ತುಮಕೂರು: ನಗರದ ಹೊರ ವಲಯದ ರಿಂಗ್ ರಸ್ತೆ ಅಲಂಕಾರ್ ಬಾರ್ ಬಳಿ ಮಧ್ಯರಾತ್ರಿ ನಡೆದಿದ್ದ ಸುನಿಲ್ ಕುಮಾರ್ ಕೊಲೆ ಪ್ರಕರಣವನ್ನು ಬೇಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು, ಮೃತನ ಪತ್ನಿ ಹಾಗೂ ಪ್ರಿಯಕರನನ್ನು ಬಂಧಿಸಿದ್ದಾರೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ. ಸುನಿಲ್ ಪತ್ನಿ ನಿರ್ಮಲಾ (34) ಹಾಗೂ ಗಂಗಸಂದ್ರದ ಗಾರೆ ಮೇಸ್ತ್ರಿ ರಂಗಯ್ಯ (36) ಬಂಧಿತ ಆರೋಪಿಗಳು.
ನಿರ್ಮಲಾ ಹಾಗೂ ರಂಗಯ್ಯ ನಡುವೆ ಅಕ್ರಮ ಸಂಬಂಧವಿದ್ದು, ಈ ವಿಚಾರ ಗೊತ್ತಾದ ನಂತರ ಸುನಿಲ್ ಗಲಾಟೆ ಮಾಡಿದ್ದ. ಆಗಾಗ ಜಗಳ ಮುಂದುವರಿದಿತ್ತು. ಜ. 15ರಂದು ರಂಗಯ್ಯ, ನಿರ್ಮಲಾ ಸೇರಿ ಕೊಲೆಗೆ ಸಂಚು ರೂಪಿಸಿದ್ದಾರೆ. ಮದ್ಯ ವ್ಯಸನಿಯಾಗಿದ್ದ ಸುನಿಲ್ ಬಾರ್ಗೆ ಹೋಗುತ್ತಿದ್ದಂತೆ ರಂಗಯ್ಯಗೆ ನಿರ್ಮಲಾ ವಿಚಾರ ಮುಟ್ಟಿಸಿದ್ದರು.
ಬಾರ್ ಬಳಿ ಸುನಿಲ್ ನಿಲ್ಲಿಸಿದ್ದ ಬೈಕ್ ಸ್ಟಾರ್ಟ್ ಆಗದಂತೆ ಸೈಲೆನ್ಸರ್ಗೆ ಬಟ್ಟೆ ತುರುಕಿದ್ದರು. ಮದ್ಯ ಸೇವಿಸಿ ಹೊರಬಂದ ಸುನಿಲ್, ಬೈಕ್ ಸ್ಟಾರ್ಟ್ ಮಾಡಲು ಪ್ರಯತ್ನಿಸಿದ್ದಾನೆ. ಅದೇ ಸಮಯಕ್ಕೆ ಹೊಂಚುಹಾಕಿ ಕುಳಿತಿದ್ದ ರಂಗಯ್ಯ, ಸುನಿಲ್ನನ್ನು ಬೈಕ್ನಿಂದ ತಳ್ಳಿ, ಆತನ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆಮಾಡಿ ಪರಾರಿಯಾಗಿದ್ದರು. ಅನುಮಾನ ಬಂದ ಪೊಲೀಸರು ನಿರ್ಮಲಾಳನ್ನು ವಿಚಾರಣೆಗೆ ಒಳಪಡಿಸಿದಾಗ ಎಲ್ಲಾ ವಿಚಾರವನ್ನು ಬಾಯಿ ಬಿಟ್ಟಿದ್ದಾರೆ.
ಗ್ರಾಮಾಂತರ ಡಿವೈಎಸ್ಪಿ ಎಚ್.ಜೆ. ತಿಪ್ಪೇಸ್ವಾಮಿ ನೇತೃತ್ವದಲ್ಲಿ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಸಿಪಿಐ ಸಿ.ಎಚ್.ರಾಮಕೃಷ್ಣಯ್ಯ, ಪಿಎಸ್ಐ ಎಂ.ಬಿ.ಲಕ್ಷ್ಮಯ್ಯ ನೇತೃತ್ವದಲ್ಲಿ ಕೊಲೆ ಪ್ರಕರಣವನ್ನು ಬೇಧಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.