ಗುಬ್ಬಿ: ‘ರಾಜಕಾರಣಿಗಳು ವೀರಶೈವ ಮತ್ತು ಲಿಂಗಾಯತ ಧರ್ಮಗಳು ಬೇರೆ ಬೇರೆ ಎನ್ನುತ್ತಾ ಧರ್ಮವನ್ನು ಒಡೆಯಲು ಮುಂದಾಗಿರುವುದು ದುರಾದೃಷ್ಟಕರ’ ಎಂದು ರಂಭಾಪುರಿ ಪೀಠದ ರೇಣುಕಾ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ನಿಟ್ಟೂರಿನಲ್ಲಿ ನಡೆದ ಗುಹೇಶ್ವರಸ್ವಾಮಿ ದೇಗುಲ ರಜತ ಮಹೋತ್ಸವ, ರೇಣುಕಾ ಜಯಂತಿ ಹಾಗೂ ಧರ್ಮಜಾಗೃತಿ ಸಮಾರಂಭದಲ್ಲಿ ಮಾತನಾಡಿದರು.
ಮಾನವ ಧರ್ಮ ಉದ್ದಾರಕ್ಕಾಗಿ ರೇಣುಕಾಚಾರ್ಯ ಸ್ಥಾಪಿಸಿದ ವೀರಶೈವ ಧರ್ಮವನ್ನು 12ನೇ ಶತಮಾನದಲ್ಲಿ ಬಸವೇಶ್ವರರು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ವೀರಶೈವ- ಲಿಂಗಾಯತ ಧರ್ಮ ಒಂದೇ ಆಗಿದ್ದು, ಅದನ್ನು ಒಡೆಯಲು ಬಿಡುವುದಿಲ್ಲ. ಸಮುದಾಯ ಒಗ್ಗಟ್ಟಿನಿಂದ ಇದ್ದು ಧರ್ಮವನ್ನು ಉಳಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕದಲ್ಲಿ ಲಿಂಗಾಯತ ಧರ್ಮಸ್ಥಾಪಕ ಬಸವಣ್ಣ ಎಂದು ಹೇಳುವ ಮೂಲಕ ಅಪಚಾರ ಎಸಗಿದ್ದಾರೆ. ಸರ್ಕಾರ ಅದನ್ನು ಸರಿಪಡಿಸಲು ಮುಂದಾಗದಿದ್ದರೆ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಕುಲದ ಉದ್ಧಾರಕ್ಕಾಗಿ ಪವಾಡ ಪುರುಷರು, ಶರಣರು ಧರ್ಮಕ್ಕೆ ಉತ್ತಮ ಅಡಿಪಾಯ ಹಾಕಿದ್ದರಿಂದಲೇ ವಿದೇಶಿಯರು ಭಾರತದ ಮೇಲೆ ಅನೇಕಬಾರಿ ದಾಳಿ ನಡೆಸಿದರೂ, ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ದೊಡ್ಡಗುಣಿ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಧರ್ಮದಲ್ಲಿ ವಿಶ್ವದ ಎಲ್ಲ ಧರ್ಮಗಳ ಸಾರವನ್ನು ಕಾಣಲು ಸಾಧ್ಯವಿದೆ ಎಂದು ಹೇಳಿದರು.
ತೇವಡೀಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರುವಿಗೆ ಆದ್ಯತೆ ನೀಡುವ ವೀರಶೈವ ಲಿಂಗಾಯತ ಧರ್ಮ ಕಾಯಕ ತತ್ವ, ತ್ರಿವಿಧ ದಾಸೋಹ ಪರಿಕಲ್ಪನೆಯನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ವಿಶ್ವ ಶ್ರೇಷ್ಠತೆ ತೋರಿದೆ ಎಂದು ಹೇಳಿದರು.
ರಂಭಾಪುರಿ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿತ್ತು. ನೊಣವಿನಕೆರೆ ಮಠದ ಕಿರಿಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಶಶಿ ಹುಲಿಕುಂಟೆ, ಮುಖಂಡರಾದ ಡಿ.ಎಸ್. ಕುಮಾರ್, ಸಿದ್ಧಲಿಂಗಸ್ವಾಮಿ, ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.