ADVERTISEMENT

ತೋವಿನಕೆರೆ: ಹುಣಸೆ ಬೆಳೆಗಾರರಿಗೆ ದಾರಿ ತೋರಿದ ಕಾರ್ಯಾಗಾರ

ರಾಜ್ಯ ಮಟ್ಟದ ಹುಣಸೆ ಕಾರ್ಯಾಗಾರ; ನೂರಾರು ಜನ ಭಾಗಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:36 IST
Last Updated 24 ಫೆಬ್ರುವರಿ 2026, 6:36 IST
ತೋವಿನಕೆರೆಯಲ್ಲಿ ಸೋಮವಾರ ನಡೆದ ರಾಜ್ಯ ಮಟ್ಟದ ಹುಣಸೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರೈತರು
ತೋವಿನಕೆರೆಯಲ್ಲಿ ಸೋಮವಾರ ನಡೆದ ರಾಜ್ಯ ಮಟ್ಟದ ಹುಣಸೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರೈತರು   

ತೋವಿನಕೆರೆ: ಹುಣಸೆ ಮರವನ್ನು ಕಾಡುವ ಕಜ್ಜಿ ರೋಗ ನಿವಾರಣೆ ಹೇಗೆ? ಸಸಿ ನೆಡುವಾಗ ಎಷ್ಟು ಅಂತರ ಪಾಲಿಸಬೇಕು? ನೆಟ್ಟ ಗಿಡ ಎಷ್ಟು ದಿನಕ್ಕೆ ಫಸಲು ಕೊಡುತ್ತದೆ? ಯಂತ್ರದ ಸಹಾಯದಿಂದ ಹುಣಸೆ ಸಿಪ್ಪೆ, ಬೀಜ ಬೇರ್ಪಡಿಸುವುದು ಹೇಗೆ?....

ಇಂತಹ ಹತ್ತಾರು ಪ್ರಶ್ನೆಗಳಿಗೆ ಹುಣಸೆ ಕಾರ್ಯಾಗಾರ ಉತ್ತರ ಒದಗಿಸಿತು.

ತೋವಿನಕೆರೆಯಲ್ಲಿ ಸೋಮವಾರ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ವತಿಯಿಂದ ಆಯೋಜಿಸಿದ್ದ ‘ತಳಿಗಳ ರಕ್ಷಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕಗಳ ಮೂಲಕ ಹುಣಸೆ ರೈತರ ಸಬಲೀಕರಣ’ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರ ಬೆಳೆಗಾರರಿಗೆ ಮಾರ್ಗದರ್ಶನ ತೋರಿತು.

ADVERTISEMENT

ತಜ್ಞರು ಬೆಳೆಗಾರರ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ವೈ‌ಜ್ಞಾನಿಕ ಪದ್ಧತಿ ಅಳವಡಿಕೆಗೆ ಸಲಹೆ ನೀಡಿದರು. ಯಾವುದೇ ಕಾರಣಕ್ಕೂ ಹುಣಸೆ ಮರ ಕಡಿಯದಂತೆ ಮನವಿ ಮಾಡಿದರು. ಒಂದು ಬೆಳೆ ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಬೇಕು. ಆದರೆ, ಹುಣಸೆ, ಮಾವಿನ ವಿಷಯದಲ್ಲಿ ಅದು ಆಗುತ್ತಿಲ್ಲ. ಈ ಎರಡೂ ಬೆಳೆಗಳ ವಿಸ್ತೀರ್ಣ ಕುಸಿಯತೊಡಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಸ್ಯ ಪ್ರಭೇದಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ (ಪಿಪಿವಿಎಫ್‌ಆರ್‌ಎ) ರಿಜಿಸ್ಟ್ರಾರ್‌ ಜನರಲ್‌ ಡಿ.ಕೆ.ಅಗರ್ವಾಲ್‌ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಮಾತನಾಡಿದರು. ವಿವಿಧ ಬಗೆಯ ತಳಿಗಳನ್ನು ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸುವಂತೆ ತಿಳಿಸಿದರು.

ಐಐಎಚ್ಆರ್ ನಿವೃತ್ತ ಅಧಿಕಾರಿ ಎನ್.ಕೃಷ್ಣಕುಮಾರ್, ‘ಮರದಿಂದ ಹುಣಸೆ ಕೀಳುವುದು, ಸಂಸ್ಕರಣೆ‌ ಮಾಡುವುದು ಕಷ್ಟಕರವಾಗುತ್ತಿದೆ. ಕಟಾವಿಗೆ ಸೂಕ್ತವಾದ, ಹೆಚ್ಚಿನ ಎತ್ತರ ಬೆಳೆಯದ ಗಿಡಗಳನ್ನು ಅಭಿವೃದ್ಧಿ ಪಡಿಸಬೇಕು‌. ಅಧಿಕಾರಿಗಳು ಈ ನಿಟ್ಟಿನಲ್ಲಿ ಸಂಶೋಧನೆ ನಡೆಸಬೇಕು' ಎಂದರು.

ಪ್ರಜಾವಾಣಿ ಮುಖ್ಯ ವರದಿಗಾರ ಗಾಣಧಾಳು ಶ್ರೀಕಂಠ ಸಂಪಾದಕತ್ವದ ‘ಹುಣಸೆ– ಬವಣೆಯಿಂದ ಭಾಗ್ಯದೆಡಗೆ’ ಪುಸ್ತಕ ಬಿಡುಗಡೆ ಮಾಡಲಾಯಿತು. ಐಐಎಚ್‌ಆರ್‌ ನಿರ್ದೇಶಕ ಟಿ.ಕೆ.ಬೆಹೆರಾ, ಹೆಸರಘಟ್ಟ ಕೇಂದ್ರ ಎಂ.ಶಂಕರನ್, ಹಿರೇಹಳ್ಳಿ ಪ್ರಾಯೋಗಿಕ ಕೇಂದ್ರದ ಮುಖ್ಯಸ್ಥ ಜಿ.ಕರುಣಾಕರನ್‌, ಲೇಖಕ ಮಲ್ಲಿಕಾರ್ಜುನ ಹೊಸಪಾಳ್ಯ, ಎಚ್‌.ಜೆ.ಪದ್ಮರಾಜು ಇತರರು ಪಾಲ್ಗೊಂಡಿದ್ದರು.

ಕಾರ್ಯಾಗಾರದಲ್ಲಿ ಗಮನ ಸೆಳೆದ ಹುಣಸೆ ಹಣ್ಣು ಪ್ರದರ್ಶನ

ಕಜ್ಜಿ ರೋಗಕ್ಕೆ ಬೇವಿನ ಎಣ್ಣೆ ಅಸ್ತ್ರ

‘ಹುಣಸೆ ಮರದಲ್ಲಿ ಕಾಣಿಸುವ ಕಜ್ಜಿ ರೋಗವು ಸೊಳ್ಳೆಯಿಂದ ಹರಡುತ್ತದೆ. ಬೇವಿನ ಎಣ್ಣೆ ಮೂಲಕ ಇದನ್ನು ನಿಯಂತ್ರಿಸಬಹುದು’ ಎಂದು ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ತಜ್ಞ ಡಾ.ಪ್ರಶಾಂತ್‌ ವಿವರಿಸಿದರು. ಈಗ ಹೊಸದಾಗಿ ಅಭಿವೃದ್ಧಿ ಪಡಿಸುತ್ತಿರುವ ಹುಣಸೆ ತಳಿ ಆಯಸ್ಸು 30 ವರ್ಷ ಮಾತ್ರ. ಆದರೆ ಗಿಡ ನೆಟ್ಟ ಎರಡೂವರೆ ವರ್ಷಕ್ಕೆ ಫಸಲು ಬರುತ್ತದೆ ಎಂದು ತಿಳಿಸಿದರು. ‘ಜಮೀನಿನಲ್ಲಿ ಸಸಿ ಹಾಕಿ 6 ವರ್ಷ ಆಗಿದೆ. ಇದುವರೆಗೆ ಫಸಲು ಬಂದಿಲ್ಲ. 20 ಅಡಿಗೆ ಒಂದು ಮರ ಹಾಕಿದ್ದೇನೆ. ಎರಡು ವರ್ಷದಿಂದ ಹೂವು ಸಹ ಬಿಟ್ಟಿಲ್ಲ. ಇದಕ್ಕೆ ಪರಿಹಾರ ಏನು’ ಎಂದು ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಮಲ್ಲಿಕಾರ್ಜುನ ಪ್ರಶ್ನಿಸಿದರು. ಸಸಿಯ ತೊಗಟೆ ನೋಡಿ ಪರಿಸ್ಥಿತಿ ಏನು ಅಂತ ಹೇಳಬೇಕಾಗುತ್ತದೆ. ಯಾವ ತಳಿಯ ಸಸಿ ನೆಟ್ಟಿದ್ದೀರಿ ಎಂಬುವುದು ಮುಖ್ಯ. ವಿಡಿಯೊ ಚಿತ್ರ ಕಳುಹಿಸಿದರೆ ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ಮಾಡಲಾಗುವುದು ಎಂದು ಪ್ರಶಾಂತ್‌ ಪ್ರತಿಕ್ರಿಯಿಸಿದರು. ಈ ಹಿಂದೆ ಜಿಲ್ಲೆಯಲ್ಲಿ 8 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಹುಣಸೆ ವ್ಯಾಪಿಸಿತ್ತು. ಈಗ 6800 ಹೆಕ್ಟೇರ್‌ಗೆ ಇಳಿಕೆ ಕಂಡಿದೆ. ಮಾವಿನ ಬೆಳೆಯೂ ಇದೇ ಸ್ಥಿತಿಯಲ್ಲಿದೆ. ಕೆವಿಕೆಯಿಂದ ವಾತಾವರಣಕ್ಕೆ ಒಗ್ಗಿಕೊಳ್ಳುವ ತಳಿ ಅಭಿವೃದ್ಧಿ ಪಡಿಸಲಾಗುತ್ತದೆ. ಹಳೆಯ ಮರಗಳನ್ನು ಕಡಿಯಬೇಡಿ ಎಂದು ಮನವಿ ಮಾಡಿದರು.

ಹುಣಸೆ ತಳಿ ದಾಖಲಿಸಿ ಹುಣಸೆ ಮರ ಎಷ್ಟು ವರ್ಷದ್ದು?

ಎಷ್ಟು ಹುಣಸೆ ತಳಿಗಳಿವೆ ಎಂಬುವುದನ್ನು ದಾಖಲೆ ಮಾಡಲು ಆಗುತ್ತಿಲ್ಲ. ಇದೊಂದು ಕೊರತೆಯಾಗಿ ಉಳಿದಿದೆ ಎಂದು ಬೆಂಗಳೂರಿನ‌ ವಿ.ಗಾಯತ್ರಿ ವಿಷಾದಿಸಿದರು. ಕಾರ್ಯಾಗಾರದಲ್ಲಿ ‘ಹುಣಸೆ ಕೃಷಿಯ ಭವಿಷ್ಯ ಮತ್ತು ಸವಾಲು’ ಕುರಿತು ಮಾತನಾಡಿದರು. ಜಿಲ್ಲೆಯಲ್ಲಿ ಅನೇಕ ರೈತರು ಹುಣಸೆ ಬೆಳೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಅದನ್ನು ದಾಖಲಿಸುವ ಕೆಲಸ ಆಗಲಿಲ್ಲ. ರೈತರ ಅನುಭವ ಪ್ರಯೋಗ ಜ್ಞಾನ ದಾಖಲಿಸಬೇಕು. ಪ್ರಸ್ತುತ ಹಳೆಯ ಮರ‌ದಿಂದ ಹಣ್ಣು ಕೀಳುವುದು ಸವಾಲಾಗಿದೆ. ಹಲವರು ಮರದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಇಂತಹ ಅಪಘಾತಗಳಿಗೆ ಯಾರು ಜವಾಬ್ದಾರರು. ಸರ್ಕಾರವೇ? ಅಥವಾ ಮಾಲೀಕರೆ? ಎಂಬ ಪ್ರಶ್ನೆ ಎತ್ತಿದರು. ಅಧಿಕಾರಿ ವರ್ಗದಿಂದ ಸಸಿ ನೀಡುವುದು ಬಿಟ್ಟರೆ ಬೇರೆ ಕಾರ್ಯಗಳು ಆಗುತ್ತಿಲ್ಲ. ಬೆಳೆಗಾರರಿಗೆ ಅಗತ್ಯ ಮಾರ್ಗದರ್ಶನ ಸಿಗುತ್ತಿಲ್ಲ. ರೈತರು ಹುಣಸೆ ಸಂಸ್ಕರಣೆಯಲ್ಲಿ ತುಂಬಾ ತಪ್ಪು ಮಾಡುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿಲ್ಲ. ಹುಣಸೆ ಬೆಳೆ ಆದಾಯದ ಮೂಲ ಆಗಬೇಕು ಎಂದು ಆಶಿಸಿದರು.

ಹುಣಸೆ ಹಣ್ಣು ಪ್ರದರ್ಶನ

ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಜಿಲ್ಲೆ ಸೇರಿದಂತೆ ಹೊರ ರಾಜ್ಯದಲ್ಲಿ ಬೆಳೆಯುತ್ತಿರುವ ಹುಣಸೆ ಹಣ್ಣುಗಳನ್ನು ಪ್ರದರ್ಶಿಸಲಾಯಿತು. ರಾಜ್ಯದ ಹಲವು ಕಡೆಗಳಿಂದ ಆಗಮಿಸಿದ್ದ ಬೆಳೆಗಾರರು ಅಗತ್ಯ ಮಾಹಿತಿ ಪಡೆದುಕೊಂಡರು. ಜಿಲ್ಲೆಯ ಉತ್ಕೃಷ್ಟ ತಳಿಯಾದ ಲಕ್ಷಣ ಹುಣಸೆ ಬೀಜ ಗಮನ ಸೆಳೆಯಿತು. ಹುಣಸೆ ಹಣ್ಣಿನ ಹಲವು ರೀತಿಯ ಉತ್ಪನ್ನ ಹುಣಸೆ ಬೀಜದ ಪುಡಿ ಹುಣಸೆ ಹಣ್ಣಿನ ತೊಕ್ಕು ಹುಣಸೆ ಚಟ್ನಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಯಂತ್ರದ ಬಳಕೆಯಿಂದ ಹುಣಸೆ ಸಿಪ್ಪೆ ತೆಗೆಯುವುದು ಬೀಜ ಬೇರ್ಪಡಿಸುವುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು. ಯಂತ್ರಗಳ ಉಪಯೋಗದ ಕುರಿತು ಪ್ರಗತಿ ಪರ ರೈತ ವಕೀಲ ಚಂದ್ರಶೇಖರ್‌ ತಿಳಿಸಿದರು.

ಹುಣಸೆ ಬೆಳೆಗಾರರ ಪ್ರಮುಖ ಬೇಡಿಕೆಗಳು

* ಹುಣಸೆ ಹೆಚ್ಚಾಗಿ ಬೆಳೆಯುವ ಜಿಲ್ಲೆಗಳಲ್ಲಿ ಶೀತಲ ಶೇಖರಣಾ ಘಟಕ (ಕೋಲ್ಡ್‌ ಸ್ಟೋರೆಜ್‌) ಆರಂಭಿಸಬೇಕು.

* ಹುಣಸೆ ಸಂಸ್ಕರಣೆ ಯಂತ್ರಗಳ ತಯಾರಿ ಮಾರಾಟಕ್ಕೆ ತಜ್ಞರ ಸಮಿತಿ ನೇಮಿಸಬೇಕು.

* ಬೆಳೆ ವಿಮೆ ಜಾರಿ ಮಾಡಬೇಕು.

* ಮೌಲ್ಯವರ್ಧಿತ ಉತ್ಪನ್ನ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು.

* ಮರದಲ್ಲಿ ಪ್ರತಿ ವರ್ಷ ಒಂದೇ ರೀತಿ ಇಳುವರಿ ಬರುವಂತೆ ಅಗತ್ಯ ಸಂಶೋಧನೆ ನಡೆಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.