
ತಿಪಟೂರು: ತಾಲ್ಲೂಕಿನ ನೊಣವಿನಕೆರೆ ಸರ್ಕಾರಿ ಪಿಎಂಶ್ರೀ, ಕೆಪಿಎಸ್ ಶಾಲೆಯಲ್ಲಿ ‘ಸಾಂಪ್ರದಾಯಿಕ ಆಹಾರದಲ್ಲಿದೆ ನಮ್ಮ ಭವಿಷ್ಯ’, ‘ಭೂಮಿಯ ಮಡಿಲಿಂದ ನಮ್ಮಯ ಒಡಲಿಗೆ’, ‘ಪ್ರಕೃತಿ, ಆಹಾರ, ಆರೋಗ್ಯದಲ್ಲಿ ನವೋದ್ಯಮ’ ಕಾರ್ಯಕ್ರಮಕ್ಕೆ ಶಾಸಕ ಕೆ.ಷಡಕ್ಷರಿ ಚಾಲನೆ ನೀಡಿದರು.
750 ವಿದ್ಯಾರ್ಥಿಗಳು, ಪೋಷಕರು ಹಾಗೂ 42 ಮಂದಿ ಶಿಕ್ಷಕರು ಪಲ್ಗೊಂಡಿದ್ದರು. ಸಾವಿರಾರು ಜನರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಸಾಂಪ್ರದಾಯಿಕ ಆಹಾರ ಪದ್ಧತಿಗಳನ್ನು ವೀಕ್ಷಿಸಿ, ರುಚಿ ನೋಡಿದರು.
ವಿವಿಧ ಬಗೆಯ ರೊಟ್ಟಿ, ಕೃಷಿ ಮೌಲ್ಯವರ್ಧಿತ ಉತ್ಪನ್ನಗಳ ಮಳಿಗೆ, ಬಗೆ, ಬಗೆಯ ಹೋಳಿಗೆ, ಆಯುರ್ವೇದ ಮಹತ್ವವಿರುವ ಆಹಾರ ಪದಾರ್ಥಗಳ ಪ್ರದರ್ಶನ, ಸುಟ್ಟು ತಿನ್ನಬಹುದಾದ ಕಾಳು, ಗಾಣದ ಎಣ್ಣೆಯ ಉಪಯೋಗ ಹಾಗೂ ಮಹತ್ವ, ನೈಸರ್ಗಿಕ ಸೌಂದರ್ಯವರ್ಧಕಗಳ ಮಳಿಗೆ, ಕಡಲೆ, ಎಳ್ಳು, ಸಾವೆ, ಹಾರಕ, ರಾಗಿ, ನವಣೆ, ಸಜ್ಜೆ, ಊದಲು ಮೊದಲಾದ ಧಾನ್ಯಗಳಿಂದ ತಯಾರಿಸಿದ ಆಹಾರ ಉಂಡೆಗಳ ಜಗತ್ತು, ಹುರುಳಿಕಾಳಿನ ಖಾದ್ಯ, ಸಜ್ಜೆ, ಅಕ್ಕಿ, ರಾಗಿ ಹಪ್ಪಳ, ನವಣೆ ಪಾಯಸ, ರಾಗಿ ಗಂಜಿ, ಜೋಳದ ರೊಟ್ಟಿ, ಹಬೆಯಲ್ಲಿ ಬೇಯಿಸಿದ ವಿವಿಧ ರೀತಿಯ ಕಡುಬು, ಹತ್ತಕ್ಕೂ ಹೆಚ್ಚು ತರಕಾರಿಗಳ ಸೂಪ್, ವಿವಿಧ ಬಗೆಯ ಕೋಸುಂಬರಿ, ಸಾವಯವ ಹಣ್ಣುಗಳ ಬಳಕೆ, ಮಹತ್ವ ಜಾಗೃತಿ ಮತ್ತು ಮಾರಾಟ ನಡೆಯಿತು.
ಈ ಎಲ್ಲ ಮಳಿಗೆಗಳಲ್ಲಿ ವಿದ್ಯಾರ್ಥಿಗಳು ತಾವೇ ನಿಂತು ಜನರಿಗೆ ಆಹಾರದ ಮಹತ್ವ, ಆರೋಗ್ಯ ಲಾಭ ಹಾಗೂ ಸಾಂಪ್ರದಾಯಿಕ ಪದ್ಧತಿಗಳ ಬಗ್ಗೆ ವಿವರಿಸಿದರು.
ಸಗಣಿಯಿಂದ ತಯಾರಿಸಿದ ಕಣ, ಫೋಟೊ ತೆಗೆಯಲು ವಿಶೇಷ ಬೂತ್, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಬಟ್ಟೆಗಳಿಂದ ತಯಾರಿಸಿದ ಪ್ಲೆಕ್ಸ್, ಗೋಣಿ ಚೀಲಗಳ ಬಳಕೆ, ಮಣ್ಣಿನ ಮಡಕೆ ಹಾಗೂ ಅಡಿಕೆ ತಟ್ಟೆಗಳ ಬಳಕೆಯಿಂದ ಮೃಷ್ಟಾನ್ನ ಕೂಟದ ವ್ಯವಸ್ಥೆ, ಹಣ್ಣು, ಎಲೆ, ನೈಸರ್ಗಿಕ ವಸ್ತುಗಳ ಪ್ರದರ್ಶನ.
ವೀಳ್ಯೆದಲೆ ತೋರಣ, ತೆಂಗಿನಗರಿಯ ಸ್ವಾಗತ ಕಮಾನು, ಮಕ್ಕಳು ಧರಿಸಿದ ಹಸಿರಿನ ಗಿಡಗಳ ಮತ್ತು ತೆಂಗಿನಗರಿ ಟೋಪಿ, ಮಾವು, ಹಲಸು, ಕಿತ್ತಲೆ, ಸಪೋಟ ಹಣ್ಣುಗಳ ಮಾರಾಟ, ತೆಂಗಿನಕಾಯಿಯಿಂದ ಅಲಂಕೃತ ತೋಟ, ಬೀಸುವ ಕಲ್ಲಿನಿಂದ ರಾಗಿಯ ಬೀಸುವಿಕೆ ಪ್ರದರ್ಶನ, ಇವುಗಳ ಮೂಲಕ ಹಳೆಯ ಕಾಲದ ಗ್ರಾಮೀಣ ಜೀವನದ ನೈಜ ಅನುಭವವನ್ನು ಒದಗಿಸಿದರು.
ಶಾಸಕ ಕೆ.ಷಡಕ್ಷರಿ ರಾಗಿಯಿಂದ ತಯಾರಿಸಿದ ಕಿಲ್ಸಾ ಖಾದ್ಯವನ್ನು ಕತ್ತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವಿಜ್ಞಾನ, ತಂತ್ರಜ್ಞಾನ ನಮ್ಮ ಜೀವನ ಸುಲಭ ಮಾಡಿದೆಯೇ ಹೊರತು ಆರೋಗ್ಯ ಕಾಪಾಡುವಲ್ಲಿ ವಿಫಲವಾಗುತ್ತಿದೆ. ಆರೋಗ್ಯದಿಂದಿದ್ದರೆ ಜ್ಞಾನದ ಮೌಲ್ಯ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಅವರ ಸಾಮರ್ಥ್ಯ ಹೆಚ್ಚಿಸಿ ನವೋದ್ಯಮಿಗಳಾಗಲು ಪ್ರೇರಣೆ ನೀಡುವುದು ಎಂದು ಹೇಳಿದರು.
ನೊಣವಿನಕೆರೆ ಶಾಲೆಯಲ್ಲಿ ನಡೆದ ಈ ಪ್ರಕೃತಿ ಆಹಾರ ಕಾರ್ಯಕ್ರಮದಲ್ಲಿ ಪಿಎಂಶ್ರೀ ಕೆಪಿಎಸ್ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಸುರೇಶ ಎಸ್.ಆರ್. ನೇತೃತ್ವ ವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ದೊಡ್ಡರಂಗಪ್ಪ, ತಾ.ಪಂ ಮಾಜಿ ಉಪಾಧ್ಯಕ್ಷ ಶಂಕರ್, ಮುರಳೀಧರ್ ಗುಂಗರಮಳೆ, ಕೃಷಿ ತಜ್ಞ ಉಮೇಶ್ ಆಲ್ಬೂರು, ಹಿರಿಯ ಉಪನ್ಯಾಸಕ ಮಹೇಶ್, ಶಾಂತಲಾ, ಪ್ರೌಢಶಾಲಾ ಹಾಗೂ ಕಾಲೇಜಿನ ಶಿಕ್ಷಕರು, ಸಿಬ್ಬಂದಿ, ಎಸ್.ಡಿ.ಎಂ.ಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.