
ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಕ್ಯಾತ್ಸಂದ್ರದ ಬಳಿ ನಿರ್ಮಿಸಿದ ಅನಧಿಕೃತ ಶೆಡ್ ತೆರವುಗೊಳಿಸುವಂತೆ ಒತ್ತಾಯಿಸಿ ಸ್ಲಂ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ತುಮಕೂರು: ನಗರದ ಕ್ಯಾತ್ಸಂದ್ರ ಎಳ್ಳರಬಂಡೆ ಸ್ಲಮ್ನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಕಾಯ್ದಿರಿಸಿದ ಜಾಗದಲ್ಲಿ ನಿರ್ಮಿಸಿದ ಅನಧಿಕೃತ ಶೆಡ್ ತೆರವುಗೊಳಿಸುವಂತೆ ಒತ್ತಾಯಿಸಿ ಸ್ಲಂ ಸಮಿತಿ, ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಯಿತು.
‘ರಾಷ್ಟ್ರೀಯ ಹೆದ್ದಾರಿಗೆ ಗುರುತಿಸಿದ ಸ್ಥಳದಲ್ಲಿದ್ದ 12 ಗುಡಿಸಲುಗಳಿಗೆ ₹1 ಲಕ್ಷದ ವರೆಗೆ ಪರಿಹಾರ ನೀಡಲಾಗಿದೆ. ಇದೀಗ ಜಯಸಿಂಹ ಎಂಬುವರು ಜನರಲ್ಲಿ ಹಕ್ಕುಪತ್ರ ಕೊಡಿಸುವ ಆಮಿಷವೊಡ್ಡಿ ಮತ್ತೆ ಏಕಾಏಕಿ ಗುಡಿಸಲು ಹಾಕಿಸಿದ್ದಾರೆ. ಅಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಬೆದರಿಕೆ ಹಾಕಿದ್ದಾರೆ’ ಎಂದು ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ ಆರೋಪಿಸಿದರು.
ಕ್ಯಾತ್ಸಂದ್ರದ ರಾಜಮ್ಮ, ‘ಕಳೆದ 40 ವರ್ಷಗಳಿಂದ ನಾವು ವಾಸಿಸುವ ಮನೆಗೆ ಹಕ್ಕುಪತ್ರ ಇರಲಿಲ್ಲ. ಈಚೆಗೆ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಇತ್ತೀಚೆಗೆ ಕೆಲವರು ನಮ್ಮ ಮನೆಗಳ ಹತ್ತಿರ ಬಂದು ಬೆದರಿಕೆ ಹಾಕುತ್ತಿದ್ದಾರೆ. ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಸಬೇಕು’ ಎಂದು ಒತ್ತಾಯಿಸಿದರು.
ಸ್ಲಂ ಸಮಿತಿ ಪದಾಧಿಕಾರಿಗಳಾದ ಅರುಣ್, ತಿರುಮಲಯ್ಯ, ಕೃಷ್ಣಮೂರ್ತಿ, ಶಂಕ್ರಯ್ಯ, ಮುಬಾರಕ್, ರಂಗನಾಥ್, ಶಾಬುದ್ಧೀನ್, ಜಾಬೀರ್ ಖಾನ್, ಮಂಜುನಾಥ್, ಶುಹೇಬ್ ಉಲ್ಲಾಖಾನ್, ಗೌರಮ್ಮ, ರತ್ನಮ್ಮ, ಶಾರದಮ್ಮ, ಮುನೀರ್ ಅಹ್ಮದ್, ಅಮ್ರೀನ್ಬಾನು, ಜಯಂತಿ, ಮಂಜುಳಾ, ರಮಾದೇವಿ, ಆಯಿಷಾ, ಪದ್ಮಾ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.