ಹುಳಿಯಾರು: ಮೂಲಸೌಕರ್ಯ ಒದಗಿಸುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದೆ ಎಂದು ಆರೋಪಿಸಿ ರೈತ ಸಂಘದ ಹೊಸಹಳ್ಳಿ ಚಂದ್ರಣ್ಣ ಬಣದಿಂದ ಪಟ್ಟಣದಲ್ಲಿ ತೆರಿಗೆ ನಿರಾಕರಣೆ ಚಳವಳಿ ಹಾಗೂ ಅಹೋರಾತ್ರಿ ಧರಣಿ ಗುರುವಾರ ಆರಂಭವಾಯಿತು.
ತಮ್ಮ ಬೇಡಿಕೆಗಳು ಈಡೇರುವವರೆಗೂ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ರೈತ ಸಂಘದ ಕಾರ್ಯಕರ್ತರು ಪುನರುಚ್ಚರಿಸಿದರು.
ಪಟ್ಟಣದ ಎಲ್ಲ ವಾರದ ಸಂತೆ, ಸಂತೆ ಬೀದಿ ವ್ಯಾಪಾರಿಗಳು ಪಟ್ಟಣ ಪಂಚಾಯಿತಿಗೆ ಸಂತೆ ಶುಲ್ಕ ಪಾವತಿಸುವುದನ್ನು ನಿಲ್ಲಿಸಬೇಕು ಎಂದು ಸಂಘದ ಪದಾಧಿಕಾರಿಗಳು ಸಂತೆಯಲ್ಲಿ ಕರಪತ್ರ ಹಂಚಿದರು.
ರೈತ ಸಂಘದ ಚಂದ್ರಪ್ಪ ಮಾತನಾಡಿ, ನಿಯಮಿತವಾಗಿ ತೆರಿಗೆ ಕಟ್ಟುತ್ತಿದ್ದರೂ ಪಟ್ಟಣ ಪಂಚಾಯಿತಿ ಮೂಲ ಸೌಕರ್ಯಗಳನ್ನೂ ಒದಗಿಸಿಲ್ಲ ಎಂದರು.
ಮಧ್ಯಾಹ್ನ ಧರಣಿ ಸ್ಥಳದಲ್ಲಿಯೇ ಊಟ ತಯಾರಿಸಿದರು. ಸಂಜೆ ಧರಣಿ ಸ್ಥಳದಲ್ಲಿ ಮುಖ್ಯಾಧಿಕಾರಿಗೂ ರೈತಸಂಘದ ಪದಾಧಿಕಾರಿಗಳಿಗೆ ಮಾತಿನ ಚಕಮಕಿ ನಡೆಯಿತು. ಅಹೋರಾತ್ರಿ ಧರಣಿ ಮುಂದುವರಿಯಲಿದ್ದು ಸಮಸ್ಯೆ ಬಗೆಹರಿಯುವವರೆಗೆ ಹಿಂದೆ ತೆಗೆಯುವ ಮಾತೆ ಇಲ್ಲ ಎಂದು ರೈತಸಂಘ ಸ್ಪಷ್ಟಪಡಿಸಿದೆ.
ಸ್ಥಳಕ್ಕೆ ಬಂದ ಪಿಎಸ್ಐ ಧರ್ಮಾಂಜಿ ಅನುಮತಿ ಪಡೆಯದೆ ಧರಣಿ ನಡೆಸುವಂತಿಲ್ಲ ಎಂದು ಎಚ್ಚರಿಸಿದರು.
‘ನೀವು ಕಾನೂನು ಪ್ರಕಾರ ಏನಿದೆಯೊ ಅದನ್ನು ಮಾಡಿಕೊಳ್ಳಿ, ನಾವಂತೂ ಅಹೋರಾತ್ರಿ ಧರಣಿ ಮುಂದುವರೆಸುತ್ತೇವೆ’ ಎಂದರು. ನಂತರ ಪೊಲೀಸರು ಸ್ಥಳದಿಂದ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.