ADVERTISEMENT

ಕೊರಟಗೆರೆ: ‘ನಮ್ಮೂರ ಸರ್ಕಾರಿ ಶಾಲೆ’ ಉಳಿಸಲು ಸಮಾವೇಶ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 6:53 IST
Last Updated 2 ಫೆಬ್ರುವರಿ 2026, 6:53 IST
ಕೊರಟಗೆರೆಯಲ್ಲಿ ಎಐಡಿಎಸ್ಒ ನೇತೃತ್ವದಲ್ಲಿ ಸರ್ಕಾರಿ ಶಾಲೆ ಉಳಿಸಿ ಎಂದು ಪೋಷಕರ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು
ಕೊರಟಗೆರೆಯಲ್ಲಿ ಎಐಡಿಎಸ್ಒ ನೇತೃತ್ವದಲ್ಲಿ ಸರ್ಕಾರಿ ಶಾಲೆ ಉಳಿಸಿ ಎಂದು ಪೋಷಕರ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು   

ಕೊರಟಗೆರೆ: ‘ಜೀವ ಕೊಟ್ಟೇವು, ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಲು ಬಿಡುವುದಿಲ್ಲ’ ಎಂದು ಪಟ್ಟಣ ಪಂಚಾಯಿತಿ ಎದುರು ಭಾನುವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಪೋಷಕರು ಘೋಷಣೆ ಕೂಗಿದರು.

ಹರಿಹರಪ್ಪನಪಾಳ್ಯ, ಕಾಮರಾಜನಹಳ್ಳಿ, ಹುಲುಗೋನಹಳ್ಳಿ, ಗುಂಡಿನಪಾಳ್ಯ, ಹುಲಿಕುಂಟೆ, ಗೌರಗನಹಳ್ಳಿ, ಬೋಡಬಂಡೆನಹಳ್ಳಿ, ಮಲ್ಲೇಶ್ವರಂ, ಹಂಚಿಹಳ್ಳಿ, ದಿಣ್ಣೆಪಾಳ್ಯ ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಅಡಿ ಮುಚ್ಚುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಸಮಾವೇಶ ನಡೆಯಿತು.

ಪ್ರಗತಿಪರ ಚಿಂತಕ ಸಿ.ಯತಿರಾಜ್ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಶಾಲೆಗಳನ್ನು ಉನ್ನತೀಕರಿಸಲಾಗುವುದು ಎಂಬ ಭ್ರಮೆ ಹುಟ್ಟಿಸಿ ರೈತರು, ಕಾರ್ಮಿಕರ ಮಕ್ಕಳು, ಬಡವರು ಓದುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಖಂಡಿಸಬೇಕು. ಸರ್ಕಾರದ ಈ ನೀತಿಯನ್ನು ಸಂಪೂರ್ಣವಾಗಿ ಹಿಂಪಡೆಯುವವರೆಗೂ ಹೋರಾಟ ಕಟ್ಟಬೇಕು ಎಂದರು.

ADVERTISEMENT

ಎಐಡಿಎಸ್ಒ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಮಾತನಾಡಿ, ಅಕ್ಟೋಬರ್ 15 ಹಾಗೂ ಡಿಸೆಂಬರ್ 30ರಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಆದೇಶಗಳ ಪ್ರಕಾರ, ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿಗೆ ಒಂದು ಸರ್ಕಾರಿ ಶಾಲೆಯಂತೆ, ಕೇವಲ 6000 ಶಾಲೆಗಳು ಉಳಿದು 40,000 ಸರ್ಕಾರಿ ಶಾಲೆಗಳು ನಶಿಸುವವು. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ 5 ಕಿ.ಮೀ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಹುನ್ನಾರ ಇದಾಗಿದೆ ಎಂದು ಹೇಳಿದರು.

ಈಗಾಗಲೇ 15 ವರ್ಷಗಳಲ್ಲಿ ರಾಜ್ಯ ಸರ್ಕಾರದ ಪ್ರಕಾರ 17 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಯೋಜನೆ ಪ್ರಕಾರ ರಾಜ್ಯದ ಲಕ್ಷಾಂತರ ರೈತ, ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದರು.

ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿನಯ್ ಚಂದ್ರ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಈಗಾಗಲೇ ಇಳಿಮುಖ ಪಡೆದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ‘ತನ್ನ ದೇಹದಲ್ಲಿ ಕನ್ನಡ ರಕ್ತ ಹರಿಯುವುದು’ ಎಂದು ಹೇಳುತ್ತಾರೆ. ಆದರೆ ಹಿಂದಿನ ಬಾಗಿಲಿನಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಲು ಆದೇಶ ಹೊರಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಮಾತನಾಡಿ, 1990ರರಲ್ಲಿ ಕಾಂಗ್ರೆಸ್ ಸರ್ಕಾರ ತಂದ ಎಲ್.ಪಿ.ಜಿ ನೀತಿಯಿಂದಾಗಿ ಶಿಕ್ಷಣದ ಖಾಸಗೀಕರಣ ಆರಂಭಗೊಂಡಿತು. ಶಿಕ್ಷಣವನ್ನು ಖಾಸಗೀಕರಣದ ಪರಿಧಿಯಿಂದ ಹೊರಗಿಡಬೇಕು. ಈ ನೀತಿಗಳನ್ನು ವಿರೋಧಿಸಿ ಬಲಿಷ್ಠ ಹೋರಾಟ ಬೆಳೆಸಬೇಕು ಎಂದು ಆಗ್ರಹಿಸಿದರು.

ಎಐಯುಟಿಯುಸಿಯ ಮಂಜುಳ ಮಾತನಾಡಿ, ಸರ್ಕಾರಗಳು ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಸಾರ್ವಜನಿಕ ಕೇತ್ರಗಳನ್ನು ಖಾಸಗೀಕರಣ ಮಾಡಿ ಶಿಕ್ಷಣ, ಆರೋಗ್ಯ ಕೇವಲ ಶ್ರೀಮಂತ ವರ್ಗದವರ ಸ್ವತ್ತಾಗುತ್ತದೆ ಎಂದರು.

ಜಿಲ್ಲೆ ಅಧ್ಯಕ್ಷೆ ಟಿ. ಅಶ್ವಿನಿ, ಸಾರ್ವಜನಿಕ ಶಿಕ್ಷಣ ಸಮಿತಿ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.