
ತುಮಕೂರು: ಟಾಸ್ಕ್ಗಳಿಗೆ ಹಣ ಹೂಡಿಕೆ ಮಾಡಿ ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ತುರುವೇಕೆರೆ ತಾಲ್ಲೂಕಿನ ಮುದ್ದನಹಳ್ಳಿ ಹೊಸೂರಿನ ಬಸವರಾಜು ಎಂಬುವರು ₹7.44 ಲಕ್ಷ ಕಳೆದುಕೊಂಡಿದ್ದಾರೆ.
ಆರೋಪಿಗಳು ಕರೆ ಮಾಡಿ, ‘ನೀವು ರಿಲಿಯನ್ಸ್ ಪ್ರಾಪರ್ಟಿಸ್ಗೆ ಸದಸ್ಯರಾಗಿದ್ದು, ನಿಮಗೆ ಮೂರು ಸ್ಲಾಟ್ಗಳನ್ನು ಕೊಡುತ್ತೇವೆ. ಅದನ್ನು ಪೂರ್ಣಗೊಳಿಸಿದರೆ ಹಣ ನೀಡಲಾಗುವುದು’ ಎಂದಿದ್ದಾರೆ. ಇದಾದ ಬಳಿಕ ಬಸವರಾಜು ಖಾತೆಗೆ ₹820 ವರ್ಗಾಯಿಸಿದ್ದಾರೆ. ಸ್ಲಾಟ್ ಮುಂದುವರಿಸಲು ₹11,228 ರೀಚಾರ್ಜ್ ಮಾಡಬೇಕು ಎಂದು ತಿಳಿಸಿದ್ದಾರೆ. ಬಸವರಾಜು ತಮ್ಮ ಪತ್ನಿ ಖಾತೆಯಿಂದ ಹಣ ವರ್ಗಾವಣೆ ಮಾಡಿದ್ದು, ವಾಪಸ್ ₹18 ಸಾವಿರ ಅವರ ಖಾತೆಗೆ ಹಾಕಿದ್ದಾರೆ.
ಸ್ಲಾಟ್ ಮುಂದುವರಿಸಲು ಮತ್ತಷ್ಟು ರೀಚಾರ್ಜ್ ಮಾಡಬೇಕು ಎಂದು ₹10 ಸಾವಿರ ಪಡೆದಿದ್ದಾರೆ. ಇದೇ ಕಾರಣ ಹೇಳಿ ಡಿ. 7ರಿಂದ 12ರ ವರೆಗೆ ಹಂತ ಹಂತವಾಗಿ ಒಟ್ಟು ₹7,62,131 ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಅವರಿಗೆ ಕೇವಲ ₹18 ಸಾವಿರ ಹಿಂದಿರುಗಿಸಿದ್ದಾರೆ.
ಇದುವರೆಗೆ ವರ್ಗಾವಣೆ ಮಾಡಿದ ಹಣ ವಾಪಸ್ ಕೊಡುವಂತೆ ಬಸವರಾಜು ಕೇಳಿದ್ದಾರೆ. ‘ಇನ್ನೂ ₹4.60 ಲಕ್ಷ ಕಟ್ಟಿದರೆ ಮಾತ್ರ ಹಣ ನೀಡಲಾಗುತ್ತದೆ’ ಎಂದು ಆರೋಪಿಗಳು ಹೇಳಿದ್ದಾರೆ. ಇದರಿಂದ ಅನುಮಾನಗೊಂಡು ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.