ಚಿಕ್ಕನಾಯಕನಹಳ್ಳಿ: ಪಟ್ಟಣದ ಮೇಲನಹಳ್ಳಿ ಮೊರಾರ್ಜಿ ವಸತಿ ಶಾಲೆಗೆ ಅಗತ್ಯ ಸೌಲಭ್ಯ ನೀಡಲು ಕಳೆದ ವರ್ಷವೇ ₹1 ಕೋಟಿ ಮಂಜೂರು ಮಾಡಿಸಿದ್ದರೂ ಸರ್ಕಾರ ಸರಿಯಾದ ಟೆಂಡರ್ ಕರೆದು ಏಜೆನ್ಸಿಗಳನ್ನು ನೇಮಕ ಮಾಡದ ಕಾರಣ ಅಭಿವೃದ್ಧಿ ಸಾಧ್ಯವಾಗಲಿಲ್ಲ. ಈ ವರ್ಷ ಆ ಅನುದಾನದಲ್ಲಿ ಎಲ್ಲ ಅಭಿವೃದ್ಧಿ ಕೆಲಸ ಮಾಡಿಸುತ್ತೇನೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಭರವಸೆ ನೀಡಿದರು.
ಪಟ್ಟಣದ ಮೇಲನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರ ನಡೆದ ಪ್ರಥಮ ಪೋಷಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
‘ನಾನು ಹಾಸ್ಟೇಲ್ನಲ್ಲೇ ವ್ಯಾಸಾಂಗ ಮಾಡಿದ್ದು, ನನಗೆ ಹಾಸ್ಟೆಲ್ನ ವಿದ್ಯಾರ್ಥಿಗಳ ಮನಸ್ಸು ಯಾವ ರೀತಿ ಇರುತ್ತದೆ ಅಲ್ಲಿನ ಸಮಸ್ಯೆಗಳು ಏನು ಎಂಬುದರ ಅರಿವಿದೆ. 2011ರಲ್ಲಿ ಪ್ರಾರಂಭವಾದ ಈ ವಸತಿ ಶಾಲೆ ಈವರೆಗೆ ಎಸ್ಎಸ್ಎಲ್ಸಿಯಲ್ಲಿ ನೂರಕ್ಕೆ ನೂರು ಪಲಿತಾಂಶ ನೀಡುತ್ತಿದೆ. ಶಾಲೆಗೆ ಅಗತ್ಯ ಸೌಲಭ್ಯ ನೀಡಲಾಗುವುದು’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಮಾತನಾಡಿ, ಉತ್ತಮ ವಾತಾವರಣ ಇರುವ ಈ ಮೊರಾರ್ಜಿ ವಸತಿ ಶಾಲೆ ಎಸ್ಎಸ್ಎಲ್ಸಿಯಲ್ಲಿ ಪ್ರಥಮ ಸ್ಥಾನ ನೀಡಿದೆ. ದಾಖಲಾತಿಯೂ ಹೆಚ್ಚುತ್ತಿದೆ. ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚಿನ ಗಮನಹರಿಸಿ ಅವರ ಸಮಸ್ಯೆಗಳನ್ನು ತಿಳಿದು ಸ್ಪಂದಿಸಬೇಕು ಎಂದು ಹೇಳಿದರು.
ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಪ್ರಾಂಶುಪಾಲ ಸತೀಶ್ ಸೇರಿದಂತೆ ಭೋದಕ ಹಾಗೂ ಬೋಧಕೇತರ ಸಿಬ್ಬಂದಿ, ಪೋಷಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.