
ತುಮಕೂರಿನಲ್ಲಿ ಭಾನುವಾರ ಲೇಖಕಿಯರ ಸಂಘದಿಂದ ಕಥೆ, ಕವನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತುಮಕೂರು: ಮುಂದಿನ ಆಗಸ್ಟ್– ಸೆಪ್ಟೆಂಬರ್ ತಿಂಗಳಲ್ಲಿ ನಗರದಲ್ಲಿ ಲೇಖಕಿಯರ ರಾಜ್ಯ ಸಮ್ಮೇಳನ ನಡೆಸಲಾಗುವುದು ಎಂದು ಲೇಖಕಿಯರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಆರ್.ಸುನಂದಮ್ಮ ಹೇಳಿದರು.
ನಗರದಲ್ಲಿ ಭಾನುವಾರ ಲೇಖಕಿಯರ ಸಂಘದಿಂದ ಹಮ್ಮಿಕೊಂಡಿದ್ದ ನಾಗರತ್ನಮ್ಮ ಅ.ನಾ.ಶೆಟ್ಟಿ ದತ್ತಿ ಕಥಾ ಸ್ಪರ್ಧೆ, ಲಕ್ಷ್ಮಿದೇವಮ್ಮ ಗೋವಿಂದಯ್ಯ ದತ್ತಿ ಕವನ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎರಡು ದಿನಗಳ ಕಾಲ ಸಮ್ಮೇಳನ ನಡೆಯಲಿದೆ. ಜಿಲ್ಲೆಯಲ್ಲಿ ಸಕ್ರಿಯ ಲೇಖಕಿಯರು ಇದ್ದಾರೆ. ಅವರ ಬಗ್ಗೆ ವಿಶೇಷ ಲೇಖನ, ವಿಮರ್ಶೆ ತಯಾರಿಸಿ ವಿಶೇಷ ಸಂಚಿಕೆ ಮಾಡಲಾಗುವುದು. ಸಂಚಿಕೆಗೆ ಜಾಹೀರಾತು ಪಡೆದು ಆ ಹಣ ಸಮ್ಮೇಳನಕ್ಕೆ ಬಳಸಲಾಗುವುದು. ಅನುದಾನ ಒದಗಿಸುವಂತೆ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡರು.
ಮುಂದಿನ ತಿಂಗಳಿಂದ ಲೇಖಕಿಯರ ಸಂಘದ ಬೈಲಾ ತಿದ್ದುಪಡಿ ಸಂಬಂಧ ಚಟುವಟಿಕೆಗಳು ಶುರುವಾಗಲಿವೆ. ಸದಸ್ಯತ್ವ ಹಣವನ್ನು ಜಿಲ್ಲೆ ಮತ್ತು ರಾಜ್ಯ ಶಾಖೆಗಳು ತಲಾ ಶೇ 50 ರಷ್ಟು ಪಡೆದು, ಸಂಘದ ಹೆಸರಿನಲ್ಲಿ ಬ್ಯಾಂಕ್ನಲ್ಲಿ ಠೇವಣಿ ಇಡಬೇಕು. ಇಂತಹ ಅನೇಕ ಅಂಶಗಳನ್ನು ಬೈಲಾದಲ್ಲಿ ಸೇರಿಸಲಾಗುವುದು. ಸಂಘದಿಂದ ಪ್ರಶಸ್ತಿ ಪ್ರದಾನ ಸಮಾರಂಭದ ಜತೆಗೆ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಮಹಿಳೆಯರ ಜ್ಞಾನಕ್ಕೆ ಆತ್ಮವಿಶ್ವಾಸ ತುಂಬುವ ಕೆಲಸವಾಗುತ್ತಿದೆ ಎಂದು ತಿಳಿಸಿದರು.
ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ‘ನಮ್ಮ ವೈಯಕ್ತಿಕ ಭಿನ್ನಾಭಿಪ್ರಾಯ ಏನೇ ಇದ್ದರೂ ಸಾಮಾನ್ಯ ಕಾರಣಗಳಿಗಾಗಿ ಎಲ್ಲರ ಜತೆಗೆ ಕೈಜೋಡಿಸಬೇಕು. ಎಲ್ಲರನ್ನು ಜೊತೆಗೂಡಿಸಿಕೊಂಡು ಹೋಗುವವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಉತ್ತಮ’ ಎಂದು ಸಲಹೆ ಮಾಡಿದರು.
ಲೇಖಕಿಯರಾದ ಬಾ.ಹ.ರಮಾಕುಮಾರಿ, ಶಶಿಕಲಾ ಚಂದ್ರಶೇಖರ್, ಸಿ.ಎ.ಇಂದಿರಾ, ಸಹ ಪ್ರಾಧ್ಯಾಪಕಿ ಗೀತಾ ವಸಂತ, ಪತ್ರಕರ್ತ ಎಸ್.ನಾಗಣ್ಣ ಪಾಲ್ಗೊಂಡಿದ್ದರು.
ಸುನಂದಮ್ಮ ಸಂಘದ ಚುನಾವಣಾ ಖರ್ಚು ತಗ್ಗಿಸಲು ಮತದಾನ ಪ್ರಮಾಣ ಹೆಚ್ಚಿಸಲು ಮುಂದಿನ ದಿನಗಳಲ್ಲಿ ಇ–ಮತದಾನಕ್ಕೆ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಬೈಲಾದಲ್ಲಿ ಅಗತ್ಯ ತಿದ್ದುಪಡಿ ತರಲಾಗುವುದು ಎಂದು ಲೇಖಕಿಯರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಆರ್.ಸುನಂದಮ್ಮ ಹೇಳಿದರು. ಸರ್ಕಾರದಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಕೋಟಿ ಕೋಟಿ ಅನುದಾನ ಸಿಗುತ್ತಿದೆ. ಹಲವು ವರ್ಷಗಳಿಂದ ಕೇಳುತ್ತಿದ್ದರೂ ಲೇಖಕಿಯರ ಸಂಘಕ್ಕೆ ಒಂದು ಜಾಗ ಕೊಡುತ್ತಿಲ್ಲ. ನಾವು ರಾಜಕಾರಣ ಮಾಡುವುದರಲ್ಲಿ ಹಿಂದೆ ಬಿದ್ದಿದ್ದೇವೆ. ಧೈರ್ಯ ಮತ್ತು ಮುಕ್ತವಾಗಿ ಹಕ್ಕು ಕೇಳಬೇಕು. ರಾಜ್ಯ ರಾಜಕಾರಣಕ್ಕೆ ನಮ್ಮ ಶಕ್ತಿ ತಿಳಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.