ಸಾಂದರ್ಭಿಕ ಚಿತ್ರ
ತುಮಕೂರು: ನಗರದ ಹೊರವಲಯದ ದಿಬ್ಬೂರು ಬಳಿ ಶುಕ್ರವಾರ ರಾತ್ರಿ ರೌಡಿಶೀಟರ್ ಮನು ಅಲಿಯಾಸ್ ಮನೋಜ್ (25) ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಪ್ರಕರಣವೊಂದರ ಸಂಬಂಧ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮನೋಜ್ ಕಾನ್ಸ್ಟೇಬಲ್ ಚೇತನ್ ಮೇಲೆ ಡ್ರ್ಯಾಗರ್ನಿಂದ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಸ್ಥಳದಲ್ಲಿದ್ದ ನಗರ ಠಾಣೆ ಸರ್ಕಲ್ ಇನಸ ಸ್ಪೆಕ್ಟರ್ ದಿನೇಶ್ಕುಮಾರ್ ಶರಣಾಗುವಂತೆ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಶರಣಾಗದೆ ಪರಾರಿಯಾಗಲು ಯತ್ನಿಸಿದ್ದು, ಕಾಲಿಗೆ ಗುಂಡು ಹೊಡೆದಿದ್ದಾರೆ.
ಕಾನ್ಸ್ಟೇಬಲ್ ಚೇತನ್ ಹಾಗೂ ರೌಡಿಶೀಟರ್ ಮನೋಜ್ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜುಲೈ 21ರಂದು ಮನೋಜ್, ರೋಹಿತ್ ಸೇರಿ ಮನು ಮತ್ತು ಪವನ್ ಎಂಬ ರೌಡಿಶೀಟರ್ಗಳ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಮನೋಜ್ರನ್ನು ಶುಕ್ರವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದರು. ಸ್ಥಳ ಮಹಜರು ಮತ್ತು ಸಾಕ್ಷ್ಯ ಸಂಗ್ರಹಕ್ಕೆ ಕರೆದುಕೊಂಡು ಹೋದಾಗ ಘಟನೆ ನಡೆದಿದೆ.
‘ಗಲಾಟೆ ಮಾಡಿಕೊಂಡ ನಾಲ್ಕು ಜನ ಈ ಹಿಂದೆ ಒಂದೇ ಗ್ಯಾಂಗ್ನಲ್ಲಿ ಗುರುತಿಸಿಕೊಂಡಿದ್ದರು. ಭಿನ್ನಾಭಿಪ್ರಾಯವುಂಟಾಗಿ ಪರಸ್ಪರ ದೂರ ಆಗಿದ್ದರು. ಈಚೆಗೆ ಎರಡು ಗ್ಯಾಂಗ್ಗಳ ಮಧ್ಯೆ ಗಲಾಟೆ ಆಗಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿತ್ತು. ಮೊದಲ ಆರೋಪಿ ರೋಹಿತ್ರನ್ನು ಈಗಾಗಲೇ ಬಂಧಿಸಲಾಗಿದೆ. ಮನೋಜ್ ವಿರುದ್ಧ ಕೊಲೆಯ ಯತ್ನ ಪ್ರಕರಣ ದಾಖಲಿಸಲಾಗುವುದು. ತನಿಖೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.