ADVERTISEMENT

ತುಮಕೂರು: ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 5:01 IST
Last Updated 8 ಜೂನ್ 2025, 5:01 IST
ತುಮಕೂರಿನ ಈದ್ಗಾ ಮೈದಾನದಲ್ಲಿ ಶನಿವಾರ ಬಕ್ರೀದ್‌ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ನೆರವೇರಿತು
ತುಮಕೂರಿನ ಈದ್ಗಾ ಮೈದಾನದಲ್ಲಿ ಶನಿವಾರ ಬಕ್ರೀದ್‌ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ನೆರವೇರಿತು   

ತುಮಕೂರು: ತ್ಯಾಗ, ಬಲಿದಾನದ ಪ್ರತೀಕವಾದ ‘ಈದ್‌–ಉಲ್‌–ಅದಾ’ವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಬ್ರಕೀದ್‌ ಸಂಭ್ರಮ ಎಲ್ಲೆಡೆ ಜೋರಾಗಿತ್ತು.

ಎಲ್ಲ ಮಸೀದಿಗಳಲ್ಲಿ ಪ್ರಾರ್ಥನೆ ನೆರವೇರಿತು. ನಗರದ ಕುಣಿಗಲ್‌ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಜನ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಹಬ್ಬದ ಶುಭಾಶಯ ಕೋರಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮೈದಾನದ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಸಾಮೂಹಿಕ ಪ್ರಾರ್ಥನೆ ನಂತರ ಮಕ್ಕಾ ಮಸೀದಿ, ಈದ್ಗಾ ಮೊಹಲ್ಲಾ ಪಕ್ಕದಲ್ಲಿರುವ ಕೌಸರ್‌ ಮಸೀದಿ ಸೇರಿ ನಗರದ ವಿವಿಧ ಮಸೀದಿಗಳಲ್ಲಿ ಜರುಗಿದ ಪ್ರಾರ್ಥನೆಯಲ್ಲಿ ಮುಸ್ಲಿಮರು ಭಾಗವಹಿಸಿದ್ದರು. ಇದಾದ ಬಳಿಕ ತಮ್ಮ ಹಿರಿಯರ ಸಮಾಧಿ ಹತ್ತಿರ ಹೋಗಿ ಆಶೀರ್ವಾದ ಪಡೆದರು.

ADVERTISEMENT

ದಾನ ಮಾಡುವುದು ಬಕ್ರೀದ್‌ ಹಬ್ಬದ ಮತ್ತೊಂದು ವಿಶೇಷ. ಹಬ್ಬದ ದಿನ ಮುಸ್ಲಿಂ ಸಮುದಾಯದವರು ಸಮಾಜದ ನಿರ್ಗತಿಕರು, ಬಡವರಿಗೆ ಮಾಂಸ ಮತ್ತು ಇತರೆ ಆಹಾರ ಸಾಮಗ್ರಿ ದಾನ ಮಾಡಿದರು. ಎಲ್ಲರು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು ಎಂಬುವುದು ಇದರ ಹಿಂದಿನ ಉದ್ದೇಶ. ಸ್ನೇಹಿತರು, ಸಂಬಂಧಿಗಳನ್ನು ಮನೆಗೆ ಕರೆದು ಹಬ್ಬದೂಟ ಉಣ ಬಡಿಸಿದರು. ಸ್ನೇಹಿತರ ಮನೆಗಳಿಗೆ ತೆರಳಿ ಹಬ್ಬದ ಶುಭಾಶಯ ತಿಳಿಸಿದರು.

ಬಕ್ರೀದ್‌ ಹಬ್ಬಕ್ಕೆ ಬಿರಿಯಾನಿ, ಮಾಂಸದ ಊಟ ಕಾಯಂ ಆಗಿರುತ್ತದೆ. ಶನಿವಾರ ಮಾಂಸದ ಅಂಗಡಿಗಳ ಮುಂದೆ ಜನ ಸರತಿ ಸಾಲಿನಲ್ಲಿ ನಿಂತಿದ್ದರು. ಎಲ್ಲ ಕಡೆಗಳಲ್ಲಿ ಉತ್ತಮ ವಹಿವಾಟು ನಡೆಯಿತು. ಕೋತಿತೋಪು ಮುಖ್ಯರಸ್ತೆಯಲ್ಲಿ ಬೆಳಿಗ್ಗೆಯಿಂದಲೇ ಮಾಂಸದ ಖರೀದಿಯಲ್ಲಿ ತೊಡಗಿಸಿಕೊಂಡಿದ್ದ ದೃಶ್ಯಗಳು ಕಂಡು ಬಂದವು. ಹಬ್ಬ ಆಚರಣೆಗಾಗಿ ಎರಡು–ಮೂರು ದಿನಗಳಿಂದ ಕುರಿ, ಮೇಕೆ ಖರೀದಿಯೂ ನಡೆದಿತ್ತು.

ಈದ್ಗಾ ಮೈದಾನಕ್ಕೆ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರೇಶೇಖರಗೌಡ, ಮುಖಂಡರಾದ ಇಕ್ಬಾಲ್‌ ಅಹ್ಮದ್‌, ಕೆಂಚಮಾರಯ್ಯ, ರೇವಣಸಿದ್ದಯ್ಯ, ಅಸ್ಲಾಂಪಾಷ ಭೇಟಿ ನೀಡಿ ಹಬ್ಬದ ಶುಭಾಶಯ ಕೋರಿದರು.

‘ಬಕ್ರೀದ್‌ ಶಾಂತಿ, ಸೌಹಾರ್ದತೆಯ ಪ್ರತೀಕ. ಎಲ್ಲರು ಸಹಬಾಳ್ವೆಯಿಂದ ಜೀವನ ನಡೆಸಬೇಕು. ಮನುಕುಲಕ್ಕೆ ಶಾಂತಿ ದೊರೆಯಲಿ, ಉತ್ತಮ ಮಳೆ–ಬೆಳೆಯಾಗಲಿ ಎಂದು ಸಾಮೂಹಿಕ ಪ್ರಾರ್ಥನೆಯಲ್ಲಿ ಕೋರಲಾಯಿತು. ನಮ್ಮಲ್ಲಿರುವ ಅಸೂಯೆ, ದ್ವೇಷ ತೊಡೆದು ಹಾಕಬೇಕು’ ಎಂದು ಮುಸ್ಲಿಂ ಮುಖಂಡರು ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.