ತುಮಕೂರು: ಹಾಥರಸ್ ದುರ್ಘಟನೆ ನಡೆದು ಒಂದು ತಿಂಗಳಾದ ಮೇರೆಗೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ (ಎಐಎಂಎಸ್ಎಸ್) ಊರ್ಡಿಗೆರೆಯ ಬಸ್ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲಾಯಿತು.
ರೈತ ಕೂಲಿ ಕಾರ್ಮಿಕರ ಸಂಘನೆಯ ರಾಜ್ಯ ಸಮಿತಿ ಸದಸ್ಯ ಎಸ್.ಎನ್.ಸ್ವಾಮಿ ಮಾತನಾಡಿ, ಬಹುಸಂಖ್ಯಾತರಾದ ಜನಸಾಮಾನ್ಯರ ಪರವಾದ ನೀತಿಗಳನ್ನು ಸರ್ಕಾರ ರೂಪಿಸಬೇಕು. ಆದರೆ ಇಂದಿನ ಎಲ್ಲ ರಾಜಕೀಯ ಪಕ್ಷಗಳೂ ಕಾರ್ಪೊರೇಟ್ ಮನೆತನಗಳ ಪರವಾಗಿವೆ ಎಂದು ದೂರಿದರು.
ಮಾಧ್ಯಮಗಳು ಮಹಿಳೆಯರನ್ನು ಭೋಗದ ವಸ್ತುಗಳು ಎಂದು ಬಿಂಬಿಸುತ್ತಿವೆ. ಯುವಕರ ಮನಸ್ಸನ್ನು ಕಲುಷಿತಗೊಳಿಸಲಾಗುತ್ತಿದೆ. ಇದರಿಂದ ಮಹಿಳೆಯರ ಮೇಲೆ ಅತ್ಯಾಚಾರಗಳು ಹೆಚ್ಚುತ್ತಿವೆ. ಉನ್ನತ ಆದರ್ಶಗಳ ಕೊರತೆ ಸಮಾಜವನ್ನು ಕಾಡುತ್ತಿದೆ ಎಂದರು.
ಎಐಎಂಎಸ್ಎಸ್ ಜಿಲ್ಲಾ ಘಟಕದ ಅಧ್ಯಕ್ಷೆ ಕಲ್ಯಾಣಿ, ಹಾಥರಸ್ ಅತ್ಯಾಚಾರ ಪ್ರಕರಣಕ್ಕೆ ನಾಗರಿಕ ಸಮಾಜ ತಲೆತಗ್ಗಿಸಬೇಕು. ದುರಂತ ಎಂದರೆ ಮಾನವೀಯ ಮೌಲ್ಯಗಳನ್ನು ಸರ್ಕಾರ ಕಳೆದುಕೊಂಡಿದೆ. ರಾಮರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷೆ ನಿರೀಕ್ಷಿಸಲು ಸಾಧ್ಯವಿಲ್ಲ. ಉನ್ನತ ನೀತಿ, ಸಂಸ್ಕೃತಿ, ಸಮಾನತೆಯ ಸಮಾಜ ನಿರ್ಮಿಸಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರತ್ನಮ್ಮ,ಅಶ್ವಿನಿ, ಮಂಜುಳಾ, ವಿದ್ಯಾ, ಉಮಾದೇವಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.