್ಲಿ ಬಾಡಿಗೆಗೆ ಇದ್ದಾಗ ಅವರ ಪರಿಚಯವಾಗಿತ್ತು. ಇದೇ ವೇಳೆ ಇಬ್ಬರ ಮಧ್ಯೆ ಪ್ರೀತಿ ಶುರುವಾಗಿತ್ತು. ಬೇರೆ ಹುಡುಗಿ ಜತೆ ಅನೈತಿಕ ಸಂಬಂಧ ಇರುವುದನ್ನು ಪ್ರಶ್ನೆ ಮಾಡಿದಾಗ, 2023ರ ಸೆ. 17ರಂದು ಬೆಂಗಳೂರಿನ ಹೆಬ್ಬಾಳದ ದೇವಾಲಯದಲ್ಲಿ ನನ್ನ ಮದುವೆಯಾಗಿದ್ದರು. ಸುಮಾರು ₹15 ಲಕ್ಷ ಹಣ, ಆಭರಣ ಪಡೆದಿದ್ದಾರೆ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
‘ಕೆಲ ದಿನಗಳ ನಂತರ ಇಂದ್ರಕುಮಾರ್, ನಳಿನಾ ಇಂದ್ರಕುಮಾರ್ ನನ್ನನ್ನು ಭೇಟಿಯಾಗಿ ಈ ಮದುವೆ ನಮಗೆ ಒಪ್ಪಿಗೆ ಇಲ್ಲ ಎಂದಿದ್ದರು. ಶಿರಾ ಗೇಟ್ ಬಳಿ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದರು. ಇದಾದ ಬಳಿಕ ನಾನು ಮನೆಯಲ್ಲಿ ಒಪ್ಪಿಸುತ್ತೇನೆ ಎಂದು ಯಶಸ್ವಿ ನಂಬಿಸಿದ್ದರು. ಈಗ ಮತ್ತೊಂದು ಮದುವೆಗೆ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ರಿಜಿಸ್ಟರ್ ಮದುವೆಯಾಗಿದ್ದಾರೆ’ ಎಂದು ಮಹಿಳೆ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.