ತುಮಕೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಕಲಿ ಶಾಮ ಇದ್ದಂತೆ. ಒಂದು ಕಡೆ ಸರ್ಕಾರ ಸುಭದ್ರ ಎನ್ನುತ್ತಲೇ ಮತ್ತೊಂದು ಕಡೆ ತನ್ನ ಬೆಂಬಲಿಗ ಶಾಸಕರ ಮೂಲಕ ಸರ್ಕಾರ ಬೀಳಿಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಟೀಕಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ವಿಧಾನಸಭೆಯನ್ನು ಮಾಯಾಬಜಾರ್ ಮಾಡಿದ್ದಾರೆ. ಜೂನ್ 10ರ ಒಳಗೆ ರಾಜ್ಯ ಸರ್ಕಾರ ಬೀಳುತ್ತದೆ. ಸಿದ್ದರಾಮಯ್ಯ ಪದೇ ಪದೇ ದೇವರಾಜ ಅರಸು ಮತ್ತು ಅಹಿಂದ ಹೆಸರು ಹೇಳುತ್ತಾರೆ. ಆದರೆ ಅರಸು ಅವರ ರೀತಿ ನಡೆಯುವ ಗುಣಗಳು ಇಲ್ಲವೇ ಇಲ್ಲ. ಅಹಿಂದ ಹೆಸರು ಹೇಳುತ್ತಲೇ ಮುಖ್ಯಮಂತ್ರಿ ಆಗಿದ್ದಾಗ ಸಾವಿರಾರೂ ಕೋಟಿ ಲೂಟಿ ಹೊಡೆದಿದ್ದಾರೆ’ ಎಂದು ದೂರಿದರು.
ಶಾದಿಭಾಗ್ಯ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ, ವೀರಶೈವ–ಲಿಂಗಾಯತ ಎನ್ನುವ ವಿಚಾರಗಳ ಮೇಲೆ ಸಮಾಜವನ್ನು ವಿಭಾಗಿಸುವ ಕೆಲಸವನ್ನು ಮಾಡಿದರು. ವಿರೋಧಿಗಳ ವಿರುದ್ಧ ತೊಡೆ ತಟ್ಟುವ ಸಿದ್ದರಾಮಯ್ಯ ವೀರನೂ ಅಲ್ಲ ಶೂರನೂ ಅಲ್ಲ. ಆತ ನಕಲಿ ಶಾಮ ಎಂದು ಏಕವಚನದಲ್ಲಿ ಹರಿಹಾಯ್ದರು.
‘ಲೋಕಸಭಾ ಚುನಾವಣೆಯಲ್ಲಿ ಜನರು ನರೇಂದ್ರ ಮೋದಿ ಅವರನ್ನು ಬೆಂಬಲಿಸಿದರು. ಈ ಮೂಲಕ ದೇಶ ಮೊದಲು, ನಂತರ ಉಳಿದ ವಿಚಾರ ಎನ್ನುವುದನ್ನು ಸಾರಿದರು. ನಮ್ಮಂತಹ ರಾಜಕಾರಣಿಗಳಿಗೆ ಜನರು ಸೂಕ್ತ ಪಾಠ ಹೇಳಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.