ADVERTISEMENT

ರಸ್ತೆ ಒತ್ತುವರಿ ತೆರವಿಗೆ ಕರ್ನಾಟಕ ಮಹಾಜನ್ ಪರಿವಾರ ಸಮಿತಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 4:49 IST
Last Updated 24 ಸೆಪ್ಟೆಂಬರ್ 2021, 4:49 IST
ತುಮಕೂರು ಎಸ್‌ಐಟಿ ರಸ್ತೆ ಒತ್ತುವರಿ ತೆರವಿಗೆ ಆಗ್ರಹಿಸಿ ಪ್ರತಿಭಟಿಸಿದರು. ಮುಖಂಡರಾದ ಹಂಚಿಹಳ್ಳಿ ರಾಮಸ್ವಾಮಿ, ಎಂ.ವಿ.ರಾಘವೇಂದ್ರಸ್ವಾಮಿ, ಇ.ಟಿ.ನಾಗರಾಜು ಇತರರು ಇದ್ದರು
ತುಮಕೂರು ಎಸ್‌ಐಟಿ ರಸ್ತೆ ಒತ್ತುವರಿ ತೆರವಿಗೆ ಆಗ್ರಹಿಸಿ ಪ್ರತಿಭಟಿಸಿದರು. ಮುಖಂಡರಾದ ಹಂಚಿಹಳ್ಳಿ ರಾಮಸ್ವಾಮಿ, ಎಂ.ವಿ.ರಾಘವೇಂದ್ರಸ್ವಾಮಿ, ಇ.ಟಿ.ನಾಗರಾಜು ಇತರರು ಇದ್ದರು   

ತುಮಕೂರು: ಭಾರತೀನಗರದಿಂದ ಎಸ್ಐಟಿ ಮುಂಭಾಗದ ಮುಖ್ಯರಸ್ತೆ ಸಂಪರ್ಕಿಸುವ 40 ಅಡಿ ಸಂಪರ್ಕ ರಸ್ತೆ ಒತ್ತುವರಿಯಾಗಿದ್ದು, ತೆರವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಮಹಾಜನ್ ಪರಿವಾರ ಸಮಿತಿ ವತಿಯಿಂದ ಎಸ್ಐಟಿ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಪರಿವಾರ ಸಮಿತಿ ಅಧ್ಯಕ್ಷ ಹಂಚಿಹಳ್ಳಿ ರಾಮಸ್ವಾಮಿ, ‘ಎಸ್ಐಟಿ ಮುಂಭಾಗದಿಂದ ಹನುಮಂತಪುರ, ವಿದ್ಯಾನಗರ ಮತ್ತಿತರ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿದೆ. ದಾಖಲೆಗಳ ಪ್ರಕಾರ 40 ಅಡಿ ರಸ್ತೆ ಇದೆ. ಆದರೆ ರಸ್ತೆಯ ಎರಡು ಬದಿ ಒತ್ತುವರಿಯಾಗಿ ಈಗ 20 ಅಡಿಗೆ ಇಳಿದಿದೆ. ಒತ್ತುವರಿ ತೆರವು ಮಾಡುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಮಹಾನಗರ ಪಾಲಿಕೆ ಕ್ರಮ ಕೈಗೊಂಡಿಲ್ಲ. ಈಗ ಏಕಾಏಕಿ 20 ಅಡಿ ರಸ್ತೆಯನ್ನೇ ಅಭಿವೃದ್ಧಿಪಡಿಸಲು ಕಾಮಗಾರಿ ಆರಂಭಿಸಲಾಗುತ್ತಿದೆ. ಮೊದಲು ಒತ್ತುವರಿ ತೆರವುಗೊಳಿಸಿ, ನಂತರ ಕಾಮಗಾರಿ ಆರಂಭಿಸಬೇಕು’ ಎಂದು ಆಗ್ರಹಿಸಿದರು.

ಪರಿವಾರದ ಗೌರವಾಧ್ಯಕ್ಷ ಎಂ.ವಿ.ರಾಘವೇಂದ್ರಸ್ವಾಮಿ, ‘ಕೆಲವು ಪ್ರಭಾವಿಗಳು ರಸ್ತೆ ಒತ್ತುವರಿ ಮಾಡಿಕೊಂಡಿದ್ದು, 20 ಅಡಿಗೆ ಇಳಿದಿದೆ. ಪಾಲಿಕೆ ಒತ್ತುವರಿ ತೆರವು ಮಾಡದೆ ಕಾಮಗಾರಿ ನಡೆಸಲು ಮುಂದಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಪರಿವಾರದ ಮುಖಂಡ ಇ.ಟಿ.ನಾಗರಾಜು, ‘ರಸ್ತೆ ಅತ್ಯಂತ ಕಿರಿದಾಗಿದ್ದು, ದೊಡ್ಡ ವಾಹನಗಳ ಸಂಚಾರ ಕಷ್ಟಕರವಾಗಿದೆ. ಅಪಘಾತಗಳು ಸಂಭವಿಸುತ್ತಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದರು.

ಪರಿವಾರ ಸಮಿತಿ ಮುಖಂಡರಾದ ಮಂಜುನಾಥ್, ಮಧುಸೂದನ್, ಶಾರದಮ್ಮ, ಗಂಗಮ್ಮ, ನಾಗರತ್ನ, ಕಮಲಮ್ಮ, ದೇವಮ್ಮ, ಮಂಜು ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.