ತುಮಕೂರು: ಜಿಲ್ಲೆಗೆ ನೀರಾವರಿ ಯೋಜನೆಯ ಅಗತ್ಯವಿದ್ದು, ಸಮುದ್ರಕ್ಕೆ ಹರಿಯುವ ಶರಾವತಿ ನದಿ ನೀರು ಬಳಸಿಕೊಂಡರೆ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೂ ಅನುಕೂಲವಾಗಲಿದೆ’ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಸಲಹೆ ಮಾಡಿದರು.
ನಗರದಲ್ಲಿ ಭಾನುವಾರ ಆಟೊ ಚಾಲಕರು ಮತ್ತು ಇತರೆ ಅಸಂಘಟಿತ ಕಾರ್ಮಿಕರ ವೇದಿಕೆಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಶಿಕ್ಷಕನಾಗಿ ಕೆಲಸ ಮಾಡಬೇಕು ಎಂದು ಬಯಸಿದ್ದೆ, ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ಪದವಿ ಮುಗಿಸಿದ ನಂತರ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಶಿಕ್ಷಕ ಹುದ್ದೆಗೆ ಸೇರಿಕೊಳ್ಳುವಂತೆ ಹೇಳಿದ್ದರು. ಈ ಬಗ್ಗೆ ಎಸ್.ಮಲ್ಲಿಕಾರ್ಜುನಯ್ಯ ಅವರನ್ನು ಕೇಳಿದಾಗ ರಾಜಕೀಯಕ್ಕೆ ಬರುವಂತೆ ಸಲಹೆ ಮಾಡಿದರು’ ಎಂದು ರಾಜಕೀಯ ಜೀವನ ಮೆಲುಕು ಹಾಕಿದರು.
ಕ್ಷೇತ್ರದ ಜನರ ಸಹಕಾರದಿಂದ ಐದು ಬಾರಿ ಸಂಸದನಾಗಿ, 50 ವರ್ಷ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಜಿಲ್ಲೆಯ ಅಭಿವೃದ್ಧಿಗೆ ಹಲವಾರು ಯೋಜನೆ ಜಾರಿ ಮಾಡಿದ್ದೇನೆ. ತಮಿಳುನಾಡಿನ ಹೊಸೂರಿಗೆ ಹೋಗಬೇಕಿದ್ದ ಕೈಗಾರಿಕಾ ಕಾರಿಡಾರ್ ವಸಂತನರಸಾಪುರಕ್ಕೆ ತರಲಾಯಿತು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್.ಪರಮೇಶ್, ನಿವೃತ್ತ ಪ್ರಾಂಶುಪಾಲ ಮರಿಬಸಪ್ಪ, ಆಟೊ ಚಾಲಕರ ವೇದಿಕೆ ಅಧ್ಯಕ್ಷ ಕೆ.ಎಂ.ಶಿವಕುಮಾರ್, ಬಸವೇಶ್ವರ ಸಹಕಾರ ಬ್ಯಾಂಕ್ ಅಧ್ಯಕ್ಷ ಟಿ.ಸಿ.ಓಹಿಲೇಶ್ವರ್, ಮುಖಂಡರಾದ ಎಸ್.ಶಿವಪ್ರಸಾದ್, ಸತ್ಯಮಂಗಲ ಜಗದೀಶ್, ನಿಸರ್ಗ ರಮೇಶ್, ವಿಶ್ವನಾಥ್, ಪ್ರೇಮಕುಮಾರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.