
ತುಮಕೂರು: ಕಳೆದ ಮೂರು ದಿನಗಳಿಂದ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸಿಟಿ–ಎಂಐಆರ್ ಸ್ಕ್ಯಾನಿಂಗ್ ಸೇವೆ ಸ್ಥಗಿತಗೊಂಡಿದ್ದು, ರೋಗಿಗಳು ಖಾಸಗಿ ಆಸ್ಪತ್ರೆ ಅವಲಂಬಿಸಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್ಎಚ್ಎಂ) ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಕೇಂದ್ರ ನಡೆಯುತ್ತಿದೆ. ಇದರ ನಿರ್ವಹಣೆಯನ್ನು ಕ್ರಸ್ನಾ ಡಯಾಗ್ನೋಸ್ಟಿಕ್ ಲಿಮಿಟೆಡ್ಗೆ ಎಂಬ ಖಾಸಗಿ ಸಂಸ್ಥೆಗೆ ಎನ್ಎಚ್ಎಂ ಗುತ್ತಿಗೆ ನೀಡಿದೆ. ಈ ಸಂಸ್ಥೆಗೆ ಸರ್ಕಾರದಿಂದ 2023ರಿಂದ ಹಣ ಬಿಡುಗಡೆಯಾಗಿಲ್ಲ. ಇದನ್ನು ವಿರೋಧಿಸಿ, ಅನುದಾನಕ್ಕೆ ಒತ್ತಾಯಿಸಿ ಸ್ಕ್ಯಾನಿಂಗ್ ಸೇವೆ ನಿಲ್ಲಿಸಲಾಗಿದೆ.
ಬಾಕಿ ಹಣ ಸಂದಾಯ ಆಗುವ ತನಕ ಕೇಂದ್ರದಲ್ಲಿ ಸೇವೆ ನೀಡುವುದಿಲ್ಲ ಎಂದು ರೋಗಿಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಅಪಘಾತ, ತುರ್ತು ಚಿಕಿತ್ಸೆ ಅವಶ್ಯ ಇರುವ ರೋಗಿಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲರೂ ದುಬಾರಿ ಶುಲ್ಕ ಪಾವತಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಪಡೆಯುತ್ತಿದ್ದಾರೆ.
ನಿತ್ಯ ನೂರಾರು ಜನ ರೋಗಿಗಳು ಸ್ಕ್ಯಾನಿಂಗ್ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಆದರೆ, ಕಳೆದ ಮೂರು ದಿನಗಳಿಂದ ಇಲ್ಲಿ ಸೇವೆ ಸಿಗುತ್ತಿಲ್ಲ. ಬಿಪಿಎಲ್ ಪಡಿತರ ಚೀಟಿ, ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ (ಎಬಿಆರ್ಕೆ) ಕಾರ್ಡ್ ಇದ್ದವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸ್ಥಗಿತಗೊಳಿಸಿದ್ದರಿಂದ ಬಡವರು ಕಂಗಾಲಾಗಿದ್ದಾರೆ. ಖಾಸಗಿ ಆಸ್ಪತ್ರೆಗಳ ಶುಲ್ಕ ಪಾವತಿಸಲು ಆಗದವರು ಉಚಿತ ಸೇವೆ ಪಡೆಯಲು ಪರದಾಡುತ್ತಿದ್ದಾರೆ.
‘ಎರಡು ದಿನದಿಂದ ಇಲ್ಲಿಗೆ ಅಲೆಯುವುದು ನಮ್ಮ ಕೆಲಸವಾಗಿದೆ. ವೈದ್ಯರು ಹೊರಗಡೆ ಹೋಗಿ ಸ್ಕ್ಯಾನಿಂಗ್ ಮಾಡಿಸಿ, ಇಲ್ಲದಿದ್ದರೆ ಎರಡು ದಿನ ಬಿಟ್ಟು ಬನ್ನಿ ಎನ್ನುತ್ತಿದ್ದಾರೆ. ನಿನ್ನೆಯೂ ಬಂದು ವಾಪಸ್ ಹೋಗಿದ್ದೆವು. ಇವತ್ತು ಅದೇ ಪರಿಸ್ಥಿತಿ ಇದೆ. ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಹೀಗಾದರೆ ನಾವು ಯಾರನ್ನು ಕೇಳಬೇಕು’ ಎಂದು ಬರಗೂರಿನ ಮಹಾಂತೇಶ್ ಪ್ರಶ್ನಿಸಿದರು.
‘ರಾಜ್ಯದಾದ್ಯಂತ ಒಟ್ಟು ₹140 ಕೋಟಿಗೂ ಹೆಚ್ಚು ಅನುದಾನ ಬರಬೇಕಿದೆ. ಹಣ ಬಿಡುಗಡೆಗೆ ಹಲವು ಸಲ ಮನವಿ ಮಾಡಿದರೂ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಅನಿವಾರ್ಯವಾಗಿ ಸ್ಕ್ಯಾನಿಂಗ್ ಸೇವೆ ನಿಲ್ಲಿಸಲಾಗಿದೆ. ಹಣ ಜಮಾ ಆದ ಕೂಡಲೇ ಸೇವೆ ಆರಂಭಿಸುತ್ತೇವೆ’ ಎಂದು ಜಿಲ್ಲಾ ಆಸ್ಪತ್ರೆಯ ಎಂಆರ್ಐ ಸ್ಕ್ಯಾನಿಂಗ್ ಕೇಂದ್ರದ ವೈದ್ಯ ರಾಘವೇಂದ್ರ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.