ತುಮಕೂರು: ರೈತರಿಗೆ ನೀರು ಮತ್ತು ವಿದ್ಯುತ್ ಒದಗಿಸಿ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿದರೆ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ನುಡಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 101 ಗಾಯಕರಿಂದ ಆಯೋಜಿಸಿದ್ದ ಕನ್ನಡ ಭುವನೇಶ್ವರಿಗೆ ‘101 ನಾಡು ನುಡಿಯ ಗೀತ ನಮನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲರೂ ಲಾಭ ನಷ್ಟದ ಲೆಕ್ಕಾಚಾರ ಮಾಡುವರು. ರೈತರು ಲಾಭ ಬರುವುದನ್ನಷ್ಟೇ ಲೆಕ್ಕಾಚಾರ ಹಾಕಿದರೆ ಜನರು ಹಸಿವಿನಿಂದ ಸಾಯುವರು. ಕುವೆಂಪು ಅವರ ರೈತ ಗೀತೆಯ ಹಿನ್ನೆಲೆಯಲ್ಲಿ ನೋಡಿದರೆ ರೈತರ ಬದುಕು ಕಷ್ಟವಾಗಿದೆ ಎಂದು ಹೇಳಿದರು.
ಜಿಲ್ಲೆಯ ಎಲ್ಲ ಲೇಖಕರು ಮತ್ತು ಸಾಹಿತಿಗಳನ್ನು ಎಲ್ಲರಿಗೂ ಪರಿಚಯಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಲ್ಲಿ ಗ್ರಂಥಾಲಯ ತೆರೆಯಲಾಗಿದೆ. ಇಲ್ಲಿ ಸದಸ್ಯತ್ವ ಪಡೆದು ಪುಸ್ತಕಗಳನ್ನು ಮನೆಗೆ ಕೊಂಡು ಹೋಗಿ ಓದುವ ಅವಕಾಶ ಕಲ್ಪಿಸಲಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿಂದೂಸ್ತಾನಿ ಗಾಯಕ ಚಿದಾನಂದ ದೇವರಮನಿ, ‘ಕನ್ನಡ ಮಾತನಾಡುವಾಗ ಒಂದು ವಾಕ್ಯದಲ್ಲಿ ಹಲವು ಇಂಗ್ಲಿಷ್ ಪದಗಳು ಇರುವುದು ಕಂಡು ಬರುತ್ತದೆ. ಇದನ್ನು ಮೊದಲು ಕೈ ಬಿಡಬೇಕು. ಸಂಗೀತ ಕನ್ನಡ ಸಂಸ್ಕೃತಿ ಉಳಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.