ತುಮಕೂರು: ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ತುಮಕೂರು ಜಿಲ್ಲೆಯ ಬಿಜೆಪಿಯಲ್ಲಿ ಯಾವ ಗಂಡಸರೂ ಇರಲಿಲ್ಲವೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಪ್ರಶ್ನಿಸಿದ್ದಾರೆ.
ನಗರದಲ್ಲಿ ಗುರುವಾರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯ ಬಿಜೆಪಿಯಲ್ಲಿ ಗಂಡಸರು ಇಲ್ಲದೆ ಹೊರಗಿನವರನ್ನು ಕರೆತಂದು ನಿಲ್ಲಿಸಲಾಗಿದೆ. ಇದಕ್ಕೆ ಜನರು ತಕ್ಕ ಉತ್ತರ ನೀಡಬೇಕು. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸದಿದ್ದರೆ ಜಿಲ್ಲೆಯ ಜನರನ್ನು ನರ ಸತ್ತವರು ಎನ್ನುತ್ತಾರೆ’ ಎಂದು ಹೇಳಿದರು.
‘ಕಣದಲ್ಲಿ ಮನೆಯ ಮಗ ಹಾಗೂ ಆಚೆ ಮನೆಯ ಮಗ ಇದ್ದಾರೆ. ಅವರಲ್ಲಿ ಯಾರು ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಗಂಡಸರು ಹಾಗೂ ಗಂಡಸುತನ ಇದ್ದರೆ ಜಿಲ್ಲೆಯ ಅಭ್ಯರ್ಥಿಯನ್ನು ಗೆಲ್ಲಿಸಿ, ಹೊರಗಿನ ಅಭ್ಯರ್ಥಿಯನ್ನು ಸೋಲಿಸಬೇಕು. ಈಗ ನಿಮ್ಮ ಗಂಡಸುತನ ತೋರಿಸಬೇಕು’ ಎಂದು ಹೇಳುವ ಮೂಲಕ ಜಿಲ್ಲೆಯ ಜನರ ಸ್ವಾಭಿಮಾನ ಕೆಣಕಿದರು.
ಕಳೆದ ಬಾರಿ ಸಂಸದರಾಗಿದ್ದ ಜಿ.ಎಸ್.ಬಸವರಾಜು ಸಂಸತ್ನಲ್ಲಿ ಒಮ್ಮೆಯೂ ಬಾಯಿ ಬಿಡಲಿಲ್ಲ. ಚರ್ಚೆಯಲ್ಲಿ ಭಾಗವಹಿಸಲಿಲ್ಲ. ಜಿಲ್ಲೆ, ರಾಜ್ಯಕ್ಕೆ ಅವರಿಂದ ಏನೂ ಉಪಯೋಗ ಆಗಲಿಲ್ಲ. ಮತ್ತೆ ಚುನಾವಣೆಯಲ್ಲಿ ನಿಂತರೆ ಜನ ಛೀಮಾರಿ ಹಾಕುತ್ತಾರೆ ಎಂದು ಹೆದರಿಕೊಂಡು ಬೆಂಗಳೂರಿನಿಂದ ಕರೆತಂದು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ ಎಂದು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.