ತುಮಕೂರು: ನಗರದಲ್ಲಿ ಸ್ಮಾರ್ಟ್ಸಿಟಿ ಹಾಗೂ ವಿವಿಧ ಯೋಜನೆಗಳಡಿ ಒಳಚರಂಡಿ, 24*7 ಕುಡಿಯುವ ನೀರು ಹಾಗೂ ಇನ್ನಿತರ ಕಾಮಗಾರಿಗಳಿಗೆ ಆಗೆದಿರುವ ರಸ್ತೆಗಳನ್ನು ಶೀಘ್ರವೇ ವೈಜ್ಞಾನಿಕ ರೀತಿಯಲ್ಲಿ ಮುಚ್ಚಬೇಕು ಎಂದು ಮೇಯರ್ ಫರೀದಾ ಬೇಗಂ ಅಧಿಕಾರಿಗಳಿಗೆ ಸೂಚಿಸಿದರು.
ನಗರದ 15ನೇ ವಾರ್ಡ್ನ ಸೋಮೇಶ್ವರಂ 9ನೇ ಕ್ರಾಸ್ನಲ್ಲಿ ಯುಜಿಡಿಗಾಗಿ ರಸ್ತೆ ಅಗೆದಿರುವ ಸ್ಥಳ ಪರಿಶೀಲಿಸಿದರು. ರಸ್ತೆಯನ್ನು ಎರಡು ತಿಂಗಳಾದರೂ ಮುಚ್ಚಿಲ್ಲ. ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರ ದೂರಿದ ಹಿನ್ನೆಲೆಯಲ್ಲಿ ಶುಕ್ರವಾರ ಭೇಟಿ ನೀಡಿದ್ದರು.
15, 26 ಹಾಗೂ 27ನೇ ವಾರ್ಡ್ ಮೂಲಕ ಹಾದು ಹೋಗುವ ದೊಡ್ಡ ಚರಂಡಿಯನ್ನು ಶುಚಿಗೊಳಿಸಬೇಕು ಎಂದರು.
ಯುಜಿಡಿಗಾಗಿ ಅಗೆದಿರುವ ರಸ್ತೆಯನ್ನು ಎರಡು ತಿಂಗಳಾದರೂ ಮುಚ್ಚಿಲ್ಲ. ವಾಹನಗಳು ಹಾದು ಹೋಗಲು ಆಗುತ್ತಿಲ್ಲ. ಕೆಲವರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಗಮನ ಸೆಳೆದರು.
ವಾರ್ಡ್ ಸದಸ್ಯೆ ಗಿರಿಜಾ ಧನಿಯಕುಮಾರ್, ಮಳೆ ಬೀಳುವ ಮುನ್ನ ಚರಂಡಿ ಶುಚಿಗೊಳಿಸಿದರೆ ಸಾಂಕ್ರಾಮಿಕ ರೋಗಗಳನ್ನು ತಡೆಯಬಹುದು. 9, 10ನೇ ಅಡ್ಡರಸ್ತೆಗಳಲ್ಲಿಯೂ ರಸ್ತೆಯ ಗುಂಡಿ ಮುಚ್ಚಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.