ತುಮಕೂರು: ತಿಪಟೂರಿನ ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ಮಹಿಳೆಯೊಬ್ಬರ ಜತೆ ನಡೆಸಿದ್ದಾರೆ ಎನ್ನಲಾದ ಸರಸ ಸಲ್ಲಾಪದ ವಿಡಿಯೊ ವಾಟ್ಸ್ಆ್ಯಪ್ಗಳಲ್ಲಿ ಹರಿದಾಡುತ್ತಿದೆ. ಇದು ಮಠದ ಭಕ್ತರಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಈ ಸುದ್ದಿಯನ್ನು ಅ.24ರವರೆಗೆ ಪ್ರಕಟಿಸದಂತೆ ವಿರಾಮಕಾಲದ ಜಿಲ್ಲಾ ನ್ಯಾಯಾಲಯವು 14 ಖಾಸಗಿ ವಿದ್ಯುನ್ಮಾನ ಮಾಧ್ಯಮಗಳಿಗೆ ತಡೆ ಸಹ ನೀಡಿದೆ.
‘ಈ ವಿಡಿಯೊ ಮೂಲಕ ತನ್ನ ತೇಜೋವಧೆ ಮಾಡಲಾಗಿದೆ. ನನ್ನಿಂದ ಹಣ ಲಪಟಾಯಿಸುವ ಉದ್ದೇಶ ಇದೆ. ಮಠದ ಹೆಸರು ಮತ್ತು ಭಾವಚಿತ್ರ ಬಳಸಿಕೊಂಡು ವಿವಿಧ ಶೀರ್ಷಿಕೆಯಡಿ ಟಿ.ವಿಗಳಲ್ಲಿ ಪ್ರಸಾರ ಮಾಡುವ ಹುನ್ನಾರ ನಡೆಸಿದ್ದಾರೆ. 2ರಿಂದ 15ನೇ ಪ್ರತಿವಾದಿಗಳು (ವಿದ್ಯುನ್ಮಾನ ಮಾಧ್ಯಮಗಳು) ಈ ಮಾಹಿತಿಯ ಸತ್ಯಾಸತ್ಯತೆ ಪರಾಮರ್ಶಿಸದೆ ಪ್ರಕಟಿಸುವರು. ಇದರಿಂದ ನನ್ನ ಘನತೆ, ಗೌರವಗಳಿಗೆ ಧಕ್ಕೆ ಉಂಟಾಗುತ್ತದೆ. ಮಠ ಮತ್ತು ನನ್ನ ಭಾವಚಿತ್ರಗಳನ್ನು ಟಿ.ವಿ ವಾಹಿನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸದಂತೆ ತಾತ್ಕಾಲಿಕ ನಿರ್ಬಂಧಕ್ಕೆ ಆದೇಶ ನೀಡಬೇಕು’ ಎಂದು ರುದ್ರಮುನಿ ಸ್ವಾಮೀಜಿ ನ್ಯಾಯಾಲಯವನ್ನು ಕೋರಿದ್ದರು.
‘ನ್ಯಾಯಾಲಯದಿಂದ ತಾತ್ಕಾಲಿಕ ನಿರ್ಬಂಧ ಇದ್ದರೂ ಕೆಲವು ವ್ಯಕ್ತಿಗಳು ಕೆಲವು ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದಾರೆ. ಅವರನ್ನು ಕರೆಯಿಸಿ ಕಾನೂನು ಕ್ರಮ ಜರುಗಿಸಿ’ ಎಂದು ಸ್ವಾಮೀಜಿ ಪರ ವಕೀಲ ಎನ್.ಆರ್.ಧನಂಜಯ ಜಿಲ್ಲಾ ಅಪರಾಧ ದಳ ಪೊಲೀಸರನ್ನು ಕೋರಿದ್ದಾರೆ. ಆರು ಮಂದಿಯ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.