ಕೋರ: ಹೋಬಳಿಯ ನಾಡಕಚೇರಿಯಲ್ಲಿನ ಕಂದಾಯ ಅಧಿಕಾರಿಗಳು ಕೊರೊನಾ ಭಯದ ನಡುವೆಯೂ ಪ್ರತಿ ಹಳ್ಳಿಗೆ ಭೇಟಿ ನೀಡಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ.
ವೃದ್ಧರು, ವಿಧವೆಯರು, ಅಂಗವಿಕರು ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಸೌಲಭ್ಯ ಪಡೆಯಲು ಅರ್ಹರಾದವರು ಅಗತ್ಯ ದಾಖಲಾತಿ ಹೊಂದಿಸಲು ಅಲೆಯುವುದನ್ನು ತಪ್ಪಿಸುವುದು ಇದರ ಉದ್ದೇಶ. ಮಧ್ಯವರ್ತಿಗಳ ಹಾವಳಿ ಮಟ್ಟಹಾಕಲು ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಆದೇಶದಂತೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮವನ್ನು ಕೋರ ನಾಡಕಚೇರಿ ಜಾರಿಗೆ ತಂದಿದೆ.
ಕೋರ ನಾಡಕಚೇರಿ ವ್ಯಾಪ್ತಿಗೆ 11 ಕಂದಾಯ ವೃತ್ತಗಳು ಒಳಪಟ್ಟಿವೆ. 11 ಗ್ರಾಮ ಲೆಕ್ಕಾಧಿಕಾರಿಗಳು, ಒಬ್ಬರು ಕಂದಾಯ ತನಿಖಾಧಿಕಾರಿ, ಒಬ್ಬರು ಉಪತಹಶೀಲ್ದಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಕಂದಾಯ ವಲಯದಲ್ಲಿ ನಿಗದಿಪಡಿಸಿದ ದಿನದಂದು ಪಿಂಚಣಿ ಅದಾಲತ್ ನಡೆಸಿ ಸ್ಥಳದಲ್ಲಿಯೇ ಆದೇಶ ಪತ್ರ ವಿತರಿಸಲು ಕಂದಾಯ ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಅದಾಲತ್ ನಡೆಯುವ ಸ್ಥಳ: ಜೂನ್ 25ರಂದು ದೇವಲಾಪುರ, ಜುಲೈ 1ರಂದು ಕೆಂಪನದೊಡ್ಡೇರಿ, ಜುಲೈ 8ರಂದು ಶಂಭೋನಹಳ್ಳಿ, ಜು.15ರಂದು ಕೆಸ್ತೂರು, ಜು.22ರಂದು ಅಹೋಬಲ ಅಗ್ರಹಾರ, ಜು.29ರಂದು ಚಿಕ್ಕತೊಟ್ಲುಕೆರೆ, ಆಗಸ್ಟ್ 5ರಂದು ಬ್ರಹ್ಮಸಂದ್ರ, ಆ.12ರಂದು ಓಬಳಾಪುರ, ಆ.19ರಂದು ಬೆಳಧರ, ಆ.26ರಂದು ಕೋರ, ಸೆಪ್ಟೆಂಬರ್ 2ರಂದು ಕೋರದಲ್ಲಿ ನಡೆಯಲಿದೆ. ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ ಪಿಂಚಣಿ ಅದಾಲತ್ ನಡೆಸಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.