
ತುಮಕೂರು: ನಗರದ ಕ್ಯಾತ್ಸಂದ್ರದ ಟೂಡಾ ಬಡಾವಣೆಯ ಕ್ರೀಡಾ ಸಮುಚ್ಚಯವನ್ನು ಖಾಸಗಿ ಶಾಲೆಗೆ ನೀಡಲು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ) ಮುಂದಾಗಿದ್ದು, ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ.
2016ರಲ್ಲಿ ಸಮುಚ್ಚಯಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ₹4.50 ಕೋಟಿ ವೆಚ್ಚದಲ್ಲಿ ನಿರ್ಮಿಸಿ, 2018ರಲ್ಲಿ ಉದ್ಘಾಟಿಸಲಾಯಿತು. ಅಲ್ಲಿಂದ ಈವರೆಗೆ ಕ್ರೀಡಾಪಟುಗಳ ಅಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಉದ್ಘಾಟಿಸಿದ ಎರಡು ವರ್ಷಕ್ಕೆ ಕೋವಿಡ್ ಎದುರಾಯಿತು. ಆಗ ಇಡೀ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿತ್ತು. ಇದಾದ ಬಳಿಕ ಉಪಯೋಗ ಮಾಡಿಕೊಂಡಿಲ್ಲ.
ಮೂರು ಅಂತಸ್ತಿನ ಕಟ್ಟಡ, ಪ್ರತಿ ಹಂತದಲ್ಲೂ ಪ್ರತ್ಯೇಕವಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಕಬಡ್ಡಿ, ಯೋಗ, ಟೇಬಲ್ ಟೆನಿಸ್, ಶೂಟಿಂಗ್ ಸೇರಿದಂತೆ ವಿವಿಧ ಕ್ರೀಡೆಗಳ ಆಯೋಜನೆಗೆ ಬೇಕಾದ ಎಲ್ಲ ಸೌಕರ್ಯಗಳು ಇಲ್ಲಿವೆ. ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಬೇಕಿದ್ದ ಕಟ್ಟಡವನ್ನು ಖಾಸಗಿ ಸಂಸ್ಥೆಗೆ ನೀಡಲು ನಿರ್ಧರಿಸಲಾಗಿದೆ.
ಮೂರು ಅಂತಸ್ತಿನ ಕಟ್ಟಡದ ನಿರ್ವಹಣೆ ಟೂಡಾಗೆ ಹೊರೆಯಾಗಿದೆ. ಈಗಾಗಲೇ ಮೂರು ಸಲ ಕ್ರೀಡಾ ಸಮುಚ್ಚಯವನ್ನು ಕ್ರೀಡಾ ಚಟುವಟಿಕೆ ನಡೆಸಲು ಟೆಂಡರ್ ಆಹ್ವಾನಿಸಲಾಗಿತ್ತು. ಯಾವುದೇ ಕ್ರೀಡಾ ಸಂಸ್ಥೆ ಇತ್ತ ಆಸಕ್ತಿ ತೋರಲಿಲ್ಲ. ‘ನಗರದಿಂದ ಹೊರಗಡೆ ಇದೆ, ಬಾಡಿಗೆ ತುಂಬಾ ದುಬಾರಿ’ ಎಂಬ ಕಾರಣಕ್ಕೆ ಗುತ್ತಿಗೆ ಪಡೆದುಕೊಳ್ಳಲು ಯಾರೂ ಮುಂದಾಗಿಲ್ಲ.
ಇದೀಗ ಸಮುಚ್ಚಯದಲ್ಲಿ ಶಾಲೆ ನಡೆಸಲು ಖಾಸಗಿ ಸಂಸ್ಥೆಯೊಂದು ಮುಂದೆ ಬಂದಿದೆ. ಇದಕ್ಕೆ ಪೂರಕವಾಗಿ ಟೆಂಡರ್ ಆಹ್ವಾನಿಸಲು ಟೂಡಾ ತಯಾರಿ ಮಾಡಿಕೊಂಡಿದೆ. ಮುಂದಿನ ಕೆಲ ದಿನಗಳಲ್ಲಿ ಇಡೀ ಸಮುಚ್ಚಯವನ್ನು ಶಾಲೆಗೆ ವಹಿಸಿ ಕೈತೊಳೆದುಕೊಳ್ಳಲಿದೆ. ಇಲ್ಲಿ ಶಾಲೆ ಆರಂಭಿಸಿದರೆ ಕ್ರೀಡಾಪಟುಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಹೆಸರಿಗೆ ಮಾತ್ರ ಕ್ರೀಡಾ ಸಮುಚ್ಚಯ ಎಂಬಂತಾಗುತ್ತದೆ. ಸರ್ಕಾರದ ಆಸ್ತಿ, ಬಂಡವಾಳ ಖಾಸಗಿಯವರ ಪಾಲಾಗಲಿದೆ.
ಕಟ್ಟಡ ಉದ್ಘಾಟನೆ ಭಾಗ್ಯ ಕಂಡು 8 ವರ್ಷ ಕಳೆದಿದೆ. ಇದುವರೆಗೆ ಯಾವುದೇ ಕ್ರೀಡಾಕೂಟಗಳನ್ನು ಇಲ್ಲಿ ಆಯೋಜಿಸಲಿಲ್ಲ. ಕಳೆದ ತಿಂಗಳಷ್ಟೇ ರಾಜ್ಯ ಮಟ್ಟದ ಒಲಿಂಪಿಕ್ಸ್ ಕ್ರೀಡಾಕೂಟ ನಗರದಲ್ಲಿ ನಡೆಯಿತು. ಜೂನಿಯರ್ ಕಾಲೇಜು ಮೈದಾನ, ವಿಶ್ವವಿದ್ಯಾಲಯ ಮೈದಾನ ಸೇರಿದಂತೆ ವಿವಿಧ ಕಡೆಗಳಲ್ಲಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಆದರೆ ಕ್ರೀಡಾ ಸಮುಚ್ಚಯದಲ್ಲಿ ವಾಲಿಬಾಲ್, ಬ್ಯಾಸ್ಕೆಟ್ಬಾಲ್, ಟೆನಿಸ್, ಶೂಟಿಂಗ್ಗೆ ಬೇಕಾದ ಸೌಲಭ್ಯಗಳಿದ್ದರೂ ಒಂದು ಪಂದ್ಯವನ್ನೂ ಇಲ್ಲಿ ನಡೆಸಲಿಲ್ಲ. ಬಳಕೆ ಮಾಡಬಹುದಾದ ಅವಕಾಶ ಸಿಕ್ಕರೂ ಜಿಲ್ಲಾ ಆಡಳಿತ ಕೈಚಲ್ಲಿತು.
ಒಂದು ಟೂರ್ನಿ ನಡೆಸದೆ ಇಡೀ ಸಮುಚ್ಚಯವನ್ನು ಖಾಸಗಿಯವರಿಗೆ ನೀಡಲು ಕ್ರಮ ವಹಿಸಿದ್ದು, ಕ್ರೀಡಾಪಟುಗಳಿಂದ ವಿರೋಧ ವ್ಯಕ್ತವಾಗಿದೆ. ನಗರದಲ್ಲಿ ಶೂಟಿಂಗ್ ಕೇಂದ್ರ, ಈಜು ಕೊಳ, ಟೆನಿಸ್ ಅಕಾಡೆಮಿ, ಜಲಕ್ರೀಡಾ ಅಕಾಡೆಮಿ ಆರಂಭಿಸಲು ಜಿಲ್ಲಾ ಆಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಗತ್ಯ ಜಾಗದ ಹುಡುಕಾಟದಲ್ಲಿದೆ. ಆದರೆ ಎಲ್ಲ ಸೌಲಭ್ಯ ಇರುವ ಕ್ರೀಡಾ ಸಮುಚ್ಚಯವನ್ನು ಖಾಸಗಿಯವರಿಗೆ ಯಾಕೆ ಕೊಡಬೇಕು? ಎಂಬುವುದು ಜಿಲ್ಲೆಯ ಕ್ರೀಡಾಪಟುಗಳ ಪ್ರಶ್ನೆ.
ಈಜು ಕೊಳವಷ್ಟೇ ಬಳಕೆ
ಇಡೀ ಕ್ರೀಡಾ ಸಮುಚ್ಚಯದಲ್ಲಿ ಈಜು ಕೊಳ ಮಾತ್ರ ಬಳಕೆಗೆ ಕೊಡಲಾಗಿದೆ. ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಇಲ್ಲಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಿದೆ. ಒಬ್ಬರಿಗೆ ₹100 ನಿಗದಿ ಪಡಿಸಲಾಗಿದೆ. ಇದನ್ನು ಹೊರತು ಪಡಿಸಿದರೆ ಇಡೀ ಸಮುಚ್ಚಯ ಪಾಳು ಬಿದ್ದ ಸ್ಥಿತಿಯಲ್ಲಿದೆ. ಬ್ಯಾಸ್ಕೆಟ್ಬಾಲ್ ವಾಲಿಬಾಲ್ ಬ್ಯಾಡ್ಮಿಂಟನ್ ಕ್ರೀಡೆಗಳಿಗೆ ನಿರ್ಮಿಸಿದ ಅಂಕಣಗಳು ಅಧ್ವಾನ ಆಗಿವೆ. ಬ್ಯಾಸ್ಕೆಟ್ಬಾಲ್ ಅಂಕಣವನ್ನು ಕೆಲವರು ಕ್ರಿಕೆಟ್ ಪಿಚ್ ಮಾಡಿಕೊಂಡಿದ್ದಾರೆ. ಕಸದ ರಾಶಿ ಹರಡಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರ ನಿರ್ವಹಣೆಯಿಂದ ದೂರ ಉಳಿದಿದೆ.
ಖಾಸಗಿ ಸಂಸ್ಥೆ ಮನವಿ
ಈಗಾಗಲೇ ಈಜುಕೊಳ ಬಳಕೆಗೆ ನೀಡಲಾಗಿದೆ. ಇಡೀ ಸಮುಚ್ಚಯವನ್ನು ಬಾಡಿಗೆ ರೂಪದಲ್ಲಿ ಪಡೆದು ಶಾಲೆ ನಡೆಸಲಾಗುವುದು ಎಂದು ಖಾಸಗಿ ಸಂಸ್ಥೆ ಮನವಿ ಮಾಡಿದೆ. ಸಮುಚ್ಚಯವನ್ನು ಶಾಲೆಗೆ ನೀಡಲು ಅವಕಾಶ ಇದೆ. ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ. ಎನ್.ಆರ್.ಉಮೇಶ್ ಚಂದ್ರ ಟೂಡಾ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.