ತುಮಕೂರು: ಸ್ಕಾಟ್ ಗಾರ್ಮೆಂಟ್ ಕಾರ್ಮಿಕರಿಂದ ಆಡಳಿತ ಮಂಡಳಿ ಕಡಿತ ಮಾಡಿರುವ ಭವಿಷ್ಯ ನಿಧಿಯ ಹಣವನ್ನು ಪೂರ್ಣ ಪ್ರಮಾಣದಲ್ಲಿ ಕೊಡಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಕಾರ್ಮಿಕರ ಭವಿಷ್ಯ ನಿಧಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಕಾರ್ಮಿಕರ ವೇತನದಲ್ಲಿ ಪಿ.ಎಫ್ ಹಣ ಕಡಿತ ಮಾಡಿಕೊಳ್ಳಲಾಗಿದೆ. ಆದರೆ ಈ ಹಣವನ್ನು ಭವಿಷ್ಯ ನಿಧಿ ಖಾತೆಗೆ ಜಮೆ ಮಾಡಿಲ್ಲ. ಕಚೇರಿಯಲ್ಲಿ ಕೇಳಿದರೆ ‘ಆಡಳಿತ ಮಂಡಳಿ ಸ್ವಲ್ಪ ಪ್ರಮಾಣದಲ್ಲಿ ಹಣ ಪಾವತಿಸಿದೆ. ಪೂರ್ಣ ಪಾವತಿಸಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನಮಗೆ ನಮ್ಮ ಪೂರ್ಣ ಹಣವನ್ನು ಕೊಡಿಸಬೇಕು ಎಂದು ಒತ್ತಾಯಿಸಿದರು.
ಮನವಿ ಪತ್ರ ಸ್ವೀಕರಿಸಿದ ಲೆಕ್ಕಾಧಿಕಾರಿ ವೆಂಕಟರಮಣ, ‘ಕಂಪನಿಯು ಪೂರ್ಣ ಹಣವನ್ನು ಇನ್ನೂ ಪಾವತಿಸಿಲ್ಲ. ಹಾಗಾಗಿ ತೊಂದರೆಯಾಗಿದೆ’ ಎಂದರು.
‘15 ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟಕ್ಕೆ ಮುಂದಾಗುವುದಾಗಿ’ ಕಾರ್ಮಿಕರು ಎಚ್ಚರಿಸಿದರು. ಸಮಿತಿ ಮುಖಂಡರಾದ ಸುಷ್ಮಾ, ವಿದ್ಯಾ, ಕಾಂತಮ್ಮ, ಕರಿಯಪ್ಪ, ನರಸಿಂಹರಾಜು, ವಿನುತಾ ಇದ್ದರು. ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.