ADVERTISEMENT

ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದ ಚಾಲಕ–ನಿರ್ವಾಹಕ: ಬಸ್ ಅಡ್ಡಗಟ್ಟಿದ ಶಿಕ್ಷಣ ಸಚಿವ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 17:46 IST
Last Updated 9 ಜನವರಿ 2021, 17:46 IST
ನಿರ್ವಾಹಕರ ಜತೆ ಸುರೇಶ್ ಕುಮಾರ್ ಮಾತು
ನಿರ್ವಾಹಕರ ಜತೆ ಸುರೇಶ್ ಕುಮಾರ್ ಮಾತು   

ಕೊರಟಗೆರೆ (ತುಮಕೂರು ಜಿಲ್ಲೆ): ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದೆ ತೆರಳಿದ ಬಸ್‌ ಅನ್ನುರಸ್ತೆಯಲ್ಲೇ ಅಡ್ಡಹಾಕಿದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಚಾಲಕ, ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ತಾಲ್ಲೂಕಿನ ನೀಲಗೊಂಡನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಐ.ಕೆ.ಕಾಲೊನಿಯ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.

ಸಚಿವರು ಬೆಂಗಳೂರಿನಿಂದ ದಾಬಸ್‌ಪೇಟೆ–ಕೊರಟಗೆರೆ ಮಾರ್ಗವಾಗಿ ಮಧುಗಿರಿಗೆ ದೂರ ತರಂಗ ಶಿಕ್ಷಣ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ತೆರಳುತ್ತಿದ್ದರು.

ಈ ವೇಳೆ ಐ.ಕೆ.ಕಾಲೊನಿ ಬಳಿ ಶಾಲೆಗೆ ತೆರಳಲು ಸಜ್ಜಾಗಿದ್ದ ವಿದ್ಯಾರ್ಥಿಗಳು ಕೈ ಮುಂದೆ ಮಾಡಿದರೂ ಬಸ್‌ ನಿಲ್ಲಿಸದಿರುವುದು ಸಚಿವರ ಗಮನಕ್ಕೆ ಬಂದಿದೆ. ನಂತರ ಬಸ್ ಅಡ್ಡಗಟ್ಟಿದ ಸಚಿವರು, ಚಾಲಕ ಮತ್ತು ನಿರ್ವಾಹಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

‘ಇನ್ನು ಮುಂದೆ ಇಲ್ಲಿ ಕಡ್ಡಾಯವಾಗಿ ಬಸ್ ನಿಲುಗಡೆ ಮಾಡಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಬೇಕು’ ಎಂದು ತಾಕೀತು ಮಾಡಿದರು. ಸಚಿವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.