
ಶಿರಾ: ಈಡಿಗ ಜನಾಂಗದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಣವಾನಂದ ಸ್ವಾಮೀಜಿ ನಡೆಸುತ್ತಿರುವ ಪಾದಯಾತ್ರೆಗೆ ಬುಧವಾರ ಅದ್ದೂರಿ ಸ್ವಾಗತ ನೀಡಲಾಯಿತು.
ಚಿತ್ತಾಪುರ ತಾಲ್ಲೂಕಿನ ಕರಗಲ್ಲು ಗ್ರಾಮದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದಿಂದ ಬೆಂಗಳೂರಿನವರೆಗೆ ಸುಮಾರು 700 ಕಿ.ಮೀ ಪಾದಯಾತ್ರೆಯನ್ನು ಪ್ರಣವಾನಂದ ಸ್ವಾಮೀಜಿ ನಡೆಸುತ್ತಿದ್ದಾರೆ. ಬುಧವಾರ ತಾಲ್ಲೂಕಿನ ಗಡಿಭಾಗವಾದ ಉಜ್ಜನಕುಂಟೆ ಗ್ರಾಮದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿ ರಾಜ್ಯಾಧ್ಯಕ್ಷ ತಿಪ್ಪೇಶ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ಲೋಕೇಶ್ ಪಾದಯಾತ್ರೆಯನ್ನು ಶಿರಾ ತಾಲ್ಲೂಕು ಅಧ್ಯಕ್ಷ ಅಜ್ಜೇನಹಳ್ಳಿ ರಮೇಶ್ ಅವರಿಗೆ ಹಸ್ತಾಂತರಿಸಿದರು.
ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಈಡಿಗರ ಕುಲಕಸುಬಾದ ಸೇಂದಿ ಮಾರಾಟವನ್ನು ಪರ್ಯಾಯ ವ್ಯವಸ್ಥೆ ಮಾಡದೆ ನಿಷೇಧಿಸಲಾಗಿದೆ. ಇದರಿಂದ ಜನಾಂಗ ಆರ್ಥಿಕವಾಗಿ ಸಂಕಷ್ಟ ಅನುಭವಿಸುವಂತಾಗಿದೆ. ಕುಲಕಸಬು ಕಳೆದುಕೊಂಡ ಕುಟುಂಬಗಳಿಗೆ 5 ಎಕರೆ ಜಮೀನು ಮಂಜೂರು ಮಾಡಬೇಕು. ಈಡಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ನಾರಾಯಣ ಗುರು ಅವರ ಪುತ್ಥಳಿಯನ್ನು ಬೆಂಗಳೂರಿನ ವಿಧಾನಸೌಧದ ಮುಂದೆ ಪ್ರತಿಷ್ಠಾಪಿಸಬೇಕು. ಈಡಿಗರು ಹಾಗೂ ಹಿಂದುಳಿದವರ ಭಕ್ತಿ ಶ್ರದ್ಧಾ ಕೇಂದ್ರವಾದ ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ವಿರುದ್ಧ ಹೂಡಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಪಾದಯಾತ್ರೆ ಬುಧವಾರ ರಾತ್ರಿ ಶಿರಾದಲ್ಲಿ ತಂಗಲಿದ್ದು, ಗುರುವಾರ ಬೆಳಿಗ್ಗೆ ಪಾದಯಾತ್ರೆ ಮುಂದುವರೆಯಲಿದ್ದು ರಾತ್ರಿ ದೊಡ್ಡ ಆಲದಮರದಲ್ಲಿ ತಂಗಲಿದ್ದಾರೆ.
ಕೆಪಿಎಸ್ಸಿ ಮಾಜಿ ಸದಸ್ಯ ಲಕ್ಷ್ಮಿನರಸಯ್ಯ, ರಾಷ್ಟ್ರೀಯ ಈಡಿಗ ಮಹಾಮಂಡಳಿ ರಾಜ್ಯ ಕಾರ್ಯದರ್ಶಿ ಹನುಮಂತರಾಜು, ಜಿಲ್ಲಾಧ್ಯಕ್ಷ ಎ.ಸುರೇಶ್ (ಅಪ್ಪಿ ಮಾಸ್ಟರ್), ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಪ್ರಭಾ, ತಾಲ್ಲೂಕು ಅಧ್ಯಕ್ಷ ಅಜ್ಜೇನಹಳ್ಳಿ ರಮೇಶ್, ವೆಂಕಟಶ್ವಾಮಯ್ಯ, ಎವಿಸಿ ರಾಜಣ್ಣ, ಶ್ರೀನಿವಾಸ್, ಚಲಪತಿ, ಮೋಹನ್ ಕುಮಾರ್, ಶೇಷಾದ್ರಿ, ವೆಂಕಟೇಶ್, ವೆಂಕಟಾಚಲಯ್ಯ, ಚಂದ್ರಕಲಾ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.