ADVERTISEMENT

ಪಾವಗಡ: 28 ಸಾವಿರ ಕಿ.ಮೀ ರಸ್ತೆ ಮೇಲ್ದರ್ಜೆಗೆ

ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 9:07 IST
Last Updated 6 ಜೂನ್ 2020, 9:07 IST
ಪಾವಗಡ ತುಮಕೂರು ರಸ್ತೆಯಲ್ಲಿರುವ ಅಂಬೇಡ್ಕರ್ ಭವನವನ್ನು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಉದ್ಘಾಟಿಸಿದರು
ಪಾವಗಡ ತುಮಕೂರು ರಸ್ತೆಯಲ್ಲಿರುವ ಅಂಬೇಡ್ಕರ್ ಭವನವನ್ನು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಉದ್ಘಾಟಿಸಿದರು   

ಪಾವಗಡ: ರಾಜ್ಯದಲ್ಲಿ 28 ಸಾವಿರ ಕಿ.ಮೀ ಉದ್ದದಷ್ಟು ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ತಿಳಿಸಿದರು.

ಪಟ್ಟಣದಲ್ಲಿ ವಿವಿಧ ಇಲಾಖೆಗಳ ಕಾಮಗಾರಿ, ಶಂಕುಸ್ಥಾಪನೆ ನೆರವೇರಿಸಿ ಕೊಡಮಡುಗು ಸರ್ಕಾರಿ ಪ್ರೌಢಶಾಲೆ ಬಳಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

10 ವರ್ಷಗಳಿಂದ ರಸ್ತೆ ಮೇಲ್ದರ್ಜೆಗೆ ಒಳಪಟ್ಟಿರಲಿಲ್ಲ. ಹೀಗಾಗಿ, 18 ಸಾವಿರ ಕಿ.ಮೀ ಹಳ್ಳಿ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳಾಗಿ, 10 ಸಾವಿರ ಕಿ.ಮೀ. ಜಿಲ್ಲಾ ರಸ್ತೆಗಳನ್ನು ರಾಜ್ಯ ರಸ್ತೆಗಳಾಗಿ ಉನ್ನತೀಕರಿಸಲಾಗುವುದು ಎಂದರು.

ADVERTISEMENT

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪರಿಶಿಷ್ಟ ಜಾತಿ, ಪಂಗಡದವರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದಾರೆ. 2019-20ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗಾಗಿ ಹೆಚ್ಚು ಖರ್ಚು ಮಾಡಿ ಶೇ 92ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

36 ಇಲಾಖೆಗಳಿಗೆ ಅನುದಾನ ಮಂಜೂರು ಮಾಡಿ ಕ್ರಿಯಾ ಯೋಜನೆ ಸಿದ್ಧದಪಡಿಸಲು ಅನುಮೋದಿಸಲಾಗಿದೆ. ಶೀಘ್ರ ಈ ಸಾಲಿನ ಕಾರ್ಯಕ್ರಮಗಳು ಚಾಲನೆಯಾಗುತ್ತವೆ ಎಂದರು.

ಲೋಕೋಪಯೋಗಿ ಇಲಾಖೆಯಲ್ಲಿ ಅಧಿಕಾರಿಗಳಿಗೆ ಮುಂಬಡ್ತಿ ನೀಡಿದ್ದರಿಂದ 1,025 ಜೂನಿಯರ್, ಸಹಾಯಕ ಎಂಜಿನಿಯರ್ ಹುದ್ದೆಗಳು ಖಾಲಿ ಇವೆ. ಡಿಪ್ಲೊಮಾ ಸಿವಿಲ್, ಬಿಇ ಸಿವಿಲ್ ಪದವೀಧರರನ್ನು ಟ್ರೈನಿ ಎಂಜಿನಿಯರ್‌ಗಳಾಗಿ ಕೆಲಸಕ್ಕೆ ತೆಗೆದುಕೊಳ್ಳಲಾಗುವುದು ಎಂದರು.

ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲೆಯಲ್ಲಿ 42 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅರಣ್ಯೀಕರಣದಿಂದ ನೀರಿನ ಬವಣೆ ತಪ್ಪಿಸಬಹುದು ಎಂದರು.

ಶಾಸಕ ವೆಂಕಟರವಣಪ್ಪ, ವೇದಿಕೆ ಕಾರ್ಯಕ್ರಮಗಳನ್ನು ರದ್ದುಪಡಿಸಿ ರುವುದು ಜನತೆಗೆ ಬೇರಸ ತಂದಿದೆ. ಮುಂದಿನ ದಿನಗಳಲ್ಲಿ ₹50 ಕೋಟಿ ವೆಚ್ಚದ ಕಟ್ಟಗಳ ಉದ್ಘಾಟನೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲಾಗುವುದು. ಜನ ಉತ್ಸಾಹ ಕಳೆದುಕೊಳ್ಳಬಾರದು ಎಂದರು.

ಲೋಕಸಭೆ ಸದಸ್ಯ ಎ.ನಾರಾಯಣ ಸ್ವಾಮಿ, ಶಾಸಕ ನಾರಾಯಣಸ್ವಾಮಿ, ಜಿ.ಪಂ. ಉಪಾಧ್ಯಕ್ಷೆ ಶಾರದಾ ನರಸಿಂಹ ಮೂರ್ತಿ, ಸದಸ್ಯ ಎಚ್.ವಿ.ವೆಂಕಟೇಶ್, ಚನ್ನಮಲ್ಲಯ್ಯ, ಗಾಯತ್ರಿಬಾಯಿ, ಗೌರಮ್ಮ, ಪಾಪಣ್ಣ, ತಾ.ಪಂ. ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ನಾಗರಾಜು, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.