ADVERTISEMENT

ಹಿಂದೂ ವ್ಯಕ್ತಿಯ ಶವಸಂಸ್ಕಾರಕ್ಕೆ ಹೆಗಲು ಕೊಟ್ಟ ಮುಸ್ಲಿಂ ಯುವಕರು

​ಪ್ರಜಾವಾಣಿ ವಾರ್ತೆ
Published 12 ಮೇ 2020, 17:12 IST
Last Updated 12 ಮೇ 2020, 17:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಅನಾರೋಗ್ಯದಿಂದ ಸಾವಿಗೀಡಾಗಿದ್ದ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಮುಸ್ಲಿಂ ಯುವಕರು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನಗರದ ಸೀಲ್‌ಡೌನ್‌ ಪ್ರದೇಶವಾದ ಕೆ.ಎಚ್‌.ಬಿ ಕಾಲೊನಿ ನಿವಾಸಿ ಎಚ್.ಎಸ್.ನಾರಾಯಣರಾವ್ (60) ವಯೋಸಹಜ ಸಮಸ್ಯೆಯಿಂದ ಸೋಮವಾರ ರಾತ್ರಿ ಮೃತಪಟ್ಟರು. ಸೀಲ್‌ಡೌನ್‌ ಪ್ರದೇಶವಾದ್ದರಿಂದ ನೆಂಟರಿಷ್ಟರು ಮೃತರ ಕುಟುಂಬವಿದ್ಧ ಸ್ಥಳಕ್ಕೆ ಹೋಗಲು ಸಾಧ್ಯವಾಗಿಲ್ಲ. ಇದರಿಂದ ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಲು ಸಂಕಷ್ಟಕ್ಕೆ ಸಿಲುಕಿದ್ದರು.

ನೆರವಿಗೆ ಧಾವಿಸಿದ ಮಹಮ್ಮದ್ ಖಲೀಲ್, ಇಮ್ರಾನ್, ಟಿಪ್ಪು, ಶೇರು, ಶಾರೂಕ್, ತೌಫಿಕ್, ಖತೀಬ್, ಮನ್ಸೂರ್ ಈ ವಿಚಾರವನ್ನು ಜಿಲ್ಲಾಡಳಿತದ ಗಮನಕ್ಕೆ ತಂದು ತಾವೇ ಅನುಮತಿ ಪಡೆದು, ಆಂಬುಲೆನ್ಸ್ ವ್ಯವಸ್ಥೆ ಮಾಡಿದರು. ಅಲ್ಲದೆ, ಮೃತ ದೇಹಕ್ಕೆ ಹೆಗಲು ಕೊಟ್ಟು ಆಂಬುಲೆನ್ಸ್‌ ಮೂಲಕ ಚಿತಾಗಾರಕ್ಕೆ ಸಾಗಿಸಿದರು.

ADVERTISEMENT

ಬಳಿಕ ಮೃತರ ಪತ್ನಿ, ಮಕ್ಕಳು ಸೇರಿ ನಗರದ ಗಾರ್ಡನ್‌ ಏರಿಯಾದಲ್ಲಿ ಇರುವ ಸರ್ಕಾರಿ ವಿದ್ಯುತ್ ಚಿತಾಗಾರದಲ್ಲಿ ಮಂಗಳವಾರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಮೃತರ ಅಂತ್ಯಕ್ರಿಯೆಗೆ ಮುಸ್ಲಿಂ ಯುವಕರು ಸಹಕರಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಯುವಕರ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕೋವಿಡ್ ಪರೀಕ್ಷೆ: ನಾರಾಯಣರಾವ್ ಸೀಲ್‌ಡೌನ್‌ ಪ್ರದೇಶದಲ್ಲಿ ನೆಲೆಸಿದ್ದರಿಂದ ನಾಲ್ಕು ದಿನಗಳ ಹಿಂದೆ ಕೋವಿಡ್–19 ಪರೀಕ್ಷೆಗೆ ಒಳಪಡಿಸಿದ್ದು, ವರದಿ ನೆಗೆಟಿವ್ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.