ತುರುವೇಕೆರೆ: ಇಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಜಿಲ್ಲಾ ರಾಜ್ಯಪಾಲರ ಭೇಟಿ ಮತ್ತು 33ಕ್ಕೂ ಹೆಚ್ಚು ಸೇವಾ ಚಟುವಟಿಕೆಗಳ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಜಿಲ್ಲಾ ಲಯನ್ಸ್ ರಾಜ್ಯಪಾಲ ಮೋಹನ್ ಕುಮಾರ್ ಮಾತನಾಡಿ, ‘ಲಯನ್ಸ್ ಕ್ಲಬ್ ವತಿಯಿಂದ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡು 2.70 ಲಕ್ಷ ಸರ್ಕಾರಿ ಶಾಲೆಯ ಮಕ್ಕಳಿಗೆ ಕಣ್ಣಿನ ತಪಾಸಣೆ ಮಾಡಲಾಗುವುದು. ಈಗಾಗಲೇ 80 ಸಾವಿರ ಮಕ್ಕಳ ಕಣ್ಣಿನ ತಪಾಸಣೆ ಮಾಡಲಾಗಿದೆ. 5 ಸಾವಿರ ಮಕ್ಕಳಿಗೆ ಉಚಿತ ಕನ್ನಡಕ ನೀಡಲಾಗಿದೆ’ ಎಂದು ಹೇಳಿದರು.
ತಾಲ್ಲೂಕು ಲಯನ್ಸ್ ಅಧ್ಯಕ್ಷ ಎಚ್.ಆರ್.ರಂಗನಾಥ್ ಮಾತನಾಡಿ, ಲಯನ್ಸ್ ಕ್ಲಬ್ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರಗಳಿಗೆ ಮೊದಲ ಆದ್ಯತೆ ನೀಡಿದೆ. ಮೆಗಾ ಆರೋಗ್ಯ ಶಿಬಿರ ಹಮ್ಮಿಕೊಳ್ಳುವ ಮೂಲಕ ರೋಗಿಗಳ ಆರೋಗ್ಯ ತಪಾಸಣೆಗೂ ಒತ್ತು ನೀಡಲಾಗಿದೆ. ಶಿಕ್ಷಣ ಸಮುದಾಯದ ಹಿತಾಸಕ್ತಿ, ಅಸಹಾಯಕರಿಗೆ ನೆರವು ಸೇರಿದಂತೆ ಇನ್ನಿತರ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಇದೇ ವೇಳೆ ಬೆಂಗಳೂರು ವಕೀಲರ ಸಂಘದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ನಮ್ಮ ತಾಲ್ಲೂಕಿನ ವಕೀಲ ಪ್ರವೀಣ್ ಗೌಡ ಹಾಗೂ ನೂತನ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನನಟೇಶ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ.ಲೋಕೇಶ್, ಪಿ.ಎಚ್.ಧನಪಾಲ್, ಟಿ.ಸಿ.ಸುನಿಲ್ಬಾಬು, ಎಸ್.ವಿ.ರವಿಕುಮಾರ್, ಮಿಹಿರಕುಮಾರ್, ರಾಮಕೃಷ್ಣ ಪಾಲ್ಗೊಂಡಿದ್ದರು.
Highlights - ತುರುವೇಕೆರೆ ಲಯನ್ಸ್ ಕ್ಲಬ್ ಒಂದೇ ದಿನದಲ್ಲಿ ಸುಮಾರು 33 ಕಾರ್ಯಕ್ರಮಗಳನ್ನು ಕೈಗೊಂಡು ದಾಖಲೆ ನಿರ್ಮಿಸಿದೆ. ಮಾಯಸಂದ್ರದಲ್ಲಿ ಅಂಗನವಾಡಿ ಹಾಗೂ ಎಲ್ಕೆಜಿ ಮಕ್ಕಳಿಗೆ ಯೂನಿಫಾರಂ ವಿತರಣೆ, ಕಲ್ಪತರು ವೃದ್ದಾಶ್ರಮಕ್ಕೆ ಆಹಾರ ಸಾಮಗ್ರಿಗಳ ವಿತರಣೆ, ಬೊಮ್ಮೇನಹಳ್ಳಿ ಸರ್ಕಾರಿ ಶಾಲೆಗೆ ಗಾಡ್ರೇಜ್ ಬೀರು ವಿತರಣೆ, ಸರ್ಕಾರಿ ಆಸ್ಪತ್ರೆಗೆ ಧ್ವನಿವರ್ಧಕ ಹಾಗೂ ಒಳರೋಗಿಗಳಿಗೆ ಬ್ರೆಡ್ಡು ಹಣ್ಣು ವಿತರಣೆ, ಆಟೋ ನಿಲ್ದಾಣದ ಮೇಲ್ಛಾವಣಿ ಸ್ಥಾಪನೆ, ಬೀದಿಬದಿ ವ್ಯಾಪಾರಿಗಳಿಗೆ ಛತ್ರಿಗಳು, ರಸ್ತೆ ಮಾರ್ಗಸೂಚನಾ ಫಲಕದ ಭೂಮಿಪೂಜೆ, ಸರ್ಕಾರಿ ಶಾಲೆಗಳಿಗೆ ತಟ್ಟೆ, ಲೋಟ ಹಾಗೂ ಕಲಿಕೋಪಕರಣಗಳು, ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಫ್ಯಾನ್, ವ್ಹೀಲ್ ಛೇರ್ ಹಾಗೂ ಆಹಾರ ವಿತರಣೆ, ಜನ ಜಾಗೃತಿ ಗೋಡೆ ಬರಹ ಸೇರಿದಂತೆ 33 ಕ್ಕೂ ಹೆಚ್ಚು ಸಮಾಜ ಮುಖಿ ಚಟುವಟಿಕೆಗಳನ್ನು ಬೆಳಗಿನಿಂದ ಸಂಜೆವರೆಗೆ ನಡೆಸಿ ದಾಖಲೆ ನಿರ್ಮಿಸಿರುವುದು ಹರ್ಷ ತಂದಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.