ADVERTISEMENT

ಕುತೂಹಲ ಮೂಡಿಸಿದ ಶಾಸಕ ಜಿ.ಪರಮೇಶ್ವರ- ಎಸ್.ಆರ್.ಪಾಟೀಲರ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 1:41 IST
Last Updated 20 ಜೂನ್ 2021, 1:41 IST
ತುಮಕೂರಿನ ಅಗಲಕೋಟೆಯಲ್ಲಿ ಪರಮೇಶ್ವರ್ ಅವರನ್ನು ಎಸ್.ಆರ್.ಪಾಟೀಲ ಭೇಟಿಯಾದರು
ತುಮಕೂರಿನ ಅಗಲಕೋಟೆಯಲ್ಲಿ ಪರಮೇಶ್ವರ್ ಅವರನ್ನು ಎಸ್.ಆರ್.ಪಾಟೀಲ ಭೇಟಿಯಾದರು   

ತುಮಕೂರು: ಶಾಸಕ ಜಿ.ಪರಮೇಶ್ವರ ಅವರನ್ನುವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಶನಿವಾರ ರಾತ್ರಿ ಭೇಟಿಯಾಗಿ ಚರ್ಚೆ ನಡೆಸಿದರು.

ನಗರದ ಹೊರ ವಲಯದ ಅಗಲಕೋಟೆಯಲ್ಲಿರುವ ಪರಮೇಶ್ವರ್ ಮನೆಗೆ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಪ್ಪ ಜತೆ ಭೇಟಿನೀಡಿದರು. ಪಾಟೀಲ– ಪರಮೇಶ್ವರ ಅವರು ಸುಮಾರು ಎರಡು ಗಂಟೆಗಳ ಕಾಲ ಪ್ರತ್ಯೇಕವಾಗಿ ಸಮಾಲೋಚಿಸಿದರು.

ಪ್ರಮುಖವಾಗಿ ಪಕ್ಷದ ಆಂತರಿಕ ವಿಚಾರಗಳು ಚರ್ಚೆಗೆ ಬಂದಿವೆ. ಬೆಂಗಳೂರಿನಿಂದ ನಗರಕ್ಕೆ ಬಂದು ರಾಜಕೀಯವಾಗಿ ಚರ್ಚೆ ನಡೆಸಿರುವುದು ಕಾಂಗ್ರೆಸ್ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ದೆಹಲಿಯಿಂದ ಹೈಕಮಾಂಡ್ ಕೆಲವು ಸೂಚನೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಇಬ್ಬರು ನಾಯಕರು ಭೇಟಿಯಾಗಿದ್ದಾರೆ ಎನ್ನಲಾಗಿದೆ.

ADVERTISEMENT

ಪ್ರಮುಖವಾಗಿ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಪ್ರಸ್ತಾಪವಾಗಿವೆ. ಬಿಜೆಪಿಯಲ್ಲಿಆಂತರಿಕ ಕಚ್ಚಾಟ ಜೋರಾಗಿದ್ದು, ಒಂದು ವೇಳೆ ಮಧ್ಯಂತರ ಚುನಾವಣೆ ಎದುರಾದರೆ ಏನೆಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ. ಡಿಸೆಂಬರ್ ವೇಳೆಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆಯಲಿದ್ದು, ಆ ಬಗ್ಗೆಯೂ ಪ್ರಸ್ತಾಪವಾಗಿದೆ. ಜತೆಗೆ ಕೆಪಿಸಿಸಿ ಪದಾಧಿಕಾರಿಗಳ ನೇಮಕ ವಿಚಾರವೂ ಪ್ರಮುಖವಾಗಿ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಟೀಲ ಅವರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗುವಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಾತ್ರ ಹೆಚ್ಚಿತ್ತು. ಅವರ ಪಾಳಯದಲ್ಲೇ ಗುರುತಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರಿಂದ
ಪರಮೇಶ್ವರ್ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಈಗ ಪರಮೇಶ್ವರ್ ಅವರನ್ನು ಭೇಟಿಯಾಗಿರುವುದು ಪಕ್ಷದ ಆಂತರಿಕ ವಲಯದಲ್ಲಿ ಏನೋ ನಡೆಯುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದು ಪಕ್ಷದ ಮುಖಂಡರೊಬ್ಬರು ವಿಶ್ಲೇಷಿಸಿದರು.

ಮುಖಂಡರಾದ ವಿಶ್ವನಾಥ್, ಎಂ.ಸಿ.ವೇಣುಗೋಪಾಲ್, ಎ.ಸಿ.ಶ್ರೀನಿವಾಸ್ ಜತೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.